ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ನಾಮನಿರ್ದೇಶನಗಳ ಆಹ್ವಾನ

2 years ago

ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳ ಅರ್ಜಿ ಆಹ್ವಾನ

ಬೆಂಗಳೂರು: ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ನೆನಪಿನಾರ್ಥ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.

“ವಡ್ಡರ್ಸೆ ರಘುರಾಮ ಶೆಟ್ಟಿ” ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಹಾಗೂ ಸಾರ್ವಜನಿಕರು, ಸಂಘ – ಸಂಸ್ಥೆಗಳು ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ.

ವಡ್ಡರ್ಸೆ ರಘುರಾಮಶೆಟ್ಟಿ ಅವರ ಪರಿಚಯ: ಓದುಗರ ಸಂಪಾದಕ ಎಂದೇ ಹೆಸರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು 1960ರ ದಶಕದಿಂದ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವದ ಸೇವೆಗೈದಿದ್ದಾರೆ. ಮಾಧ್ಯಮವು ವಾಣಿಜ್ಯೋದ್ಯಮಿಗಳ ಹಾಗೂ ಈ ರಂಗದ ಪರಿಚಯವಿಲ್ಲದವರ ಆಡುಂಬೊಲವಾಗಬಾರದು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಸಮಾಜದ ವಂಚನೆಯ ಜಾಲಗಳನ್ನು ಬಯಲಿಗೆಳೆಯುವ ಉದ್ದೇಶದಿಂದ 1984ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ “ಮುಂಗಾರು” ದಿನಪತ್ರಿಕೆಯನ್ನು ಪ್ರಾರಂಭಿಸಿ, ನಿರ್ಭೀತ ಬರಹಗಳ ಮೂಲಕ ಪತ್ರಿಕಾ ವೃತ್ತಿಯಲ್ಲಿ ಬದಲಾವಣೆಯನ್ನು ತಂದವರು. ಕನ್ನಡ ಪತ್ರಿಕೋದ್ಯಮದಲ್ಲಿ ದೀನದಲಿತರ ಹಾಗೂ ದುರ್ಬಲ ವರ್ಗದವರ ಪರವಾಗಿ ಧ್ವನಿಯೆತ್ತುವ, ದನಿಯಿಲ್ಲದವರ ದನಿಯಾಗಿದ್ದರು. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ಶ್ರಮಿಸಿದರು.

ಪ್ರಶಸ್ತಿಗೆ ಅರ್ಹತೆಗಳು: ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷ ಸೇವಾನುಭವ ಹೊಂದಿರಬೇಕು. ಹಿರಿಯರಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ನ್ಯಾಯದ ಕಾಳಜಿ ಹೊಂದಿರುವ 10 ರಿಂದ 15 ಲೇಖನಗಳು ಪ್ರಕಟವಾಗಿರಬೇಕು ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ವಿಶೇಷ ವರದಿ, ಚರ್ಚೆ, ಸಂವಾದ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿರ್ಮಿಸಿರಬೇಕು.

ನಾಮನಿರ್ದೇಶನಗಳನ್ನು ಸಲ್ಲಿಸಲು 2024ನೇ ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ.

ನಾಮನಿರ್ದೇಶನಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ), ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬಹುದು. 

Leave a Reply