ಅಕ್ರಮ ಮರಳುಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರು
ಮಂಗಳೂರು: ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ನಿಷೇಧದಿಂದಾಗಿ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ಒದಗಿಸಬೇಕು, ಪರಿಸರಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ದ ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು,ಕೆಂಪು ಕಲ್ಲು,ಜಲ್ಲಿ ಸಿಗುವಂತಾಗಲು ಆಗ್ರಹಿಸಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ನೂರಾರು ಸಂಖ್ಯೆಯ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲೆಯ ಕೋಮು ರಾಜಕಾರಣವನ್ನು ನಿಯಂತ್ರಿಸಲು ವ್ಯಾಪಕ ಹಣದ ಹೊಳೆಯನ್ನು ಹರಿಸುವ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಅಕ್ರಮ ಮರಳುಗಾರಿಕೆಯನ್ನು ನಿಷೇಧ ಮಾಡಿರುವ ಪೋಲಿಸ್ ಇಲಾಖೆ ಜಿಲ್ಲಾಡಳಿತದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಆದರೆ ಅದರ ಜೊತೆಗೆ ಮರಳು ಹಾಗೂ ಕೆಂಪು ಕಲ್ಲಿನ ವಿಪರೀತ ದರದಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ವಿಪರೀತ ಹೊಡೆತ ಬಿದ್ದಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡು ಬದುಕು ದುಸ್ತರಗೊಂಡಿದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಉಧ್ಭವಗೊಂಡ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ರಾಜ್ಯ ಕೇಂದ್ರ ಸರಕಾರಗಳು ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಜಿಲ್ಲಾ ನಾಯಕ ರವಿಚಂದ್ರ ಕೊಂಚಾಡಿ, ಕೈಗೆಟಕುವ ದರದಲ್ಲಿ ಮರಳು ಕೆಂಪು ಕಲ್ಲು ಹಾಗೂ ಜೆಲ್ಲಿ ಸಿಗುವಂತಾಗಲು ಜಿಲ್ಲಾಡಳಿತ ಮಧ್ಯೆಪ್ರವೇಶಿಸಬೇಕು. ಆ ಮೂಲಕ ಸಂಕಷ್ಟಕ್ಕೊಳಗಾದ ಜಿಲ್ಲೆಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕು ಎಂದರು.
CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಜಿಲ್ಲೆಯ ಅಕ್ರಮ ಮರಳುಗಾರಿಕೆ ಸೇರಿದಂತೆ ಅಕ್ರಮ ದಂಧೆಗಳಿಗೆ ಅಡಿಪಾಯ ಹಾಕಿರುವ ಬಿಜೆಪಿ ಕಾಂಗ್ರೆಸ್, ಆ ಮೂಲಕ ಎಲ್ಲಾ ಅಕ್ರಮಗಳಲ್ಲಿ ಒಂದಾಗಿ ನಿಂತು ಜಿಲ್ಲೆಯ ಸೌಹಾರ್ದತೆಯನ್ನೇ ಬಲಿಕೊಟ್ಟಿದ್ದಾರೆ ಎಂದರು.
ಪ್ರಾರಂಭದಲ್ಲಿ ಕಟ್ಟಡ ಕಾರ್ಮಿಕರು ನಗರದ ಅಂಬೇಡ್ಕರ್ ವ್ರತ್ತದಿಂದ ಮೆರವಣಿಗೆಯಲ್ಲಿ ಹೊರಟು ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ದಿನೇಶ್ ಶೆಟ್ಟಿ, ಚಂದ್ರಹಾಸ ಪಿಲಾರ್, ಅಶೋಕ್ ಶ್ರೀಯಾನ್,ಲೋಕೇಶ್ ಎಂ,ಅಶೋಕ್ ಸಾಲಿಯಾನ್, ಜಯಶೀಲ ವಾಮಂಜೂರು, ರಿಚರ್ಡ್ ಕ್ರಾಸ್ತಾ, ದೀಪಕ್ ಬಜಾಲ್, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಜಗದೀಶ್ ಬಜಾಲ್ ಮುಂತಾದವರು ಸಕ್ರಿಯವಾಗಿ ಭಾಗವಹಿಸಿದರು.







