ಕರ್ನಾಟಕದ ಬಿಜೆಪಿ ನಾಯಕರ ಮೇಲೆ ಮೋದಿ-ಶಾಗೆ ಯಾಕಿಷ್ಟು ಜಿದ್ದು?

12 months ago

ಕರ್ನಾಟಕದ ಬಿಜೆಪಿ ನಾಯಕರ ಮೇಲೆ ಮೋದಿ-ಶಾಗೆ ಯಾಕಿಷ್ಟು ಜಿದ್ದು?

ಒಂದೊಂದಾಗಿ ನೋಡುವುದಾದರೆ,

• ರಾಜ್ಯ ಬಿಜೆಪಿ ನಾಯಕರು ದೇವೇಗೌಡರ ಫ್ಯಾಮಿಲಿಯನ್ನು ನಖಾಶಿಖಾಂತ ವಿರೋಧಿಸುತ್ತಾ, ಕುಮಾರಸ್ವಾಮಿಯ ಮಾನವನ್ನು ಮೂರುಕಾಸಿಗೆ ಹರಾಜು ಹಾಕುತ್ತಿದ್ದ ಸಂದರ್ಭದಲ್ಲೆ ಮೋದಿ-ಶಾ ದಿಢೀರ್‍‌ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಇಲ್ಲಿನ ಬಿಜೆಪಿ ನಾಯಕರು ತಬ್ಬಿಬ್ಬಾಗುವಂತೆ ಮಾಡಿದರು. ಯಾವ ಕುಮಾರಣ್ಣನನ್ನು ಲೇವಡಿ ಮಾಡುತ್ತಿದ್ದರೋ ಅದೇ ಕುಮಾರಣ್ಣನ ಕೈಕೈ ಹಿಡಿದು ರಾಜಕಾರಣ ಮಾಡಬೇಕಾಯ್ತು.

• ಕಾಂಗ್ರೆಸಿನ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಜನಬೆಂಬಲ ಕಂಡು ದಿಗ್ಬ್ರಮೆಗೆ ತುತ್ತಾಗಿದ್ದ ರಾಜ್ಯ ಬಿಜೆಪಿ ನಾಯಕರು ಗ್ಯಾರಂಟಿಗಳ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದ್ದರು. ದಿಢೀರ್‍‌ `ಮೋದಿ ಕಿ ಗ್ಯಾರಂಟಿ’ ಘೋಷಿಸಿದ ಮೋದಿಯ ಮಾಸ್ಟರ್‍‌ ಸ್ಟ್ರೋಕ್‌ಗೆ ರಾಜ್ಯ ಬಿಜೆಪಿಗರ ನಾಲಿಗೆಗಳೇ ಸ್ಟ್ರೋಕ್‌ಗೆ ತುತ್ತಾದವು.

• ಕಾಂಗ್ರೆಸ್ ಸರ್ಕಾರ ಬೆಲೆಯೇರಿಕೆ ಮಾಡಿ ಜನರ ಸುಲಿಗೆ ಮಾಡುತ್ತಿದೆ ಅಂತೇಳಿಕೊಂಡು ರಾಜ್ಯ ಬಿಜೆಪಿ ನಾಯಕರು ರಥವೇರಿ ಜನಾಕ್ರೋಶ ಯಾತ್ರೆಗೆ ಭರ್ಜರಿ ಚಾಲನೆ ಕೊಟ್ಟ ದಿನವೇ ಮೋದಿ ಸರ್ಕಾರ ಸಿಲಿಂಡರ್, ಪೆಟ್ರೋಲ್‌-ಡೀಸೆಲ್ ಬೆಲೆಯೇರಿಸಿ ಬಿಜೆಪಿ ಯಾತ್ರಿಗರ ಮುಖ ಬಿಳುಚಿಕೊಳ್ಳವಂತೆ ಮಾಡಿತು.

• ರಾಜ್ಯದ ಜನಸಂಖ್ಯೆಯಲ್ಲಿ ಶೇ.14ರಷ್ಟಿರುವ ಮುಸ್ಲಿಮರಿಗೆ ಒಟ್ಟು ಬಜೆಟ್ ಗಾತ್ರದಲ್ಲಿ ಕೇವಲ ಶೇ.6ರಷ್ಟು ಅನುದಾನ ನೀಡಿದ್ದಕ್ಕೆ ಸಿದ್ದರಾಮಯ್ಯನವರ ಬಜೆಟ್ಟನ್ನು ಹಲಾಲ್ ಬಜೆಟ್ಟು, ಬಿರಿಯಾನಿ ಬಜೆಟ್ಟು ಅಂತ ರಾಜ್ಯ ಬಿಜೆಪಿಗರು ಹುಮ್ಮಸ್ಸಿನಲ್ಲಿ ಎಳೆದಾಡುತ್ತಿರುವ ವೇಳೆಯಲ್ಲೇ ಮೋದಿ ಸಾಹೇಬರು ಮುಸ್ಲಿಮರಿಗೆ ರಂಜಾನ್‌ ಹಬ್ಬಕ್ಕೆಂದು `ಸೌಗತ್‌ ಎ ಮೋದಿ’ ಬಿರಿಯಾನಿ ಪ್ಯಾಕೆಟ್‌ ಗಿಫ್ಟ್‌ ನೀಡಿ, ರಾಜ್ಯ ನಾಯಕರಿಗೆ ಶಾಕ್‌ ಕೊಟ್ಟರು.

