ಬೆಟ್ಟದ ಮದ್ದೆಮ್ಮ ಎಂಬ ನೆಲದೇವತೆಯನ್ನು ಕುರಿತು ಜಾನಪದ ಹಾಡುಗಾರ್ತಿಯರಾದ ವಡ್ಡಗೆರೆ ಕದರಮ್ಮ ಮತ್ತು ವಡ್ಡಗೆರೆ ಮುದ್ದುನಾಗಮ್ಮ ಹಾಡಿರುವ ಹಾಡಿರುವ ಕಥನಗೀತೆಯ ವಿಡಿಯೋ ಇದು.
ಅಲೆಮಾರಿ ಪಶುಪಾಲಕ ಕಾಡುಗೊಲ್ಲರ ಮಗಳಾಗಿ ಹುಟ್ಟಿದ ಮದ್ದೆಮ್ಮ ನಮ್ಮೂರ (ವಡ್ಡಗೆರೆ ಗ್ರಾಮದ) ಕುಂಚಿಟಿಗ ಸಮುದಾಯದ ಸಾಂಸ್ಕೃತಿಕ ನಾಯಕನಾದ ವೀರಕ್ಯಾತರಾಯನಿಗೆ ಒಲಿದು ಹಾಲುಕಾವಡಿಯಲ್ಲಿ ಬಂದು ನಮ್ಮೂರ ಬಳಿಯ (ಈಗಿನ ಎತ್ತಗಾನಹಳ್ಳಿ ಮದ್ದೆಮ್ಮನ ಬೆಟ್ಟದ) ಕಾಡು ಕಲ್ಲುಗವಿಯಲ್ಲಿ ಠಾವುಗೊಂಡಳಂತೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನೆಲದೇವತೆ ಮದ್ದೆಮ್ಮ ಎಲ್ಲೆಲ್ಲಿ ಆವಿನ ಗೂಡುಗಳಲ್ಲಿ (ದನಗಳ ರೊಪ್ಪಗಳಲ್ಲಿ) ಬೀಡುಬಿಟ್ಟಳೋ ಅಲ್ಲೆಲ್ಲಾ ಈ ದೇವತೆಯ ತೋರುಗದ್ದಿಗೆ ಗುಡಿಗಳಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಹಲಗಲದ್ದಿ ಮದ್ದೆಮ್ಮ,, ಸಾಲುಹುಣಸೆ ಮದ್ದೆಮ್ಮ, ತುಮಕೂರು ಶಿರಾ ತಾಲ್ಲೂಕಿನ ಕಾಮಗೊಂಡನಹಳ್ಳಿ ಮದ್ದೆಮ್ಮ, ಮದ್ದಕ್ಕನಹಳ್ಳಿ ಮದ್ದೆಮ್ಮ, ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಮದ್ದೆಮ್ಮ, ಕೊರಟಗೆರೆ ತಾಲ್ಲೂಕಿನ ಎತ್ತಗಾನಹಳ್ಳಿ ಮದ್ದೆಮ್ಮ ಹೀಗೆ ಮದ್ದೆಮ್ಮನ ಹಲವಾರು ನೆಲೆಗಳಿವೆ.
ದನಕರು ಕುರಿಮಂದೆ ಕಾಯ್ದುಕೊಂಡು ಹಾಲುಮೊಸರು ವ್ಯಾಪಾರ ಮಾಡುತ್ತಿದ್ದ ಕಾಡುಗೊಲ್ಲರ ಹೆಣ್ಣು ಮಗಳೊಬ್ಬಳು ಹಲವಾರು ತಳಸಮುದಾಯಗಳಿಗೆ ದೇವತೆ ಹೇಗಾದಳೆಂಬುದು ಆಶ್ಚರ್ಯಕರ ಸಂಗತಿ.
