ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ

1 year ago

ಬೆಂಗಳೂರು: ನಾಯಕತ್ವ ಬದಲಾವಣೆ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರ ನೇಮಕ ಸೇರಿದಂತೆ ಹಲವಾರು ವಿಚಾರಗಳ ಕುರಿತು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರಾದ ಕೆ ಜೆ ಜಾರ್ಜ್, ಎಂ ಬಿ ಪಾಟೀಲ್ ಮತ್ತು ಬೈರತಿ ಬಸವರಾಜ್ ಅವರೊಂದಿಗೆ ದೆಹಲಿಗೆ ತೆರಳಿದ್ದು,  ಡಿಸಿಎಂ ಡಿ ಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಹಾಗೂ ರಣದೀಪ್‌ಸಿಂಗ್‌ ಸುರ್ಜೇವಾಲ ಅವರೊಂದಿಗೆ ಸಿಎಂ, ಡಿಸಿಎಂ ನಾಳೆ ನಡೆಸಲಿರುವ ಸಭೆ ಅತ್ಯಂತ ನಿರ್ಣಾಯಕ ಎಂದು ಹೇಳಲಾಗುತ್ತಿದೆ.

ವಿದೇಶ ಪ್ರವಾಸದಿಂದ ವಾಪಸಾಗಿರುವ ರಾಹುಲ್‌ಗಾಂಧಿ, ಬಿಹಾರ ಸಮಾವೇಶಕ್ಕಾಗಿ ಪಾರ್ಟ್ನಾಕ್ಕೆ ತೆರಳಿದ್ದಾರೆ. ತಡರಾತ್ರಿ ಅವರು ದೆಹಲಿಗೆ ಹಿಂದಿರುಗುತ್ತಿದ್ದು ಅವರ ಜತೆ ಸಿಎಂ- ಡಿಸಿಎಂ, ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲ ಸಭೆ ನಡೆಸಲಿದ್ದಾರೆ.

ಪಕ್ಷದ ಶಾಸಕರ ಅಹವಾಲು ಆಲಿಸಲು ದೆಹಲಿಯಿಂದ ಆಗಮಿಸಿದ್ದ ಸುರ್ಜೇವಾಲ ಅವರು 104 ಜನ ಶಾಸಕರ ಅಭಿಪ್ರಾಯ ಆಲಿಸಿದ್ದು, ವರದಿ ಸಿದ್ದಪಡಿಸಿದ್ದಾರೆ. ಅದರೊಂದಿಗೆ ಅವರು ದೆಹಲಿ ತಲುಪುತ್ತಿದ್ದು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ದೆಹಲಿಗೆ ತೆರಳುತ್ತಿದ್ದು, ಸಭೆಯ ನೇತೃತ್ವ ವಹಿಸುತ್ತಿದ್ದಾರೆ.
ಈ ಸಭೆಯಲ್ಲಿ ವಿಧಾನ ಪರಿಷತ್ತಿಗೆ ನಾಲ್ವರ ನಾಮನಿರ್ದೇಶನ, ನಿಗಮ, ಮಂಡಳಿಗಳಿಗೆ ನಿರ್ದೇಶಕರ ನೇಮಕ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಹುಲ್‌ ಗಾಂಧಿಯವರೊಂದಿಗಿನ ಸಭೆಗೂ ಮುನ್ನ ಸಿಎಂ, ಡಿಸಿಎಂ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್‌ ಅವರನ್ನು ಪ್ರತ್ಯೇಕ ಇಲ್ಲವೇ ಒಟ್ಟಿಗೆ ಭೇಟಿಯಾಗಿ ನಾಮನಿರ್ದೇಶನ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಿದ್ದಾರೆ.

Leave a Reply