ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕೈಬಿಟ್ಟು ಬಿಬಿಎಂಪಿ ಚುನಾವಣೆ ನಡೆಸಿ: ಅಮರೇಶ್

2 years ago

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕೈಬಿಟ್ಟು ಬಿಬಿಎಂಪಿ ಚುನಾವಣೆ ನಡೆಸಿ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಅಮರೇಶ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ (ಜಿಬಿಜಿ) ಹೆಸರಾಂತ ಸರ್ಕಾರೇತರ ಸಂಸ್ಥೆಯಾದ ಜನಾಗ್ರಹದ ತುಲನಾತ್ಮಕ ವಿಶ್ಲೇಷಣೆಯಲ್ಲಿ 10 ಅಂಕಗಳಿಗೆ ಕೇವಲ 3.30 ಅಂಕಗಳು ಸಾರ್ವಜನಿಕರಿಂದ ಲಭಿಸಿದೆ. ಜನಪ್ರಿಯ ಅಲ್ಲವೆಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಮಸೂದೆಯಲ್ಲಿ ಸ್ಪಂದನಾತ್ಮಕ ಮತ್ತು ಆಧುನಿಕ ಬೆಂಗಳೂರಿನಲ್ಲಿ ನಿರ್ಮಿಸಲು ಅಗತ್ಯವಾದ ಪ್ರಗತಿಪರ ಅಂಶಗಳಿಲ್ಲ ಎಂದು ನಾಗರಿಕರ ಅಭಿಪ್ರಾಯವಾಗಿದೆ. ಅಲ್ಲದೆ ಬ್ರ್ಯಾಂಡ್ ಬೆಂಗಳೂರು ಸಮಿತಿ ನೀಡಿದ್ದ ಹಲವು ಅಪೇಕ್ಷಣೀಯ ಶಿಫಾರಸ್ಸುಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿಬರುತ್ತಿದೆ ಎಂದಿದ್ದಾರೆ.

ನಾಗರಿಕರಿಗೆ ಗುಣಮಟ್ಟದ ಜೀವನ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಲು ಜಿಬಿಜಿ ಮಸೂದೆಯಲ್ಲಿ ಕಂಡುಬರುತ್ತಿಲ್ಲವೆಂದು ಅಭಿಪ್ರಾಯ ವ್ಯಕ್ತವಾಗಿದೆ. ಜಿಬಿಜಿ ಮಸೂದೆಯನ್ನು ಅವಲೋಕಿಸಿದಾಗ ಸುಪ್ರೀಂ ಕೋರ್ಟ್ ಚುನಾವಣೆ ಮಾಡಿ ಎಂದು ಆದೇಶಿಸುವುದೋ ಎಂಬ ಭಯದಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಕಾರಣಕ್ಕಾಗಿ ಸದರಿ ಜನಪ್ರಿಯವಲ್ಲದ ಜಿಬಿಜಿ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿದಂತೆ ಕಾಣುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

4 ವರ್ಷ ಕಳೆದರೂ ಚುನಾವಣೆ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ತಕ್ಷಣವೇ ಜಿಬಿಜಿ ಮಸೂದೆಯನ್ನು ಕೈಬಿಟ್ಟು ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply