ನನ್ನ ಮತ್ತು ಸಿದ್ದರಾಮಯ್ಯ ವಿರುದ್ಧ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ: ಡಿ.ಕೆ.ಶಿವಕುಮಾರ್

2 years ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಿ ರಾಜ್ಯ ಸರ್ಕಾರವನ್ನು ಪತನಗೊಳಿಸಲು ದೊಡ್ಡದೊಂದು ಸಂಚು ನಡೆದಿದೆಯಾ? ಹೌದು. ಇಂತಹ ಸಂಚಿನ ಸಂಗತಿಯೊಂದನ್ನು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಬಹಿರಂಗಪಡಿಸಿದ್ದಾರೆ.

ನನ್ನ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕೇರಳದ ದೇವಸ್ಥಾನವೊಂದರಲ್ಲಿ ಶತ್ರು ಭೈರವಿ ಎಂಬ ಯಾಗವನ್ನು ಮಾಡಿಸಲಾಗುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ತಂಡವೊಂದು ಈ ಯಾಗ ನಡೆಸುತ್ತಿದೆ ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ? ಯಾರು ಯಾರು ಆ ಯಾಗದಲ್ಲಿ ಭಾಗವಹಿಸಿದ್ದಾರೆ? ಇನ್ನೂ ಯಾರು ಈ ಯಾಗದ ಹಿಂದಿದ್ದಾರೆ ಎಂಬ ವಿಚಾರ ನನಗೆ ಗೊತ್ತಿದೆ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿದ ದೇವರು, ಶಕ್ತಿ ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ ಎಂದಿದ್ದಾರೆ.

ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ “ರಾಜಕಂಟಕ” “ಮಾರಣ ಮೋಹನ ಸ್ತಂಭನ” ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ. ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದ್ದು, ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳ ಬಲಿ ಮೂಲಕ ಈ ಮಾಂತ್ರಿಕಯಾಗ ನಡೆಯುತ್ತಿದೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ ಎಂದರು.

ಅವರ ಪ್ರಯತ್ನ ಅವರು ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರು ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ. ನಾನು ಪ್ರತಿನಿತ್ಯ ಮನೆಯಿಂದ ಹೊರಡುವ ಮುನ್ನ ದೇವರಿಗೆ ಒಂದು ನಿಮಿಷ ಕೈಮುಗಿದು ಪ್ರಾರ್ಥಿಸುತ್ತೇನೆ ಎಂದರು.

ಏನಿದು ಯಾಗ?: ಹೆಸರೇ ಹೇಳುವಂತೆ, ಶತ್ರು ಭೈರವ ಯಾಗ ಎಂದರೆ ಶತ್ರುಗಳನ್ನು ನಾಶಪಡಿಸುವ ಅಥವಾ ಶತ್ರುಗಳ ಬಾಧೆಯಿಂದ ಹೊರಬರಲು ಮಾಡುವಂಥ ಯಾಗ ಎಂದು ಧಾರ್ಮಿಕ ವಲಯದಲ್ಲಿ ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ಭೈರವ ದೇವರನ್ನು ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರಲಾಗಿದೆ.

ಎಲ್ಲರೂ ಕಾಲಭೈರವ ದೇವರ ಹೆಸರನ್ನು ಕೇಳಿರುತ್ತಾರೆ. ಕಾಲಭೈರವಿ ಎಂಬ ದೇವರಿನ ಹೆಸರು ಕೇಳಿದ ಕೂಡಲೇ ಕೆಲವರು ಬೆಚ್ಚಿ ಬೀಳುವುದುಂಟು. ಆದರೆ, ಶುದ್ಧ ಮನಸ್ಸಿನಿಂದ ಕಾಲ ಭೈರವನ ಪೂಜೆ, ಆರಾಧನೆ ಮಾಡಿದರೆ ಮನುಷ್ಯರು ತಾವು ಅನುಭವಿಸುತ್ತಿರುವ ತೊಂದರೆಗಳಿಂದ, ಕಷ್ಟಗಳಿಂದ ಬೇಗನೇ ಮುಕ್ತಿ ಹೊಂದಿ ಸುಖ ಜೀವನವನ್ನು ಪಡೆಯುತ್ತಾರೆಂಬ ಪ್ರತೀತಿ ಇದೆ ಎಂದು ಹೇಳಲಾಗುತ್ತದೆ.

Leave a Reply