ಬಡತನ ಮತ್ತು ಸಿರಿತನ
ಬಡತನ, ಶ್ರೀಮಂತಿಕೆ ಇರುವುದು ಬಾಳುವ ರೀತಿಯಲ್ಲಿ
ರಾಮೇಗೌಡರು ಲಾಲ್ ಬಾಗಿನಲ್ಲಿ ಎಂದಿನಂತೆ ತಮ್ಮ ವಾಕಿಂಗ್ ಮುಗಿಸಿಕೊಂಡು ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಸ್ವಲ್ಪ ದೂರದಲ್ಲಿ ಇವರ ಹಳೆಯ ಸ್ನೇಹಿತ ಚಂದ್ರಶೇಖರ್ ಬರುತ್ತಿರುವುದು ಗಮನಿಸಿದರು. ಅವರ ಬಳಿ ಮಾತನಾಡಲು ರಾಮೇಗೌಡರಿಗೆ ಅಷ್ಟು ಆಸಕ್ತಿ ಇರಲಿಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇದಕ್ಕೆ ಕಾರಣವೂ ಇದೆ. ಕೆಲವು ತಿಂಗಳುಗಳ ಹಿಂದೆ ಚಂದ್ರಶೇಖರ್ ಅವರು ಸ್ನೇಹಿತರ ಕಾರ್ಯಕ್ರಮ ಒಂದರಲ್ಲಿ ತಮ್ಮ ಮಗ ದೊಡ್ಡ ಮಟ್ಟದ ಸಂಬಳ ಪಡೆಯುತ್ತಿದ್ದಾನೆ, ಅವನು ವಿದೇಶದಲ್ಲಿ ಓದಿದ್ದಾನೆ, 5 ಕೋಟಿ ರೂಪಾಯಿಗಳ ವಿಲ್ಲ ಖರೀದಿಸಿದ್ದಾನೆ, ಎಂದು ತಮ್ಮ ಮಗನ ಬಗ್ಗೆ ಜಂಬದ ಮಾತುಗಳನ್ನಾಡುತ್ತಲೇ ಎಲ್ಲರ ಮುಂದೆ ರಾಮೇಗೌಡನ ಮಗ ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದಾನೆ ಅಷ್ಟಾಗಿ ಓದಿಲ್ಲ ಅವರ ಸಂಬಳವೂ ಕಡಿಮೆ ಎಂದು ಹೇಳುವುದರ ಜೊತೆಗೆ ರಾಮೇಗೌಡರು ಇರುವ ಮನೆಯ ರಸ್ತೆ ಬಹಳ ಚಿಕ್ಕದು ಎಂದು ಬಹಳ ವ್ಯಂಗ್ಯವಾಗಿ ಮಾತನಾಡಿದ್ದರು. ಈ ಮಾತು ರಾಮೇಗೌಡರಿಗೆ ತುಂಬಾ ದುಃಖವನ್ನು ತಂದಿತ್ತು. ಈ ಕಾರಣಕ್ಕಾಗಿ ಚಂದ್ರಶೇಖರ್ ಅವರನ್ನ ಮಾತಾಡಿಸಲು ಉತ್ಸಾಹವಿರಲಿಲ್ಲ.
ಚಂದ್ರಶೇಖರ್ ರವರು ರಾಮೇಗೌಡರ ಪಕ್ಕದಲ್ಲಿಯೇ ಬಂದು ಕುಳಿತರು. ಚಂದ್ರಶೇಖರ್ ಅವರ ಬಟ್ಟೆ ಬಹಳ ಕೊಳೆಯಾಗಿತ್ತು. ಅವರ ಮುಖದಲ್ಲಿ ದುಃಖವಿತ್ತು. ಕೆಲವು ತಿಂಗಳುಗಳ ಹಿಂದೆ ಕಂಡಂತಹ ವ್ಯಕ್ತಿ ಇವರೇನಾ ಎನ್ನುವ ಮಟ್ಟಕ್ಕೆ ಅವರ ದೇಹವು ಸೊರಗಿತ್ತು. ರಾಮೇಗೌಡರಿಗೆ ಇವರ ಸ್ಥಿತಿಯನ್ನು ಕಂಡು ಮನಸ್ಸಿನ ಮೂಲೆಯಲ್ಲಿ ಆತಂಕ ಉಂಟಾಯಿತು. ಏನೋ ಕಷ್ಟದಲ್ಲಿರಬೇಕು ಅಥವಾ ಯಾವುದೋ ಸಮಸ್ಯೆಯಲ್ಲಿ ಇವರು ಇರಬೇಕು ಹಳೆಯ ಘಟನೆಗಳನ್ನು ಮರೆತು ಮಾತನಾಡಿಸಬೇಕು ಎಂದು ತೀರ್ಮಾನಿಸಿ, ಚಂದ್ರಶೇಖರ್ ರವರನ್ನ ಕುರಿತು ಏನ್ ಚಂದ್ರಶೇಖರಾಚಾರ್ಯರೇ ಆರೋಗ್ಯ ಚೆನ್ನಾಗಿಲ್ವಾ? ಏನೋ ನಿಮ್ಮಲ್ಲಿ ಸ್ವಲ್ಪ ಬದಲಾವಣೆ ಇದೆ ಎಂದು ಹೇಳಿದರು.
