ತುಮಕೂರು ಮೆಟ್ರೋ ಯೋಜನೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ: ಜಿ.ಪರಮೇಶ್ವರ್ 

5 months ago

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು, ತುಮಕೂರು ಮೆಟ್ರೋ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಗೆ ಬಂಡವಾಳ ಹೂಡಲು ಕತಾರ್ ಮೂಲದ ಸಂಸ್ಥೆಯೊಂದು ಆಸಕ್ತಿ ವಹಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿಗೆ ಮೆಟ್ರೋ ರೈಲು ಯೋಜನೆ ಬಗ್ಗೆ ಸಂಸದ ತೇಜೆಸ್ವಿ ಸೂರ್ಯ ವ್ಯಕ್ತಪಡಿಸಿರುವ ಆತಂಕ ಅನಗತ್ಯ ಎಂದರು.

ತುಮಕೂರು ಮತ್ತು ಬೆಂಗಳೂರು ನಡುವೆ ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ. ಮಧ್ಯದಲ್ಲಿ ದಾಬಸ್‌‍ ಪೇಟೆ, ನೆಲಮಂಗಲ, ಕ್ಯಾತಸಂದ್ರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಬೆಂಗಳೂರಿನಲ್ಲಿ ನೀರು, ವಿದ್ಯುತ್‌ ಎಲ್ಲದಕ್ಕೂ ಕಷ್ಟ. ಸಂಚಾರ ದಟ್ಟಣೆಯಿಂದ ಓಡಾಡುವುದು ಇನ್ನೂ ಕಷ್ಟ ಎಂದರು.

ತುಮಕೂರಿನಲ್ಲಿ ಏಷ್ಯಾದಲ್ಲಿ ಅತಿ ದೊಡ್ಡದಾದ ಕೈಗಾರಿಕಾ ವಲಯವನ್ನು 20 ಸಾವಿರ ಎಕರೆಯಲ್ಲಿ ಸ್ಥಾಪಿಸಲಾಗುತ್ತಿದೆ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ತುಮಕೂರಿಗೆ ರಸ್ತೆ, ರೈಲು ಸೇರಿದಂತೆ ಬೇರೆಬೇರೆ ಸಂಪರ್ಕಗಳು ಅಗತ್ಯ ಇದೆ. ಹೀಗಾದರೆ ಮಾತ್ರ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.

ಬೆಂಗಳೂರಿನ ಸುತ್ತಮುತ್ತ ಇರುವ ರಾಮನಗರ, ಕೋಲಾರ, ತುಮಕೂರನ್ನು ಉಪನಗರಗಳನ್ನಾಗಿ ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಒತ್ತಡ ತಗ್ಗುವ ಜೊತೆಗೆ ಕೈಗಾರಿಕೆ ಹಾಗೂ ನಗರೀಕರಣದ ವಿಸ್ತರಣೆಯಾಗಲಿದೆ ಎಂದರು.

ಎರಡು ವರ್ಷದ ಹಿಂದೆಯೇ ತಾವು ತುಮಕೂರಿಗೆ ಮೆಟ್ರೋ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಅಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವಿತ ಯೋಜನೆಯನ್ನು ಪರಿಶೀಲಿಸುವುದಾಗಿ ಬಜೆಟ್‌ ನಲ್ಲಿ ಹೇಳಿದರು. ಅದರಂತೆ ಕಾರ್ಯಸಾಧುತ್ವದ ಬಗ್ಗೆ ಅಧ್ಯಯನ ನಡೆಸಲಾಯಿತು. ಆ ವರದಿ ಸಕಾರಾತಕವಾಗಿ ಬಂದಿದೆ ಎಂದರು.

ಆನಂತರ ತಾವು ಪ್ರತ್ಯೇಕ ಸಭೆ ನಡೆಸಿ ಚರ್ಚೆ ಮಾಡಿದಾಗ ಡಿಪಿಆರ್‌ ಗೆ ಅನುಮತಿ ದೊರೆತಿದೆ. ಮುಂದಿನ ಹಂತದಲ್ಲಿ ಹಣಕಾಸಿನ ಸೌಲಭ್ಯ ಹಾಗೂ ಯೋಜನಾ ವೆಚ್ಚದ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.ಕತಾರ್‌ ನ ಕಂಪೆನಿ ಸೇರಿದಂತೆ ಎರಡು ಸಂಸ್ಥೆಗಳು 20 ಸಾವಿರ ಕೋಟಿ ಬಂಡವಾಳ ಹೂಡಲು ಮುಂದೆ ಬಂದಿವೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ ಎಂದರು.

ತೇಜಸ್ವಿ ಸೂರ್ಯ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಇಲ್ಲಿ ಸಂಘರ್ಷ ಅನಗತ್ಯ. ನಾನು ಅವರ ಜೊತೆ ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ಮಾಡಲು ಸಿದ್ಧನಿದ್ದೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಕಾರಾತ್ಮಕವಾಗಿ ಯೋಚಿಸಬೇಕು. ನಕಾರಾತ್ಮಕ ಪ್ರತಿಕ್ರಿಯೆಗಳು ಸಾಧುವಲ್ಲ ಎಂದರು.

