ಬಾಗಲಕೋಟೆ: ಹಳೆಯ ದ್ವೇಷದ ಹಿನ್ನೆಲೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಮೀಪದ ದಾದನಟ್ಟಿ ಗ್ರಾಮದಲ್ಲಿ ನಡೆದಿದೆ. ದಾದನಟ್ಟಿ ಗ್ರಾಮದ ಸಚಿನ್ ಸೋಕನಾದಗಿ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಸಂಬಂಧಿಕರ ಮದುವೆ ಆಹ್ವಾನ ಪತ್ರಿಕೆ ವಿತರಿಸಲು ತೆರಳುತ್ತಿದ್ದ ವೇಳೆ ಸಚಿನ್ ಅವರನ್ನು ಆರೋಪಿಗಳ ತಂಡ ಅಪಹರಿಸಿ, ಮನಬಂದಂತೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಬಳಿಕ ಗಾಯಗೊಂಡಿದ್ದ ಅವರನ್ನು ಕುಳಗೇರಿ ಕ್ರಾಸ್ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ.
ಈ ಹಿಂದೆ ಸಚಿನ್ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದ್ದು, ಬಳಿಕ ರಾಜಿ ಸಂಧಾನ ಮಾಡಲಾಗಿತ್ತು. ಆದರೂ ಹಳೆಯ ದ್ವೇಷವನ್ನು ಮುಂದುವರಿಸಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಸಚಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




