ರಾಜ್ಯದಲ್ಲಿರುವ ಎಲ್ಲ ಜಮೀನುಗಳ ಮಾಲೀಕತ್ವದ ಮಾಹಿತಿ ಸಂಗ್ರಹಿಸಿ

1 year ago

ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಕ್ಫ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾಗುತ್ತಿದೆ. ಬಿಜೆಪಿ ಪಕ್ಷದವರು ಇದನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡು ಜನರ ನಡುವೆ ವಿಶ್ವಾಸವನ್ನು ಹಾಳು ಮಾಡುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಕೇವಲ ರಾಜಕಾರಣದ ಮತ್ತು ವೋಟಿನ ಹುಚ್ಚು ಹಿಡಿದಿದೆ. ಅದಕ್ಕಾಗಿ ಪ್ರತಿದಿನವೂ ಅನೇಕ ಗಂಭೀರ ಸಮಸ್ಯೆಗಳನ್ನ ಚರ್ಚಿಸದೆ ಇಂತಹ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣವನ್ನ ಮಾಡುತ್ತಿದ್ದಾರೆ. ನೆಮ್ಮದಿಯ ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ಆದುದರಿಂದ ರಾಜ್ಯ ಸರ್ಕಾರ ಕೂಡಲೇ ರಾಜ್ಯದಲ್ಲಿರುವ ಸರ್ಕಾರಿ ಜಮೀನು ಮತ್ತು ಇತರೆ ಎಲ್ಲ ಜಮೀನುಗಳ ಮಾಲೀಕತ್ವದ ಮಾಹಿತಿಯನ್ನು ತಾಲೂಕು ಮಟ್ಟದಲ್ಲಿ ಸಂಗ್ರಹಿಸಿ ಯಾವ ಯಾವ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಅರಿತುಕೊಂಡು ಎಲ್ಲಿ ಲೋಪಗಳಾಗಿದೆಯೋ ಅವುಗಳನ್ನ ಒಂದೇ ಬಾರಿಗೆ ಸರಿಪಡಿಸಿ ಸಮಾಜದಲ್ಲಿ ನೆಮ್ಮದಿಯ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಲಿ.

ಸರ್ಕಾರ ಸರಿಯಾದಂತಹ ಮಾಹಿತಿಯನ್ನ ಸಂಗ್ರಹಿಸಿ ಅಧಿಕಾರಿಗಳಿಂದ ಲೋಪಗಳಾಗಿದ್ದರೆ ಅದನ್ನು ಸರಿಪಡಿಸಿ ಜಮೀನಿನ ಮಾಲೀಕತ್ವದ ವಿಚಾರದಲ್ಲಿ ಇರುವಂತಹ ಗೊಂದಲವನ್ನ ಪರಿಹರಿಸುವಂತಹ ಕೆಲಸವನ್ನ ಮಾಡಿ. ಈ ಒಂದು ಕಾರ್ಯಕ್ಕೆ ಒಂದಷ್ಟು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿ. ಜಮೀನಿನ ಮಾಲೀಕತ್ವದ ಮಾಹಿತಿ ಬರುವ ತನಕ ಯಾವುದೇ ಜಮೀನಿನ ಮಾಲೀಕತ್ವದ ವರ್ಗಾವಣೆ ಅಥವಾ ಇತರೆ ದಾಖಲೆಗಳನ್ನು ನೀಡದಂತೆ ಆವೇಶವನ್ನು ಹೊರಡಿಸಿ.

ಈ ರೀತಿಯ ನಿರ್ದಿಷ್ಟವಾದ ಯೋಜನೆಯನ್ನು ರೂಪಿಸದೆ ಹೋದರೆ ಗೊಂದಲಗಳು ಪರಿಹಾರವಾಗುವುದೇ ಇಲ್ಲ. ಪದೇಪದೇ ರಾಜಕಾರಣ ಮಾಡುವ ಜನರು ಇದನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡು ನಾಯಕತ್ವವನ್ನು ರೂಪಿಸಿಕೊಳ್ಳಲು ಕಾಯುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಅಸ್ಪೃಶ್ಯತೆ, ಅಸಮಾನತೆ, ಬಡತನ ಯಾವುದೂ ಸಹ ಇವರಿಗೆ ಹೋರಾಟದ ವಿಷಯವೇ ಅಲ್ಲ. ಅನೇಕ ದೇವಾಲಯಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನೀಡದೆ ಅವಮಾನಿಸಿರುವ ಘಟನೆ, ಅಸ್ಪೃಶ್ಯರು ದೇವಾಲಯ ಪ್ರವೇಶ ಮಾಡಿದರೆಂದು ನಾಚಿಕೆ ಬರುವ ರೀತಿಯಲ್ಲಿ ವರ್ಗದ ಸಮಾಜದವರು ನಡೆದುಕೊಳ್ಳುತ್ತಿರುವ ರೀತಿಯ ಘಟನೆಗಳು ಪದೇಪದೇ ಸಂಭವಿಸುತ್ತಿದ್ದರು ಯಾವ ಮಠಾಧಿಪತಿಗಳು ಅಥವಾ ಹಿಂದೂ ಧರ್ಮವನ್ನ ಗುತ್ತಿಗೆ ಪಡೆದಿರುವ ನಾಯಕರುಗಳು ಬಾಯಿ ಬಿಡುವುದಿಲ್ಲ. ಎಲ್ಲರೂ ಹಿಂದುಗಳು ಎನ್ನುವ ಇವರಿಗೆ ಇಂತಹ ಘಟನೆಗಳು ಕಣ್ಣಿಗೆ ಕಾಣುವುದಿಲ್ಲ, ಕಿವಿಗೆ ಬೀಳುವುದಿಲ್ಲ, ಇಂತಹ ವಿಚಾರದಲ್ಲಿ ಜಾಣ ಕಿವುಡು, ಜಾಣ ಕುರುಡುತನವನ್ನು ಪ್ರದರ್ಶಿಸುತ್ತಾ ತಾವೇ ಬುದ್ದಿವಂತರಂತೆ ವರ್ತಿಸುತ್ತಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply