ಕೈಮಗ್ಗ ರೇಷ್ಮೆ ಸೀರೆ ತಯಾರಿಕೆಯಲ್ಲಿ ವಿನೂತನ ದಾಖಲೆ ಬರೆದ ನೇಕಾರ ಆರ್.ಮಂಜುನಾಥ್

2 years ago

ಸರ್ಕಾರದ ಕೆಲಸ ಎಂದರೆ ಜನರ ಕೆಲಸ ಮಾಡುವುದು, ಕೈಮಗ್ಗ ಸಂಪ್ರದಾಯ ಉಳಿಸಲು ರಾಜ್ಯ ಸರ್ಕಾರ ಕ್ರಮ: ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತೆ ಜ್ಯೋತಿ

ಬೆಂಗಳೂರು: ಕೆ.ಎಲ್.ಇ. ಸಭಾಂಗಣದಲ್ಲಿ ಶ್ರೀ ಕಾಮಾಕ್ಷಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು  ಮಾರಾಟ ಸಹಕಾರ ಸಂಘದ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗ ರೇಷ್ಮೆ ಕ್ಷೇತ್ರದ ರಾಜ್ಯ ಪ್ರಥಮ ಪ್ರಶಸ್ತಿ-2024 ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಭಾಜನರಾದ ಆರ್. ಮಂಜುನಾಥ್ ಒಂದು ರೇಷ್ಮೆ ಅಮೃತವರ್ಷಿಣಿ ಸೀರೆಯಲ್ಲಿ 27,063 ಬುಟ್ಟಗಳನ್ನು ತಿರುವಿಕೆ ಮಾಡಿದ್ದು, ಇಂತಹ ನೈಪುಣ್ಯತೆಯು ಸರೋವರದಲ್ಲಿ ಅಲೆಗಳನ್ನು ಬಿಂಬಿಸುವಂತೆ ಭಾಸವಾಗುತ್ತದೆ. ಈ ವಿನೂತನ ಸೀರೆಯು ಇದೀಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಆಯ್ಕೆಯಾಗಿದೆ.

ಈ ಹಿನ್ನೆಲೆಯಲ್ಲಿ  ಆರ್. ಮಂಜುನಾಥ್‌ ರವರಿಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಪ್ರಮಾಣ ಪತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ರಾಜ್ಯ ಸರ್ಕಾರ ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕರಾದ ಕೆ. ಜ್ಯೋತಿ, ವಿನೂತನ ರೇಷ್ಮೆ ಸೀರೆ ತಯಾರಕ ಆರ್.ಮಂಜುನಾಥ್, ಇಂಡಿಯ ಬುಕ್ ರೆಕಾರ್ಡ್ ತೀರ್ಪುಗಾರ ಹರೀಶ್, ನೇಕಾರ ಸೇವಾ ಕೇಂದ್ರದ ಮಾರಿಮುತ್ತು, ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷ ಬಿ.ಜೆ.ಗಣೇಶ್, ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ಸೋಮಶೇಖರ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್, ಸಮಾಜ ಸೇವಕಿ ಸಂಗೀತಾ, ಬೈರಪ್ಪ ಸಿಲ್ಕ್ ಆಂಡ್ ಸ್ಯಾರೀಸ್ ಮಾಲಿಕ ಬಿ.ಈಶ್ವರಪ್ಪ , ಕೇಂದ್ರ ರೇಷ್ಮೆ ಇಲಾಖೆಯ ವಿಜ್ಞಾನಿ ಜಗದೀಶ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಕೆ.ಜ್ಯೋತಿ ಮಾತನಾಡಿ, ಸರ್ಕಾರದ ಕೆಲಸ ಎಂದರೆ ಜನರ ಕೆಲಸ ಮಾಡುವುದು ಎಂದರ್ಥ. ಜನರ ಮತ್ತು ಸರ್ಕಾರ ನಡುವೆ ಅಧಿಕಾರಿ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಎಂದರು.

ಕೈಮಗ್ಗ ಇಲಾಖೆಯಲ್ಲಿ ಹಲವಾರು ಯೋಜನೆಗಳು ಕೈಮಗ್ಗ ನೇಕಾರರಿಗೆ ಗೊತ್ತಿಲ್ಲ, ಅವರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

ಕೈಮಗ್ಗ ನೇಕಾರರು ಆರ್ಥಿಕವಾಗಿ ಸಬಲರಾಗಬೇಕು, ವಿನೂತನ ಪ್ರಯೋಗ ಆಗಬೇಕು. ನಮ್ಮ ಕೈಮಗ್ಗ ಸಂಪ್ರಾದಯ ಉಳಿಸಲು ಬೆಳಸಲು ಶ್ರಮಿಸುತ್ತಿರುವ ಹಿರಿಯರ ಶ್ರಮ ಅವಿಸ್ಮರಣಿಯ ಎಂದರು.

80 ಕೋಟಿ ರೂಪಾಯಿ ಅನುದಾನದಲ್ಲಿ  ಕೈಮಗ್ಗ ಮತ್ತು ಪವರ್ ಲೂಮ್ ನೇಕಾರರಿಗೆ ನೇಕಾರ ಸನ್ಮಾನ್ 5 ಸಾವಿರ ರೂಪಾಯಿ ಪ್ರತಿ ವರ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೈಮಗ್ಗ ಉಳಿಸಲು ನಮ್ಮ ಇಲಾಖೆ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಕೈಮಗ್ಗ ನಶಿಸಿ ಹೋಗದಂತೆ ತಡೆಯಲು 50 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕೈ ಮಗ್ಗ ಡಿಪ್ಲೋಮ ನೀಡಲಾಗುತ್ತಿದೆ. 1500 ಜನರಿಗೆ ಈ ವರ್ಷ ಅಲ್ಪಾವಧಿ ತರಬೇತಿ ನೀಡಲಾಗುವುದು ಎಂದರು.

ಕೈಮಗ್ಗ ಕಲಿಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ, ಕೈಮಗ್ಗ ಕಲೆಯ ಕುರಿತು ಕಾಲೇಜು ಸ್ಥಾಪಿಸಲಾಗಿದೆ ಕೈಮಗ್ಗ ಉಳಿವಿಗೆ ಸಹಕಾರಿಯಾಗಿದೆ ಎಂದರು.

ಆರ್.ಮಂಜುನಾಥ್ ಮಾತನಾಡಿ, ಪವರ್ ಲೂಮ್ ಬಂದಿರುವುದರಿಂದ ಕೈಮಗ್ಗ ಸ್ವಯಂ ಉದ್ಯೋಗ ನಶಿಸಿ ಹೋಗುತ್ತಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಮಗ್ಗ ಉಳಿವಿಗಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೈಮಗ್ಗದಲ್ಲಿ ಕೆಲಸ ಮಾಡಲು ಕಾರ್ಮಿಕರು ಮತ್ತು ಇದನ್ನ ನಂಬಿರುವವರು ಅನ್ಯ ಉದ್ಯೋಗದ ಕಡೆ  ಗಮನ ಹರಿಸುತ್ತಿದ್ದಾರೆ. ಕೈಮಗ್ಗ ಅತ್ಯಂತ ಪುರಾತನ ಉದ್ಯೋಗವಾಗಿದೆ, ಇದನ್ನ ಉಳಿಸಿ, ಬೆಳಸಬೇಕು. ಅಮೃತ್ ವರ್ಷಣಿ ಸೀರೆ ತಯಾರಿಸಲು 6 ತಿಂಗಳ ಅವಧಿ ಆಯಿತು ಎಂದರು.

Leave a Reply