ಸಿದ್ದರಾಮಯ್ಯ ಸರ್, ಚೆಂಡು ಈಗ ನಿಮ್ಮ ಅಂಗಳದಲ್ಲಿದೆ

3 years ago

#Siddaramaiah #ball #court #bsripadbhat #reservation #castesurvey #obc #politics #nithishkumar

ನಿತೀಶ್ ಕುಮಾರ್ ನೇತೃತ್ವದ ಸರಕಾರ ಎಲ್ಲಾ ಅಡೆತಡೆಗಳನ್ನು ದಾಟಿ ಜಾತಿ ಜನಗಣತಿ ನಡೆಸಿ ಅದರ ವಿವರಗಳನ್ನು ಪ್ರಕಟಿಸಿ ಒಂದೇ ಕಲ್ಲಿನಲ್ಲಿ ಐದು ಗುರಿ ಸಾಧಿಸಿದೆ.

ಮೊದಲನೆಯದಾಗಿ ಎಂದೋ ಆಗಬೇಕಿದ್ದ, ಅಗತ್ಯವಿದ್ದ ಜಾತಿ ಜನಗಣತಿಯನ್ನು ನಡೆಸುವುದರ ಮೂಲಕ ಬಹುಕಾಲ ನೆನೆಗುದಿಗೆ ಬಿದ್ದಿರುವ ಹಕ್ಕೊತ್ತಾಯವನ್ನು ನಿತೀಶ್ ಕುಮಾರ್ ಈಡೇರಿಸಿದ್ದಾರೆ.

ಎರಡನೆಯದಾಗಿ ಓಬಿಸಿ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಆ ಮೂಲಕ ಮಂಡಲ್ 1.O ಚಳುವಳಿಯನ್ನು ಹೆಚ್ಚೂ ಕಡಿಮೆ ದುರ್ಬಲಗೊಳಿಸಿತ್ತು. ತನ್ನದು ಮಂಡಲ್ 2.O  ಎಂದು ಪ್ರಚಾರ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಜಾತಿ ಜನಗಣತಿ ಮೂಲಕ ಮಂಡಲ್ 2.O ಕಥನದ ಗತಿ ಮತ್ತು ದಿಕ್ಕನ್ನು ಬದಲಿಸಿಬಿಟ್ಟರು.

ಈಗ ಬಿಜೆಪಿ ಮಂಡಲ್ 2.O ನಾಯಕತ್ವವನ್ನು ಕ್ಲೇಮ್ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಓಬಿಸಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೊದಲ ಬಾರಿಗೆ ರಕ್ಷಣಾತ್ಮಕ ಪಿಚ್ ನಲ್ಲಿದೆ. ಈಗ ಏನಿದ್ದರೂ ಪ್ರತಿಕ್ರಿಯೆ ನೀಡುವುದಷ್ಟೇ ಅದರ ಕೆಲಸ.

ಮೂರನೆಯದಾಗಿ ದಲಿತ ಮತ್ತು ಅತಿ ಹಿಂದುಳಿದ ಜಾತಿ, ಸಮುದಾಯಗಳ ಸಮಾಜೋ-ಆರ್ಥಿಕ- ರಾಜಕೀಯ ಸಂಘಟನೆಗೆ ಇದು ದಾರಿ ತೆರೆಯುತ್ತದೆ. ಬಲಿಷ್ಠ ಮಧ್ಯ ಜಾತಿಗಳ ಪ್ರಾಬಲ್ಯ ಇಂದು ಪರೀಕ್ಷೆಗೆ ಒಳಪಡಲಿದೆ. ಎಲ್ಲವೂ ಸರಿಯಾಗಿ ನಡೆದರೆ ಅತಿ ಹಿಂದುಳಿದ ಮತ್ತು ದಲಿತ ಸಮುದಾಯದ ನಡುವೆ ಮೈತ್ರಿ ರಾಜಕಾರಣಕ್ಕೆ ಮುನ್ನುಡಿ ಬರೆಯಬಲ್ಲದೇ? ಕಾಲವೇ ಉತ್ತರಿಸಬೇಕು.

ನಾಲ್ಕನೆಯದಾಗಿ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಿದ ಇಂದ್ರಾ ಸಹಾನಿ ಪ್ರಕರಣದ ತೀರ್ಪು ಮತ್ತೆ ಚರ್ಚೆಗೆ ಬರಲಿದೆ. ಮತ್ತು ಅದನ್ನು ಈ ಜಾತಿ ಜನಗಣತಿ ಆಧಾರದಲ್ಲಿ ಪ್ರಶ್ನಿಸಬಹುದು. ಕಾನೂನು ತಜ್ಞರು ಉತ್ತರಿಸಬೇಕು. ಮತ್ತು ಒಳ ಮೀಸಲಾತಿ ಹೋರಾಟಕ್ಕೆ ಹೊಸ ಶಕ್ತಿ ಬಂದಂತಾಗಿದೆ.

ಐದನೆಯದಾಗಿ 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಬಿಜೆಪಿ ಪಕ್ಷ ಯಾವುದೇ ಸಬೂಬು ಸಹ ಕೊಡದೆ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡಿತ್ತು. ಈಗ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿದ್ದು ಕೇಂದ್ರ ಸರಕಾರಕ್ಕೆ  ಸಾಧ್ಯವಾಗಲಿಲ್ಲ ಎನ್ನುವ ಆರೋಪಕ್ಕೆ ಒಳಗಾಗಲಿದೆ.

ಮುಖ್ಯವಾಗಿ 2024ರ ಲೋಕಸಭಾ ಚುನಾವಣೆ ಬಿಜೆಪಿಗೆ ಕೇಕ್ ವಾಕ್ ಅಂತೂ ಅಲ್ಲ ಎಂದು ಅದರ ಓಟಕ್ಕೆ ಈ ಜಾತಿ ಜನಗಣತಿ ಬ್ರೇಕ್ ಹಾಕಿದಂತಿದೆ.

ಇದೆಲ್ಲವೂ ಸಾಧ್ಯತೆಗಳು ಮಾತ್ರವಾಗಿದ್ದರೂ ಭವಿಷ್ಯದ ರಾಜಕಾರಣದ ದಿಕ್ಕು ಬದಲಾಗುವುದಂತೂ ನಿಜ.
Mandal 2.O  on roll. With mix of old and new players.

ಸಿದ್ಧರಾಮಯ್ಯ ಸರ್, ಚೆಂಡು ಈಗ ನಿಮ್ಮ ಅಂಗಳದಲ್ಲಿದೆ….

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply