ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ: ಎಸ್.ಪಿ ಉಮಾ ಪ್ರಶಾಂತ್
ದಾವಣಗೆರೆ: ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುತ್ತ ಸದಾ ಒತ್ತಡದ ಬದುಕು ನಡೆಸುವ ಪೊಲೀಸರಿಗೆ ವಾರ್ಷಿಕ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಜಿಲ್ಲಾ ಪೊಲೀಸ್ ಕ್ರೀಡಾಕೂಟವನ್ನು ನವೆಂಬರ್ 22 ರವರೆಗೆ ಆಯೋಜಿಸಲಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ತಮ್ಮ ಮನಸ್ಸಿನ ಶಾಂತತೆ, ಆರೋಗ್ಯಪೂರ್ಣ ಜೀವನವನ್ನು ನಡೆಸಬೇಕಾದರೆ ಕ್ರೀಡೆ ಅಗತ್ಯವಾಗಿದೆ. ಕ್ರೀಡೆಗಳ ಸದೃಢವಾದ ದೇಹ ಮತ್ತು ಮನಸ್ಸನ್ನು ಹೊಂದುವ ಮೂಲಕ ಜೀವನವನ್ನು ಅತ್ಯುತ್ತಮಪಡಿಸಿಕೊಳ್ಳಬೇಕಾಗಿದೆ ಎಂದರು.
ಎಲ್ಲಾ ಪೊಲೀಸರು ಬಿಡುವಿಲ್ಲದೆ 24X7 ಒತ್ತಡದ ವಾತಾವರಣದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ಹಾಗಾಗಿ ತಮ್ಮ ಆರೋಗ್ಯದ ಬದುಕನ್ನು ಸಾಗಿಸಲು ಕ್ರೀಡೆ ಸಹಕಾರಿಯಾಗಿದೆ. ಮನುಷ್ಯ ಸದೃಢ ಹಾಗೂ ಆರೋಗ್ಯಕರವಾಗಿದ್ದಾಗ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ. ಈ ವಾರ್ಷಿಕ ಕ್ರೀಡೆಯನ್ನು ಮೂರು ದಿನಗಳಿಗೆ ಸೀಮಿತಗೊಳಿಸದೆ, ತಮ್ಮ ದಿನಿತ್ಯದ ಚಟುವಟಿಕೆಯಾಗಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಬದಲಾಗಿ ಭಾಗವಹಿಸುವುದು ಬಹು ಮುಖ್ಯವಾಗಿರುತ್ತದೆ ಎಂದರು.
ಪಥ ಸಂಚಲನ: ಜಿಲ್ಲಾ ಪೊಲೀಸ್ ಕ್ರೀಡಾಕೂಟ ನಿಮಿತ್ತ ಡಿ.ಎ.ಆರ್ ತಂಡ, ನಗರ ಉಪ ವಿಭಾಗ, ದಾವಣಗೆರೆ ಗ್ರಾಮಾಂತರ, ಚನ್ನಗಿರಿ ಉಪ ವಿಭಾಗ ಹಾಗೂ ಮಹಿಳಾ ಪೊಲೀಸ್ ತಂಡಗಳು ಪಥ ಸಂಚನದಲ್ಲಿ ಭಾಗವಹಿಸಿದ್ದವು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಅರ್ಜುನ್ ಹಾಗೂ ಡಿ.ವೈ.ಎಸ್.ಪಿ ಪ್ರಕಾಶ್ ಪಿ.ಬಿ ಉಪಸ್ಥಿತರಿದ್ದರು.




