ಗ್ರಾಮಾಭಿವೃದ್ಧಿಯಿಂದ ಮಾತ್ರ ದೇಶಾಭಿವೃದ್ಧಿ ಸಾಧ್ಯ: ವೈ.ರವಿಕುಮಾರ್

1 year ago

ಹೆಚ್ಚು ಕರ ಸಂಗ್ರಹಿಸಿದ ಪಿಡಿಒಗಳಿಗೆ ಸನ್ಮಾನ

ಚಿತ್ರದುರ್ಗ: ಗ್ರಾಮದ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ  ಸಭಾಂಗಣದಲ್ಲಿ ಚಿತ್ರದುರ್ಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಹಾಗಾಗಿ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಉತ್ತಮ ಅನುಷ್ಠಾನಕ್ಕೆ ಈ ಹೊಸ ವರ್ಷದ ದಿನ ಕಟಿಬದ್ಧರಾಗಬೇಕು. ಉತ್ತಮ ಕರ ವಸೂಲಿ ಮಾಡಿರುವ ಗ್ರಾಮ ಪಂಚಾಯಿತಿಳಂತೆ ಇತರೆ ಗ್ರಾಮ ಪಂಚಾಯಿತಿಗಳೂ ಉತ್ತಮ ಸಾಧನೆ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿ ತೆರಿಗೆಯಿಂದ ಸಂಗ್ರಹಿಸುವ ಆದಾಯವನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ, ಗ್ರಾಮದ ಅಭಿವೃದ್ಧಿಗೆ ಮತ್ತು ಅಲ್ಲಿನ ನಿವಾಸಿಗಳ ಮೂಲಭೂತ ಸೇವೆ ಒದಗಿಸಲು ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಸೂಚನೆಯಂತೆ ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ಸಿಬ್ಬಂದಿಗಳೂ ಕಳೆದ ಒಂದು ತಿಂಗಳಿಂದ ಅಭಿಯಾನದ ರೂಪದಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ತಾಲ್ಲೂಕಿನ ರೂ. 12,44,11,412/-ಗಳ ಒಟ್ಟು ಬೇಡಿಕೆಯಲ್ಲಿ ರೂ.6,68,06,208/- ಕರ ವಸೂಲಿಯಾಗಿ ಡಿಸೆಂಬರ್ ಅಂತ್ಯಕ್ಕೆ ಶೇ.53.70 ಕರ ವಸೂಲಾಗಿದೆ ಎಂದರು.

ಜಿ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ಮಾತನಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಯವೈಖರಿ ಹಾಗೂ ದಿನಂಪ್ರತಿ ಜನರ ಮನವೊಲಿಸುವಿಕೆಯಿಂದ, ಅಲ್ಲದೆ ಗ್ರಾಮ ಪಂಚಾಯತಿಯ ಆಡಳಿತ ಸದಸ್ಯರ ಸಹಕಾರದಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಿ ಮಾಡಿರುವ ಆಲಗಟ್ಟ (ಶೇ.82.98), ಇಂಗಳದಾಳ್(ಶೇ.87.29), ಜಿ.ಆರ್.ಹಳ್ಳಿ(ಶೇ.84.47) ಮತ್ತು ಮಾಡನಾಯಕನಹಳ್ಳಿ (ಶೇ.86.28) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಪ್ರಮುಖವಾಗಿ ಬಿಲ್ ಕಲೆಕ್ಟರ್ಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಕೆಂಚಪ್ಪ, ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ನರೇಗಾ ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ ಮತ್ತು ರೂಪಾ ಕುಮಾರಿ, ವ್ಯವಸ್ಥಾಪಕ ಇರ್ಫಾನ್, ಪಿಡಿಒ ಮಹಾಲಕ್ಷ್ಮಿ, ನಾಸೀರ್, ಎಂಐಎಸ್ ಸಂಯೋಜಕ ಉಮೇಶ್, ಐಇಸಿ ಸಂಯೋಜಕ ಸತ್ಯನಾರಾಯಣ, ಚಿತ್ರದುರ್ಗ ತಾಲ್ಲೂಕಿನ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್ಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

Leave a Reply