ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

1 year ago

ಚಿತ್ರದುರ್ಗ: ಅಲೆಮಾರಿ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಾಗೂ ಶೃೆಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ ಎಂದು ಕರ್ನಾಟಕ  ಶಾಂತಿ & ಸೌಹಾರ್ದ  ಒಕ್ಕೂಟದ ಅಧ್ಯಕ್ಷ  ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.

ಕರ್ನಾಟಕ ಶಾಂತಿ & ಸೌಹಾರ್ದ ಒಕ್ಕೂಟ, ಅಲೆಮಾರಿ, ಅರೆ-ಅಲೆಮಾರಿ ಸಂಘಟನೆಗಳ ಒಕ್ಕೂಟ ಮತ್ತು ಬುಡ್ಗ ಜಂಗಮ ಜನಾಂಗದ ಸಂಘಟನೆಗಳ ವತಿಯಿಂದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಇಂದಿಗೂ ಕೂಡ ಅಲೆಮಾರಿಗಳು ಜೀತ, ಚಿಂದಿ ಆಯುವುದು, ಭಿಕ್ಷೆ  ಬೇಡುವುದನ್ನು ವೃತ್ತಿ ಮಾಡಿಕೊಂಡಿದ್ದು ಸರ್ಕಾರಗಳು ನಿರಂತರವಾಗಿ ಈ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ಆರೋಪಿಸಿದರು.

ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ  ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಕನಿಷ್ಠ 200 ಕೋಟಿ ಹಣವನ್ನು ಬಜೆಟ್ ನಲ್ಲಿ ನಿಗದಿಗೊಳಿಸಿದರೆ ಈ ಸಮುದಾಯಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು.

ಸುಡುಗಾಡ ಸಿದ್ದ, ಬುಡ್ಗ ಜಂಗಮ, ಹಂದಿ ಜೋಗಿಗಳು, ಸಿಳ್ಳೇಕ್ಯಾತರು ಮತ್ತು  ಇತರೆ ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದು ಅಗತ್ಯವಿದೆ  ಎಂದರು.

ಅಲೆಮಾರಿ ಸಮುದಾಯ ವಾಸವಾಗಿರುವ ಕಾಲೋನಿಗಳನ್ನು ಟೆಂಟ್ ಮುಕ್ತ  ಕಾಲೋನಿಗಳಾಗಿ ಮಾರ್ಪಾಡು ಮಾಡಬೇಕು. ಹಾಗೆಯೇ ಅಲೆಮಾರಿ ಸಮುದಾಯಗಳನ್ನು ಮನುಷ್ಯರಂತೆ ಪರಿಗಣಿಸಿ ಶುದ್ಧ  ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ದೀಪಗಳ ವ್ಯವಸ್ಥೆ  ಮಾಡುವುದು ಸರ್ಕಾರ ಜವಾಬ್ದಾರಿ ಆಗಿದ್ದು ಇದನ್ನು ಕಡ್ಡಾಯವಾಗಿ ಮಾಡಬೇಕೆಂದು ಆಗ್ರಹಿಸಿದರು.

ಅಲೆಮಾರಿ – ಅರೆ ಅಲೆಮಾರಿ ಪರಿಶಿಷ್ಟ ಜಾತಿ, ಬುಡಕಟ್ಟು  ಮಹಾಸಭಾದ ಜಿಲ್ಲಾ ಅಧ್ಯಕ್ಷ  ಕೆ.ಎಂ.ನಾಗರಾಜ್ ಮಾತನಾಡಿ, 2016-17ರಲ್ಲಿ ಅಂದಿನ ಸರ್ಕಾರ 130 ಕೋಟಿ ಬಿಡುಗಡೆ ಮಾಡಿ ಅಲೆಮಾರಿಗಳಿಗೆ ಸಾಲಸೌಲಭ್ಯ ನೀಡುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಅಧಿಕಾರಕ್ಕೆ ಬಂದ ಸರ್ಕಾರ ಅಲೆಮಾರಿಗಳನ್ನು ಸಂಪೂರ್ಣ ಕಡೆಗಣಿಸಿರುವುದು ವಿಷಾದಕರ ಎಂದರು.

ರಾಜ್ಯ ಸರ್ಕಾರ ಅಲೆಮಾರಿಗಳ ಕಾಲೋನಿ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೆ.ಎಂ.ನಾಗರಾಜ್  ಸರ್ಕಾರವನ್ನು  ಒತ್ತಾಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ  ಬುಡ್ಗ ಜಂಗಮ ಜನಾಂಗದ  ಮುಖಂಡರಾದ ವಸಂತಕುಮಾರ್, ಚೆನ್ನದಾಸ ಜನಾಂಗದ  ಮುಖಂಡರಾದ ನಾಗರಾಜ್, ಸುಡಗಾಡ ಸಿದ್ದ ಜನಾಂಗದ  ಮುಖಂಡರಾದ ಬಾಬು ಹಾಜರಿದ್ದರು.

Leave a Reply