ಕೆಲವು ನಿಮಿಷ ಮೌನವಾಗಿ ಇದ್ದ ಚಂದ್ರಶೇಖರ್ ಅವರು ಕಣ್ಣಿನಿಂದ ನೀವು ಸುರಿಸುತ್ತ ದುಃಖಭರಿತರಾಗಿ ನಿಧಾನವಾಗಿ, ಎಲ್ಲಾ ನನ್ನ ಕರ್ಮ ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರುರವರೇ ಸಮಸ್ಯೆ ಏನು ಹೇಳಿ ನಮ್ಮ ಇತಿಮಿತಿಯಲ್ಲಿ ಸಹಾಯ ಮಾಡುವುದಾದರೆ ಮಾಡೋಣ ಎಂದು ರಾಮೇಗೌಡರು ಅವರ ಭುಜವನ್ನ ಸವರುತ್ತಾ ಹೇಳಿದರು.
ಇಲ್ಲ ರಾಮಗೌಡ್ರೆ, ನೀವೇ ಪುಣ್ಯವಂತರು ನನಗೆ ಕೆಲವು ತಿಂಗಳುಗಳ ಹಿಂದೆ ಬಡತನ ಮತ್ತು ಶ್ರೀಮಂತಿಗೆ ಇರುವ ಅರ್ಥ ಆಯಿತು ಎಂದು ಮಾರ್ಮಿಕವಾಗಿ ಹೇಳಿದರು.
ರಾಮೇಗೌಡರು ಸಮಾಧಾನ ಮಾಡಿದರು.
ರಾಮೇಗೌಡರೇ ನನ್ನ ಮಗ ವಿದೇಶದಲ್ಲಿ ಓದಿದ್ದಾನೆ, ದೊಡ್ಡ ಮಟ್ಟದ ಸಂಬಳ ಪಡಿತಾನೆ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಿಲ್ಲ ತೆಗೆದುಕೊಂಡಿದ್ದಾನೆ, ದುಬಾರಿ ಬೆಲೆಯ ಕಾರು ಇದೆ ಎಂದು ಬಹಳ ಗರ್ವದಿಂದ ಹೇಳಿದೆ ನೀವು ಅಂದು ನನ್ನ ಬಗ್ಗೆ ಬಹಳ ಬೇಸರ ಮಾಡಿಕೊಂಡ್ರಿ. ನೀವು ಪುಣ್ಯವಂತರು ನಿಮ್ಮ ಮಗ ನಿಮ್ಮ ಜೊತೆಯಲ್ಲಿ ಇದ್ದಾನೆ ನಿಮ್ಮನ್ನು ಪ್ರೀತಿಯಿಂದ ನೋಡ್ಕೋತ ಇದ್ದಾನೆ, ನಿಮ್ಮ ಮನೆ ಚಿಕ್ಕದಾದರೂ ನಿಮ್ಮ ಮಗನ ಮನಸ್ಸು ದೊಡ್ಡದು, ನಿಮ್ಮದು ನಿಜಕ್ಕೂ ಶ್ರೀಮಂತ ಬದುಕು ಎಂದರು.
ಅಂತಹ ಘಟನೆ ಏನಾಯಿತು ಯಾಕೆ ಇಷ್ಟೊಂದು ಬೇಸರದಲ್ಲಿ ಇದ್ದೀರಿ ಎಂದು ರಾಮೇಗೌಡರು ಕುತೂಹಲದಿಂದಲೇ ಕೇಳಿದರು.