• ಗ್ಯಾರಂಟಿಗಳಿಂದಾಗಿ ರಾಜ್ಯ ಬೊಕ್ಕಸ ಬರಿದಾಗಿದೆ, ಕಾಂಗ್ರೆಸ್ ಸರ್ಕಾರದ ಆಡಳಿತ ಹಳ್ಳ ಹಿಡಿದಿದೆ ಅಂತ ರಾಜ್ಯ ಬಿಜೆಪಿ ನಾಯಕರು ಹಗಲುರಾತ್ರಿ ಕೂಗುಮಾರಿಗಳಂತೆ ಪೇಯ್ಡ್‌ ಮೀಡಿಯಾಗಳ ಮುಂದೆ ಒದರಾಡುತ್ತಿರುವ ವೇಳೆಯಲ್ಲೆ ಮೋದಿ ಸರ್ಕಾರ ಸಿದ್ರಾಮಯ್ಯನವರ ಆಡಳಿತ ಮೆಚ್ಚಿ ಕರ್ನಾಟಕಕ್ಕೆ ಸ್ವರ್ಣ ಪದಕ ನೀಡಿ (2024ನೇ ಸಾಲಿನ) ರಾಜ್ಯ ಬಿಜೆಪಿಗರು ಹೌಹಾರುವಂತೆ ಮಾಡುತ್ತೆ.

• ಒನ್ಸ್‌ ಎಗೇನ್, ರಾಜ್ಯ ಬಿಜೆಪಿ ನಾಯಕರು ಸಿದ್ರಾಮಯ್ಯನವರ ಆಡಳಿತದಿಂದಾಗಿ ರಾಜ್ಯ ಬೊಕ್ಕಸ ದಿವಾಳಿಯಾಗಿದೆ ಅಂತ ಕೀರಲು ದನಿಯಲ್ಲಿ ಕೊಸರಾಡುತ್ತಿರುವ ವೇಳೆಗೆ ಸರಿಯಾಗಿ ಕರ್ನಾಟಕಕ್ಕೆ ಬರುವ, ಮೋದಿ ಸಂಪುಟದ ಪ್ರಮುಖ ಕೇಂದ್ರ ಸಚಿವ ರಾಜನಾಥ್‌ ಸಿಂಗ್, ‘ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಅಪಾರ ಕೊಡುಗೆ ನೀಡುತ್ತಿದೆ’ ಎಂದು ಸ್ಟೇಟ್‌ಮೆಂಟ್ ಕೊಟ್ಟು ರಾಜ್ಯ ನಾಯಕರನ್ನು ದಂಗುಬಡಿಸುತ್ತಾರೆ.

• ಲೇಟೆಸ್ಟಾಗಿ, ಸಿದ್ರಾಮಯ್ಯನವರ ಸರ್ಕಾರ ಮಂಡಿಸಲು ಮುಂದಾಗಿರುವ ಜಾತಿಗಣತಿಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಬೊಬ್ಬೆಹಾಕುತ್ತಾ, “ಸಮಾಜವನ್ನು ಒಡೆಯಲು ಜಾತಿಗಣತಿ ಮಾಡಿದ್ದಾರೆ” ಎಂದು ರೋಷಾವೇಶದಿಂದ ಡೈಲಾಗ್‌ ಉದುರಿಸುತ್ತಿರುವ ಸಮಯಕ್ಕೆ ಸರಿಯಾಗಿ ಮೋದಿಯವರು ‘ಕೇಂದ್ರ ಸರ್ಕಾರದಿಂದಲೇ ದೇಶಾದ್ಯಂತ ಜಾತಿಗಣತಿ ಮಾಡ್ತೀವಿ’ ಅನ್ನೋ ಅನೌನ್ಸ್‌ ಮಾಡಿ ರಾಜ್ಯ ನಾಯಕರನ್ನು ಅಕ್ಷರಶಃ ನಿರ್ವಸ್ತ್ರಗೊಳಿಸಿದ್ದಾರೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೋದಿಯವರು ಬಹಳ ಸ್ಟ್ರಾಟಜಿಕಲಿ ಲೆಕ್ಕಾಚಾರ ಹಾಕಿಯೇ ರಾಜ್ಯ ಬಿಜೆಪಿ ನಾಯಕರ ಕಾಲು ಎಳೆಯುತ್ತಿದ್ದಾರಾ ಎಂಬ ಅನುಮಾನ ಮೂಡದಿರದು. ರಾಜ್ಯ ಬಿಜೆಪಿ ನಾಯಕರು ಯಾವ ಹೋರಾಟಗಳನ್ನು ಕೈಗೆತ್ತಿಕೊಳ್ತಾರೋ, ಅದಕ್ಕೆ ತದ್ವಿರುದ್ಧ ಘೋಷಣೆಗಳು ಮೋದಿ ಸರ್ಕಾರದಿಂದ ಹೊರಬೀಳ್ತಿವೆ. ತಮಾಷೆಯಂತೆ ಕಂಡರೂ ಇದೊಂದು ಸೀರಿಯಸ್‌ ಸಂಗತಿ. ಏನಂತೀರಿ?

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply