ಕಾಂಗ್ರೆಸ್ ಪ್ರದೇಶ ಉಸ್ತುವಾರಿಗಳ ಬದಲಾವಣೆ

1 year ago

ದೆಹಲಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಬದಲಾಯಿಸಲಾಗುತ್ತಿದೆಯೇ?  ಹೌದು ಎನ್ನುತ್ತವೆ ಕಾಂಗ್ರೆಸ್ಸಿನ ಉನ್ನತ ಮೂಲಗಳು. ಮಹಾರಾಷ್ಟ್ರ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಸಂಘಟನಾತ್ಮಕವಾಗಿ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ತೀರ್ಮಾನಿಸಿರುವ ಹೈಕಮಾಂಡ್, ರಾಜ್ಯಗಳ ಉಸ್ತುವಾರಿ ನಾಯಕರ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಆಧಾರದಲ್ಲಿ ಸುರ್ಜೇವಾಲ ಅವರನ್ನು ಕೂಡ ಬದಲಾಯಿಸಲಾಗುತ್ತಿದೆ.

ಹಲವು ರಾಜ್ಯಗಳಲ್ಲಿ ಹೊಸ ಉಸ್ತುವಾರಿಗಳನ್ನು ನೇಮಿಸಿದೆ. ಕರ್ನಾಟಕದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಹರಿಯಾಣ, ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಂಜಾಬ್, ಮೀನಾಕ್ಷಿ ನಟರಾಜನ್ ಅವರನ್ನು ತೆಲಂಗಾಣ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ ಅವರನ್ನು ಹಿಮಾಚಲ ಪ್ರದೇಶ ಮತ್ತು ಚಂಡೀಗಢದ ಎಐಸಿಸಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಇದೇ ಆಧಾರದಲ್ಲಿ ಸುರ್ಜೇವಾಲ ಅವರನ್ನು ಬದಲಾಯಿಸಿ ಕರ್ನಾಟಕಕ್ಕೆ ಬೇರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ. 

ಸುರ್ಜೇವಾಲ ಅವರು ತಮ್ಮನ್ನು ಹರಿಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದ್ದು, ಅದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಉಸ್ತುವಾರಿ ಸ್ಥಾನದಿಂದ ಅವರನ್ನು ಬದಲಾಯಿಸಲಾಗುತ್ತಿದೆ.

Leave a Reply