ನಾನು ನನ್ನ ಹೆಂಡ್ತಿ ಮಗನ ಜೊತೆ ಅವನ ಮನೆಯಲ್ಲಿ ಇದ್ದೆವು. ಕೆಲವು ತಿಂಗಳ ಹಿಂದೆ ನಾನು ಕಾಫಿ ಕುಡಿಯುವಾಗ ಕೈ ಜಾರಿ ಕಾಫಿ ಲೋಟ ನಾನು ಕುಳಿತಿದ್ದ ಸೋಫಾ ಮೇಲೆ ಬಿದ್ದು ಕಾಫಿ ಎಲ್ಲಾ ಚೆಲ್ಲಿ ಹೋಯಿತು. ಆಗ ನನ್ನ ಸೊಸೆ ಇಷ್ಟು ದುಬಾರಿ ಸೋಫಾ ಮೇಲೆ ಈ ರೀತಿ ಕಾಫಿ ಚೆಲ್ಲಿ ಹಾಳ್ ಮಾಡಿದ್ದೀರಿ ನಿಮಗೆ ಇದರ ಬೆಲೆ ಗೊತ್ತಿಲ್ಲ ಎಂದು ನಿರ್ಧಾಕ್ಷಿಣ್ಯವಾಗಿ ಮಾತನಾಡಿದಳು. ನನ್ನ ಮಗ ಏನೂ ಮಾತನಾಡದೆ ಸುಮ್ಮನಿದ್ದ ಎಂದರು.
ತುಸು ಸಾವರಿಸಿಕೊಂಡು, ಮುಂದುವರೆದು, ಮತ್ತೆ ಇನ್ನೊಂದು ಘಟನೆ ಏನೆಂದರೆ ನನ್ನ ಹೆಂಡತಿ ನನ್ನ ಮಗ ಸೊಸೆಯ ಜೊತೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮದುವೆ ಮನೆಯಿಂದ ಬರುವಾಗ ನನ್ನ ಮಗ ಸೊಸೆ ನನ್ನ ಹೆಂಡತಿಯನ್ನು ಅಲ್ಲಿಯೇ ಬಿಟ್ಟು ಬೇರೆಯವರನ್ನ ಕಾರಿನಲ್ಲಿ ಕುಡಿಸಿಕೊಂಡು ಹೊರಟುಬಿಟ್ರಂತೆ ನನ್ನ ಹೆಂಡ್ತಿ ಆಟೋದಲ್ಲಿ ಕಷ್ಟಪಟ್ಟು ಮನೆಗೆ ಬಂದಳು. ನಾನು ನನ್ನ ಮಗನಿಗೆ ಏನಪ್ಪಾ ನಿಮ್ಮಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಬರಲು ಆಗಲಿಲ್ಲವೇ ಅವಳದಷ್ಟು ತಿಳುವಳಿಕೆ ಇಲ್ಲ ಅವಳು ಆಟೋದಲ್ಲಿ ಬರಬೇಕಾದರೆ ಎಷ್ಟು ಕಷ್ಟಪಟ್ಟು ಬಂದಿದ್ದಾಳೆ ನಿನಗೆ ಗೊತ್ತಾ ನೀನು ಮಾಡಿದ್ದು ಸರಿನಾ ಎಂದು ಕೇಳಿದ್ದಕ್ಕೆ ಅವನು ಹೇಳ್ದ, ಅಪ್ಪ ನನ್ನ ಸ್ನೇಹಿತರ ಹೆಂಡತಿ ಅವಳ ಮಗು ಡ್ರಾಪ್ ಹಾಕಲು ಕೇಳಿಕೊಂಡರು ಅದಕ್ಕೆ ಅಮ್ಮನನ್ನ ಆಟೋದಲ್ಲಿ ಬರಕ್ಕೆ ಹೇಳಿದೆ. ಅಂದ ಅಷ್ಟರಲ್ಲಿ ಅವನ ಹೆಂಡತಿ ಅಷ್ಟೇ ಅಲ್ಲ ಅತ್ತೆಗೆ ಕಾರಿನ ಡೋರು ಹಾಕಕ್ ಬರಲ್ಲ. ಮೊನ್ನೆ ಒಂದು ಸಲ ಕಾರಿನ ಡೋರ್ ನ ಜೋರಾಗಿ ಹಾಕಿದ್ರು. ಇದರಿಂದ ಕಾರಿಗೆ ಡ್ಯಾಮೇಜ್ ಆಯ್ತು. ಇದು ಒಂದು ಕಾರಣ ಅವರನ್ನ ಕಾರಲ್ಲಿ ಕರ್ಕೊಂಡು ಬರಲಿಲ್ಲ ಎಂದು ಸಮಜಾಯಿಷಿ ಹೇಳಿದಳು.
ಸರಿ ಬಿಡಪ್ಪ ನಾವು ಹಿಂದಿನ ಕಾಲದವರು ನೀವು ಆಧುನಿಕ ಯುಗದವರು ನಿಮ್ಮ ಜೊತೆಯಲ್ಲಿ ನಾವು ಇರಲು ಸಾಧ್ಯವಿಲ್ಲ ನಾನು ನನ್ನ ಹೆಂಡತಿ ಯಾವುದಾದ್ರೂ ವೃದ್ಧಾಶ್ರಮಕ್ಕೆ ಸೇರ್ಕೋತೀವಿ ಎಂದು ಹೇಳಿದೆ.
