ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ 

1 year ago

ಧಾರವಾಡ: ಮಕ್ಕಳಲ್ಲಿ ಸಮಗ್ರವಾದ ವ್ಯಕ್ತಿಕತ್ವ ರೂಪಗೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷ ಸಂಘಟಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಧಾರವಾಡ ಕೆಎಂಎಫ್ ನಿರ್ದೇಶಕಿ ಹಾಗೂ ವೈಶುದೀಪ ಫೌಂಡೇಶನ್ನ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದರು.

ನಗರದ ಶಿವಾಜಿ ವೃತ್ತದ ಹತ್ತಿರ ಇರುವ ಭಾರತ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕ್ರಿಯಾಶೀಲವಾಗಿ ಭಾಗವಹಿಸಿ, ತಮ್ಮಲ್ಲಿ ಇರುವ ಪ್ರತಿಭೆಗಳನ್ನು ವ್ಯಕ್ತಪಡಿಸಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಮಗುವಿನ ವ್ಯಕ್ತಿತ್ವ ವಿಕಸದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇಲಾಖೆ ಹಾಗೂ ಸರ್ಕಾರದಿಂದ ವರ್ಷ ಪೂರ್ತಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪ್ರತಿ ಸ್ಪರ್ದಾಳುಗಳು ಪಡೆದುಕೊಳ್ಳಬೇಕು. ಸೋಲುಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೊಭಾವನೆಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಆಯ್ಕೆಯಾಗುವ ಮಕ್ಕಳು ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಂತಾಗಬೇಕು ಎಂದರು.

ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸಮತೋಲನ ಬೆಳವಣಿಗೆ ಕಾಣಲು ವಿವಿಧ ರೀತಿಯ ಕಾರ್ಯಕ್ರಮವನ್ನು ಮತ್ತು ಕಾರ್ಯಚಟುವಟಿಕೆಗಳನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕುಟುಂಬದ ಮಗು ಶಾಲೆಗೆ ಸೇರಬೇಕು ಮತ್ತು ಉತ್ತಮ ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಜಂಟಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮಗುವಿನಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜಲಶೀಲತೆಯನ್ನು ಪ್ರಸ್ತುತ ಪಡಿಸುವ ಒಂದು ಕಾರ್ಯಕ್ರಮವಾಗಿದೆ ಎಂದರು. 

ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಕಾರ್ಯದರ್ಶಿ ರಾಜು ಬಿರ್ಜನ್ನವರ, ನಿರ್ದೇಶಕ ರಾಜು ಕುಳೆ, ಸುನಿಲ್ ಮೋರೆ, ಸುಭಾಷ್ ಪವಾರ್, ಶಿವಾಜಿ ಸೂರ್ಯವಂಶಿ,ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಡಿಡಿಪಿಐ ಕಚೇರಿಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ.ಹುಡೇದಮನಿ, ವಿಷಯ ಪರೀಕ್ಷಕರಾದ ರೇಖಾ ಭಜಂತ್ರಿ, ಡಾ.ಗಿರಿಜಾ ಲಮಾಣಿ. ಡಾ.ಪ್ರಕಾಶ ಭೂತಾಳಿ. ಯಲ್ಲಪ್ಪ ಹುಬ್ಬಳ್ಳಿ, ಹಿರಿಯ ಶಿಕ್ಷಕರಾದ ರಾಜಶೇಖರ ಹೊನ್ನಪ್ಪನವರ, ನಾರಾಯಣ ಭಜಂತ್ರಿ, ಬಿ.ವಿ ಬಶೆಟ್ಟಿ ಹಾಜರಿದ್ದರು. ರೇಣುಕಾ ಇಂಗಳಕಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ನಫೀಸಬಾನು ದಾವಲಸಾಬನವರ ವಂದಿಸಿದರು.

Leave a Reply