ಮುಂದುವರೆದ ದೇಶಗಳಾದ ಜಪಾನ್‌ ನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಟೋಕಿಯೋ 70 ಕಿಮೀ ಅಂತರವಿದೆ, ಮಲೇಶಿಯಾ ಕೌಲಲಾಂಪುರ ವಿಮಾನ ನಿಲ್ದಾಣ ಸರಿಸುಮಾರು 60 ಕಿಲೋಮೀಟರ್‌ ಅಂತರದಲ್ಲಿದೆ. ಅಲ್ಲೆಲ್ಲಾ 20 ನಿಮಿಷಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ. ನಮಲ್ಲೂ ಅಂತ ವ್ಯವಸ್ಥೆಗಳು ಬೇಕು ಎಂದರು.

ತೇಜಸ್ವಿ ಸೂರ್ಯನನ್ನು ಅಭಿವೃದ್ಧಿ ವಿರೋಧಿ ಎಂದು ತಾವು ಟೀಕಿಸುವುದಿಲ್ಲ. ಅವರ ನಡತೆಯನ್ನು ಜನ ತೀರ್ಮಾನಿಸುತ್ತಾರೆ. ಇಲ್ಲಿ ನನಗೆ ಬೇಕು ನಿನಗೆ ಬೇಡ ಎಂಬ ಧೋರಣೆ ಅನಗತ್ಯ. ಬೆಂಗಳೂರು ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿದೆ. ಬೇರೆಬೇರೆ ಕಾರಣಗಳಿಗೆ ಜನ ಇಲ್ಲಿಗೆ ಬರುತ್ತಿದ್ದಾರೆ. ಅದಕ್ಕೆ ಪೂರಕವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದರು.

ಎರಡು ವರ್ಷದ ಹಿಂದೆಯೇ ತುಮಕೂರಿಗೆ ಮೆಟ್ರೋ ಯೋಜನೆ ತೆಗೆದುಕೊಂಡು ಹೋಗಬೇಕು ಎಂದು ಪ್ರಸ್ತಾಪ ಮಾಡಿದ್ದೆ. ಮಾನ್ಯ ಮುಖ್ಯಮಂತ್ರಿಗಳು ಫೀಸಿಬಲಿಟಿ ಸ್ಟಡಿ ಮಾಡುವುದಾಗಿ 2024ರ ಬಜೆಟ್‌ನಲ್ಲಿ ಘೋಷಿಸಿದ್ದರು. ಫಿಸಿಬಲಿಟಿ ವರದಿಯಲ್ಲಿ ತುಮಕೂರು ಮೆಟ್ರೋ ಯೋಜನೆ ಬಗ್ಗೆ ಪಾಸಿಟಿವ್ ಆಗಿ ಕೊಟ್ಟಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂದರು‌.

ನಾವು ಅಧಿಕಾರದಲ್ಲಿದ್ದಾಗ ಒಂದು ಹೇಳಬಹುದು. ಮತ್ತೊಬ್ಬರು ಅಧಿಕಾರದಲ್ಲಿದ್ದಾಗ ಮತ್ತೊಂದು ಹೇಳಬಹುದು. ಆ ರೀತಿ ಆದರೆ ರಾಜ್ಯ ಬೆಳೆಯುವುದಿಲ್ಲ. ಕರ್ನಾಟಕ ಪ್ರಗತಿಯ ರಾಜ್ಯ‌. ಎಲ್ಲರೂ ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ನಾನು ಅನೇಕ ದೇಶಗಳಿಗೆ ಹೋಗಿದ್ದೇನೆ. ಟೋಕಿಯೋದಲ್ಲಿ ನರೀಟ ಏರ್‌ಪೋರ್ಟ್ 70 ಕಿ.ಮೀ. ದೂರದಲ್ಲಿದೆ. ಮಲೇಷ್ಯಾದಲ್ಲಿ ಕೌಲಲಾಂಪುರಗೆ 20 ನಿಮಿಷದಲ್ಲಿ ಹೋಗುತ್ತಾರೆ. ಆ ರೀತಿ ಪಾಸಿಟಿವ್ ಆಗಿ ಯೋಚಿಸಬೇಕು. ನೆಗಿಟಿವ್ ಆಗಿ ಯೋಚಿಸಬೇಕಿಲ್ಲ ಎಂದರು.

ನಾನು ಏಕಾಏಕಿಯಾಗಿ ಬಿಜೆಪಿಯವರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಅವರ ನಡೆದುಕೊಳ್ಳುವ ರೀತಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಅಭಿವೃದ್ಧಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಓದಲು ಕರ್ನಾಟಕಕ್ಕೆ ಬರುತ್ತಾರೆ? ಬೇರೆಬೇರೆ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳಿವೆ. ಅಲ್ಲಿಗೆ ಯಾಕೆ ಓದಲು ಹೋಗುವುದಿಲ್ಲ. ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಶಿಕ್ಷಣ ಸಿಗುತ್ತಿದೆ ಎಂದು ಬರುತ್ತಿದ್ದಾರೆ. ಕರ್ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾವು ನೋಡಬೇಕೆ ಹೊರತು, ಬೇರೆ ವಿಚಾರಗಳಿಂದಲ್ಲ ಎಂದರು‌.

Leave a Reply