ಆಗಿನ ಕಾಲಘಟ್ಟದಲ್ಲಿ ಕುರುಬರು ಕೆಟ್ಟು ಕುಂಚಿಟಿಗರಾದ ಬಳಿಕ, ಕುರುಬ ಸಮುದಾಯದ ಒಂದು ಬಣ ಕುರುಬರ ಜಲಧಿ ಬೊಪ್ಪರಾಯನ ಬಲಿದಾನ ಮತ್ತು ತ್ಯಾಗದಿಂದ ಕುಂಚಿಟಿಗ ಸಮುದಾಯವಾಗಿ 48 ಬೆಡಗುಗಳ ಸ್ವತಂತ್ರ ಜಾತಿಯಾಯಿತು. ಕರುಬರು ಕುಂಚಿಟಿಗರಾಗಿ ಜಾತ್ಯಂತರ ಹೊಂದಿದರು.
ಕರ್ನಾಟಕದ ಮೂಲನಿವಾಸಿ ಕುಲಗಳಲ್ಲೊಂದಾದ ಪಶುಪಾಲಕ ದ್ರಾವಿಡ ಬುಡಕಟ್ಟಿನ ಕಾಡುಗೊಲ್ಲ ಸಮುದಾಯವು ಮತ್ತೊಂದು ದ್ರಾವಿಡ ಪಶುಪಾಲಕ ಸಮುದಾಯವಾದ ಕುಂಚಿಟಿಗರು ಕುಲಸಂಕರವಾದರು. ಮದ್ದೆಮ್ಮ – ವೀರಕ್ಯಾತರಾಯರ ಮದುವೆಯೊಂದಿಗೆ ಕಾಡುಗೊಲ್ಲರು ಮತ್ತು ಕುಂಚಿಟಿಗರು ಪರಸ್ಪರ ಬೆರೆತುಹೋದರು. ಆಗ ಈಗಿನಂತೆ ಜಾತಿಗಳು ಜಿಗುಟಾಗಿರಲಿಲ್ಲ ಅನ್ನಿಸುತ್ತದೆ.
ಕುರುಬರ ಸಾಂಸ್ಕೃತಿಕ ವೀರನಾದ ಜಲಧಿ ಬೊಪ್ಪರಾಯ, ಕುಂಚಿಟಿಗರ ಸಾಂಸ್ಕೃತಿಕ ನಾಯಕ ವೀರಕ್ಯಾತರಾಯ ಮತ್ತು ಕಾಡುಗೊಲ್ಲರ ಸಾಂಸ್ಕೃತಿಕ ನಾಯಕಿ ಮದ್ದೆಮ್ಮ, ಹಾಗೂ ವೀರಕ್ಯಾತರಾಯನ ಸೊಸೆಯಾದ ಮಹಾಸತಿ ವಡ್ಡಗೆರೆ ನಾಗಮ್ಮ (ತಾಡಿ ವೀರನಾಗಮ್ಮ) ಕಾಲವಾದ ಬಳಿಕ ಕುರುಬರಿಗೆ- ಕುಂಚಿಟಿಗರಿಗೆ- ಕಾಡುಗೊಲ್ಲರಿಗೆ- ಮತ್ತಿತರ ಹಲವಾರು ತಳಸಮುದಾಯಗಳಿಗೆ ನೆಲದೇವತೆಯರಾಗಿ ಆರಾಧನೆಗೊಳ್ಳತೊಡಗುತ್ತಾರೆ.
10ನೇ ಶತಮಾನದಷ್ಟು ಪೂರ್ವಕಾಲದಲ್ಲಿಯೇ ಹೀಗೆ ಕುಲಗಳು ಬೆರೆತುಹೋಗಿ, ಆಗಿನ ಕಾಲದಲ್ಲಿ ಜಾತ್ಯಂತರ ನಡಿಗೆಗಳು ಸಾಧ್ಯವಾಗಿವೆಯೆಂದ ಮೇಲೆ ‘ಜಾತಿ’ಯನ್ನು ಕರಗಿಸುವ ಉದಕವು ದುಡಿಯುವ ಜನರ ನೆಲದೇವತೆಯರಲ್ಲಿದೆ ಎಂಬುದು ಕಂಡುಬರುತ್ತದೆ. ಜಾತಿಯನ್ನು ಕರಗಿಸುವ ಈ ದಾರಿಯೂ ನಮಗೆ ದಿಕ್ಕಾಗಬಹುದಲ್ಲವೇ?
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




