ಸತ್ಯ ಹೇಳುವುದು ಕೆಲವರಿಗೆ ಸಹ್ಯವಾಗುವುದಿಲ್ಲ: ಡಿ ಕೆ ಶಿವಕುಮಾರ್

8 months ago

ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಲು ಖ್ಯಾತ ಸಾಹಿತಿ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಮತ್ತು ಸಂಘಪರಿವಾರ ಹಾಗೂ ಇವುಗಳ ಬೆಂಬಲಿತ ಸುದ್ದಿಸಂಸ್ಥೆಗಳು ವಿವಾದದ ಸ್ವರೂಪ ನೀಡಿವೆ. 

ನಾಡ ದೇವತೆ ಭುವನೇಶ್ವರಿ ಹಾಗೂ ಚಾಮುಂಡೇಶ್ವರಿ ಬಗ್ಗೆ ಈ ಹಿಂದೆ ಸಾಹಿತಿ ಬಾನು ಮುಷ್ತಾಕ್ ಅವರು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಯಾವುದೇ ಕಾರಣಕ್ಕೂ ಇವರಿಂದ ದಸರಾ ಉದ್ಘಾಟನೆ ಮಾಡಿಸಬಾರದು ಎಂದು ಪಟ್ಟು ಹಿಡಿದಿದೆ.

ಈ ನಡುವೆ ಸರ್ಕಾರದ ನಿರ್ಧಾರ ಸಮರ್ಥಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಕೂಡ ಸಾಕಷ್ಟು ವಿವಾದ ಸೃಷ್ಟಿಸಿದೆ. ಇದರಿಂದ ಬೇಸರಗೊಂಡಿರುವ ಶಿವಕುಮಾರ್ ಅವರು ಈ ಬಗ್ಗೆ ಇನ್ನು ಮುಂದೆ ಮಾತನಾಡುವುದಿಲ್ಲ ಎಂದು ತಲೆತೊಳೆದುಕೊಳ್ಳಲು ಯತ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸತ್ಯ ಹೇಳುವುದು ಕೆಲವರಿಗೆ ಸಹ್ಯವಾಗುವುದಿಲ್ಲ. ಹೀಗಾಗಿ ತಾವು ಮಾತನಾಡದಿರುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ತಾವು ಸದನದಲ್ಲಿ ಮಾತನಾಡಿದರೂ ಆ ಬಗ್ಗೆ ತಪ್ಪು ಹುಡುಕುತ್ತಿದ್ದಾರೆ. ತಾವು ಎಲ್ಲಿ ಏನೇ ಮಾತನಾಡಿದರು ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯದವರು, ಮಾಧ್ಯಮಗಳು, ಪ್ರಮೋದಾ ದೇವಿ ಅವರು, ಸಂಸದ ಯದುವೀರ್ ಅವರು – ಹೀಗೇ ಎಲ್ಲರೂ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ. ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಚಾಮುಂಡಿ ಬೆಟ್ಟ ಕೇವಲ ಹಿಂದೂಗಳದ್ದಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ಅಕ್ಷಮ್ಯ ಅಪರಾಧ. ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ಶಿವಕುಮಾರ್ ಅವರು‌ ಗಾಂಧಿ‌ ಕುಟುಂಬಕ್ಕೆ ಖುಷಿ ಪಡಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಈ ಹಿಂದೆ ರಾಮನಗರದಲ್ಲಿ‌ ಏಸು ಕ್ರಿಸ್ತನ ಪ್ರತಿಮೆ‌ಮಾಡಲು ಮುಂದಾಗಿದ್ದರು. ಈಗ ಹೇಗಾದರೂ ಮಾಡಿ‌ ಗಾಂಧಿ‌ ಕುಟುಂಬದ ‌ಖುಷಿಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಹೇಳಿಕೆ ಭಗವಂತ ಸಹ ಮೆಚ್ಚಲ್ಲ ಎಂದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆಯುತ್ತಾರೆ? ಇದೇ ಪ್ರಶಸ್ತಿ ವಿಜೇತರಾದ ದೀಪಾ ಬಸ್ತಿ ಅವರನ್ನು ಯಾಕೆ ಕರೆದಿಲ್ಲ? ನಿಸಾರ್ ಅಹಮದ್ ಉದ್ಘಾಟನೆ ಮಾಡುವುದು ಬೇರೆ ವಿಚಾರ. ನಮ್ಮ ವಿಚಾರ ಒಪ್ಪಿಕೊಂಡು ಬರೋದಾದ್ರೆ ಸ್ವಾಗತ. ಯಾರೇ ಉದ್ಘಾಟನೆ ಮಾಡಿದರೂ, ನಮ್ಮ ಸಂಸ್ಕೃತಿ ಒಪ್ಪಿಕೊಂಡು ಬರೋದಾದ್ರೆ ಸ್ವಾಗತ ಎಂದರು.

Leave a Reply