ಸಿ ಎಂ ನರಸಿಂಹಮೂರ್ತಿ ಅವರಿಗೆ ಕದಂಬ ಕಲಾರಾಧಕ ರಾಜ್ಯಮಟ್ಟದ ಪ್ರಶಸ್ತಿ 

6 months ago

ಚಾಮರಾಜನಗರ: ಕನ್ನಡದ ಪ್ರಥಮ ರಾಜಧಾನಿ ಕದಂಬರ ನಾಡಿನಲ್ಲಿ ಚಾಮರಾಜನಗರದ ಸಾಂಸ್ಕೃತಿಕ ರಾಯಭಾರಿ ಹಾಗೂ ಅಂತರರಾಷ್ಟ್ರೀಯ ಜಾನಪದ ಗಾಯಕ  ಸಿ.ಎಂ.ನರಸಿಂಹಮೂರ್ತಿ ಅವರಿಗೆ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಕರ್ನಾಟಕ ಶಿರಸಿ-ಬನವಾಸಿ ವಾರ್ಷಿಕವಾಗಿ ಕೊಡಮಾಡುವ ಪ್ರತಿಷ್ಠಿತ ಕದಂಬ ಕಲಾರಾಧಕ-೨೦೨೫ ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿದೆ. 

ಶಿರಸಿಯ ಸುಪ್ರಸಿದ್ಧ ಪಂಚತಾರಾ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಕರ್ನಾಟಕ ಸಾರಥ್ಯದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಉ.ಕ ಘಟಕ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿ ಡಾ. ಕಾವೆಂಶ್ರೀ ಕಾವ್ಯಯಾನ-ಭಾವಗಾನ ೧ ಶತಕಂಠ ಗಾಯನ, ಕದಂಬ ರತ್ನಾಕರರ ಹೊನ್ನುಡಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಕದಂಬ ಕಲಾರಾಧಕ-೨೦೨೫ ರಾಜ್ಯಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕದಂಬ ರತ್ನಾಕರ, ತಹಶೀಲ್ದಾರ ಪಟ್ಟರಾಜ ಗೌಡ ಹಾಗೂ ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಸಿ ಎಂ ನರಸಿಂಹಮೂರ್ತಿ ಅವರ ಜೊತೆಗೆ  ಡಾ. ನಾಗರಾಜ ಬೈರಿ-ಮೈಸೂರು, ಪ್ರತಿಭಾಂಜಲಿ ಡೇವಿಡ್ – ಮಂಡ್ಯ ಶಾಂತಾ ಶೆಟ್ಟಿ- ಶಿವಮೊಗ್ಗ, ಗಣೇಶ್ ಶೆಣೈ- ದಾವಣಗೆರೆ ಹಾಗೂ ಎರ್ರಿಸ್ವಾಮಿ ಎಚ್- ಬೆಂಗಳೂರು ಇವರಿಗೂ ಇವರ ಸಾಂಸ್ಕೃತಿಕ ಸೇವೆಯನ್ನ ಪರಿಗಣಿಸಿ ಕದಂಬ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದುದ್ದಕ್ಕೂ ಡಾ. ಕಾವೆಂಶ್ರೀ ಗೀತೆಗಳು ಶತಕಂಠದನಿಯಲ್ಲಿ ಝೇಂಕರಿಸಿತು. ಬೇರೆ ಬೇರೆ ಜಿಲ್ಲೆಯಿಂದ ಬಂದಿದ್ದ ಗಾಯಕರು ಹಾಡಿ ಮೋಡಿ ಮಾಡಿದರು.

ವೇದಿಕೆಯಲ್ಲಿ ಶಿಕ್ಷಣ ತಜ್ಞ ಕೆ.ಎನ್.ಹೊಸ್ಮನಿ, ಡಾ. ವೆಂಕಟೇಶ ನಾಯ್ಕ, ಭೀಮಾಶಂಕರ್ ಕುಲಕರ್ಣಿ, ದಿವ್ಯಾ ಶೇಟ್ ಕದಂಬ ಹಾಗೂ ಜ್ಯೋತಿ ರತ್ನಾಕರ ಮುಂತಾದವರು ಉಪಸ್ಥಿತರಿದ್ದರು.

Leave a Reply