ಆಹಾರ ತಯಾರಿಕೆಗೆ ಗುಣಮಟ್ಟ, ಸುರಕ್ಷತೆಗೆ ಆದ್ಯತೆ ನೀಡಿ: ನಂದಾಕಡಿ

2 years ago

ಬಳ್ಳಾರಿ: ಆಹಾರ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಬೇಕು. ಸೇವನೆಗೆ ಯೋಗ್ಯವಾದ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು ಎಂದು ಆಹಾರ ಸುರಕ್ಷತಾ ಅಧಿಕಾರಿ ನಂದಾಕಡಿ ಹೇಳಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮತ್ತು ಬಳ್ಳಾರಿ ಹೋಟೆಲ್ ಮಾಲೀಕರ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ನೋಂದಣಿ, ಪರವಾನಿಗೆ ಅಂದೋಲನ ಹಾಗೂ ಆಹಾರ ಸುರಕ್ಷತೆಯ ಕುರಿತು ಎಲ್ಲಾ ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಹಾರ ಗುಣಮಟ್ಟ ಕಾಪಾಡಿಕೊಳ್ಳುವ ಕಾಯ್ದೆಯು ಜನಪರವಾಗಿದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಸ್ ಗಳು, ಸಾಗಣೆದಾರರು, ಆಹಾರ ಸಂಸ್ಕರಣೆ ಮಾಡುವವರು, ವಿತರಕರು, ಹೋಟೆಲ್, ರೆಸಾರ್ಟ್, ಕ್ಯಾಂಟೀನ್, ಮೊಬೈಲ್ ವ್ಯವಸ್ಥೆಯಲ್ಲಿ ಆಹಾರ ಮಾರಾಟಗಾರರು, ವೈನ್ ಸ್ಟೋರ್, ಕ್ಲಬ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರುಘಟಕ ಇನ್ನಿತರರು ಆಹಾರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ವಿವಿಧ ಹೋಟೆಲ್‌ಗಳ ಪದಾಧಿಕಾರಿಗಳು, ಜನರಲ್ ಮ್ಯಾನೇಜರ್‌ಗಳು ಗುಣಮಟ್ಟದ ಆಹಾರ ಸಿದ್ದಪಡಿಸುವಿಕೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕಾರ್ಯಕ್ರಮದಲ್ಲಿ ಹೇಳಿದರು.

ಈ ವೇಳೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡ ಸೇರಿದಂತೆ ನಗರದ ಎಲ್ಲಾ ಹೋಟಲ್‌ಗಳ ಮಾಲೀಕರ ಅಸೋಸಿಯೇಷನ್ ಪದಾಧಿಕಾರಿಗಳು, ಜನರಲ್ ಮ್ಯಾನೇಜರ್‌ಗಳು ಹಾಜರಿದ್ದರು.

Leave a Reply