ಬಾಲಕಾರ್ಮಿಕ, ಸಮಸ್ಯೆ ಮುಕ್ತ ಗ್ರಾಮಗಳನ್ನು ರೂಪಿಸುವ ಸಂಕಲ್ಪ: ಎನ್.ರಘುಮೂರ್ತಿ

4 years ago

ಚಿತ್ರದುರ್ಗ: ಗ್ರಾಮೀಣ ಪ್ರದೇಶಗಳು ಬಾಲ್ಯವಿವಾಹ, ಬಾಲಕಾರ್ಮಿಕ ಮತ್ತು ಸಮಸ್ಯೆ ಮುಕ್ತ ಗ್ರಾಮಗಳಾಗಿ ರೂಪಗೊಂಡಾಗ ಮಾತ್ರ ನೈಜ ಗ್ರಾಮಗಳನ್ನು ಕಾಣಲೂ ಸಾಧ್ಯ ಎಂದು ಚಳ್ಳಕೆರೆ ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದರು.

ನಾಯಕನಹಟ್ಟಿ ಹೋಬಳಿ ಎನ್.ದೇವರಹಳ್ಳಿ ಗ್ರಾಮದಲ್ಲಿ ವಿಸ್ತಾರ, ಬೆಂಗಳೂರು, ವಿಮುಕ್ತಿ ವಿದ್ಯಾ ಸಂಸ್ಥೆ, ಚಿತ್ರದುರ್ಗ, ಸಾರ್ವಜನಿಕ ಶಿಕ್ಷಣ ಇಲಾಖೆ, ದೇವರಹಳ್ಳಿ ಗ್ರಾಮ ಪಂಚಾಯಿತಿ ಇವರ ವತಿಯಿಂದ ಶಾಲಾ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು, ಎನ್.ದೇವರಹಳ್ಳಿ ಗ್ರಾಮದಲ್ಲಿ ಇರುವಂತಹ ಅಲೆಮಾರಿಗಳು ಮತ್ತು ಅಲೆಮಾರಿಗಳ ಮಕ್ಕಳ ಸಮಸ್ಯೆ ಹಾಗೂ ಸವಾಲುಗಳನ್ನು ಅರ್ಥೈಸಿಕೊಂಡು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಮತ್ತುಅತೀ ಶೀಘ್ರದಲ್ಲಿ ದೇವರಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ತಂಡದ ಜೊತೆ ಬಂದು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.

ಚಳ್ಳಕೆರೆ ತಾಲ್ಲೂಕು ಬಿಇಓ ಸುರೇಶ್ ಮಾತನಾಡಿ, ಅಲೆಮಾರಿ ಸುಮುದಾಯದ ಮಕ್ಕಳ ಗುಣಮಟ್ಟದ ಕುರಿತು ಸರ್ವೆ ಕಾರ್ಯ ನಡೆಸಿ ಬೇಸಿಗೆ ಸಮಯದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಬ್ರಿಜ್ ಸ್ಕೂಲ್ ನಡೆಸಲು ಉನ್ನತ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ ಎಂದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ ಹಾಗೂ ಮೂಲಭೂತ, ಜ್ವಲಂತ ಸಮಸ್ಯೆಗಳು ಜೀವಂತವಿದ್ದು ಪರಿಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಸ್ತಾರ ಸಂಸ್ಥೆಯ ಸಂಯೋಜಕ ಅರಣ್ಯ ಸಾಗರ್, ಟಿ.ಕುಮಾರ್, ಮರಿಪಾಲಯ್ಯ, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟಯ್ಯ, ಪಿಡಿಓ. ಮಾಲತೇಶ, ಮುಖ್ಯ ಶಿಕ್ಷಕ ಬಸವರಾಜ್ ಎಸ್ ಉರಿಗಡ್ಲೆ, ಡಿ.ಎಸ್.ಪಾಲಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.

Leave a Reply