ಆಹಾರ ಸುರಕ್ಷತೆ ಅಧಿಕಾರಿಗಳಿಂದ ವಿವಿಧೆಡೆ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಭೇಟಿ: ತಪಾಸಣೆ

2 years ago

ಗುಣಮಟ್ಟದ ಆಹಾರ ಪೂರೈಕೆಗೆ ಆದ್ಯತೆ ನೀಡುವಂತೆ ಸೂಚನೆ

ಬಳ್ಳಾರಿ: ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಆರೋಗ್ಯ ಸಚಿವರ ಆದೇಶದಂತೆ, ವಿಶೇಷ ಆಂದೋಲನ ಪ್ರಯುಕ್ತ ಎರಡನೇಯ ದಿನವಾದ ಶನಿವಾರದಂದು ಆಹಾರ ಸುರಕ್ಷತೆ ಅಧಿಕಾರಿಗಳಿಂದ ವಿವಿಧ ತಾಲ್ಲೂಕುಗಳ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡರು.

ಸಂಡೂರು ತಾಲ್ಲೂಕಿನ ಆಹಾರ ಸುರಕ್ಷತೆ ಅಧಿಕಾರಿ ಅಂಬದಾಸ್ ಅವರು ತೋರಣಗಲ್ ವ್ಯಾಪ್ತಿಯಲ್ಲಿ ಬರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಂಶಗಳನ್ನು ಪಾಲಿಸುತ್ತಿರುವ ಕುರಿತು ಖುದ್ದು ವಿಚಾರಿಸಿದರು.

ಆಹಾರ ನಿರ್ವಾಹಕರ ವೈಯಕ್ತಿಕ ಸ್ವಚ್ಛತೆ, ಆಹಾರದಲ್ಲಿ ಬಳಸುತ್ತಿರುವ ಕೃತಕ ಬಣ್ಣ, ಅಜಿನೋಮೋಟೊ (ಟೇಸ್ಟಿಂಗ್ ಪೌಡರ್), ಆಹಾರ ತಯಾರಿಸಲು ಬಳಸುತ್ತಿರುವ ನೀರು ಹಾಗೂ ಗ್ರಾಹಕರಿಗೆ ಕುಡಿಯಲು  ನೀಡುತ್ತಿರುವ ನೀರು ಮತ್ತು ನೋಂದಣಿ ಅಥವಾ ಪರವಾನಿಗಿ ಪಡೆದಿರುವ ಬಗ್ಗೆ ತಪಾಸಣೆ ಕೈಗೊಂಡರು.

ಬಳಿಕ ಮಾತನಾಡಿದ ಆಹಾರ ಸುರಕ್ಷತೆ ಅಧಿಕಾರಿ ಅಂಬದಾಸ್, 10 ಆಹಾರ ಪದಾರ್ಥಗಳ ಮಾದರಿಗಳನ್ನು ಸಹ ಸ್ಯಾಂಪಲ್ ಸಂಗ್ರಹಿಸಿ ವಿಶ್ಲೇಷಣೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿ ಬಂದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅದೇರೀತಿಯಾಗಿ ಬಳ್ಳಾರಿ ತಾಲ್ಲೂಕಿನ ಆಹಾರ ಸುರಕ್ಷತೆ ಅಧಿಕಾರಿ ನಂದಾಕಡಿ ಅವರು, ಬಳ್ಳಾರಿ ತಾಲ್ಲೂಕಿನ ಹಲಕುಂದಿ ಗ್ರಾಮದ ಬೀದಿ ಬದಿ ವ್ಯಾಪಾರಿಗಳ ಮಳಿಗೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡರು.

ಬಳಿಕ ಮಾತನಾಡಿದ ಅವರು, ತಪಾಸಣೆ ಸಮಯದಲ್ಲಿ ಕಂಡುಬಂದ ಲೋಪಗಳಿಗೆ ನಿಯಮಾನುಸಾರ ತಿಳುವಳಿಕೆ ಪತ್ರವನ್ನು ಆಹಾರ ಉದ್ದಿಮೆದಾರರಿಗೆ ನೀಡಿ, ದಂಡ ವಿಧಿಸಲಾಗಿದೆ ಎಂದರು.

ಆಹಾರ ಉದ್ದಿಮೆದಾರರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದ ಲೋಪದೋಷಗಳನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳುವಂತೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಪ್ರಕಾಶ್ ಎಸ್ ಪುಣ್ಯಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ತಪಾಸಣೆ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

Leave a Reply