ಅದಕ್ಕೆ ಮಗ ಸೊಸೆ ಇಬ್ರು, ನಾವು ಸಹ ಅದೇ ಆಲೋಚನೆ ಮಾಡುತ್ತಿದ್ವಿ, ನಿಮಗೆ ಹೇಗೆ ಹೇಳೋದು ಅಂತ ಕಾಯ್ತಾ ಇದ್ವಿ, ತಾವು ಹೋಗುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ಅದರ ಖರ್ಚು ವೆಚ್ಚ ನಾವು ನೋಡ್ಕೋತೀವಿ ಎಂದು ನೇರವಾಗಿ ಹೇಳಿದರು.
ಅದರ ಅವಶ್ಯಕತೆ ಇಲ್ಲ ನಾನು ಸರ್ಕಾರಿ ನೌಕರಿಯಲ್ಲಿದ್ದೆ, ಸಾಕಷ್ಟು ಪಿಂಚಣಿ ಹಣ ಬರುತ್ತೆ ನನ್ನ ಹೆಂಡತಿನ ಊಟ ಹಾಕಿ ಸಾಕುವ ಶಕ್ತಿ ಇದೆ ಎಂದು ಸ್ವಲ್ಪ ಸಿಟ್ಟಿನಿಂದ ಹೇಳಿದೆ.
ಇನ್ನು ಆ ಮನೆಯಲ್ಲಿ ಇರಬಾರದು ಅಂತ ಈಗ ಆಶ್ರಮದಲ್ಲಿದ್ದೀವಿ, ಈ ಘಟನೆಗಳಿಂದ ಮನಸ್ಸಿಗೆ ಬೇಸರ ಆಗಿದೆ ಎಂದು ತಮ್ಮ ಪರಿಸ್ಥಿತಿಯನ್ನ ವಿವರಿಸಿದರು.
ಹೌದು ಚಂದ್ರಶೇಖರ್ ಅವರೇ ನಮ್ಮ ಮಕ್ಕಳು ಎಷ್ಟು ವಿದ್ಯೆಯನ್ನ ಪಡೆದಿದ್ದಾರೆ, ಎಷ್ಟು ಮೊತ್ತದ ಸಂಬಳ ಗಳಿಸ್ತಿದ್ದಾರೆ, ಅವರ ಬದುಕಿನ ರೀತಿ ಎಷ್ಟು ಎನ್ನುವುದಕ್ಕಿಂತ ಅವರು ಎಷ್ಟರಮಟ್ಟಿಗೆ ಬದುಕನ್ನ ನಡೆಸ್ತಾ ಇದ್ದಾರೆ ಎನ್ನುವುದು ಮುಖ್ಯವಾಗುತ್ತೆ ನೀವು ಹೇಳಿದ ಹಾಗೆ ನಾನು ಪ್ರೀತಿಯ ವಿಚಾರದಲ್ಲಿ ಶ್ರೀಮಂತನೇ ಸರಿ.
ಈ ಮಾತು ಹೇಳುವಾಗ ರಾಮೇಗೌಡರ ಮುಖದಲ್ಲಿ ಸಂತೋಷವಿತ್ತು. ಚಂದ್ರಶೇಖರ್ ಅವರೇ ಬೇಸರ ಮಾಡ್ಕೋಬೇಡಿ, ಏನು ನಮ್ಮ ಪಾಲಿಗೆ ಬರುತ್ತೋ ಅದನ್ನು ಅನುಭವಿಸಬೇಕು. ನಿಶ್ಚಿಂತೆಯಿಂದ ಇರಿ, ಎಂದು ಸಮಾಧಾನದ ಮಾತನ್ನ ಆಡಿದರು. ಚಂದ್ರಶೇಖರ್ ಅವರು ತಮ್ಮ ಬೆರಳ ತುದಿಯಿಂದ ಕಣ್ಣಿನಿಂದ ಬರುತ್ತಿದ್ದ ನೀರನ್ನು ಒರೆಸಿಕೊಂಡು ಬೆಂಚಿನ ಹಿಂದೆ ಸರಿದು ಕ್ಷಣ ಕಾಲ ಕಣ್ಣು ಮುಚ್ಚಿ ಕುಳಿತರು. ಚಂದ್ರಶೇಖರ್ ಅವರ ಪರಿಸ್ಥಿತಿಯನ್ನ ಕೇಳಿ ರಾಮೇಗೌಡರಿಗೆ ಬೇಸರವಾಯಿತು. ಜೊತೆಗೆ ತಮ್ಮ ಬದುಕಿನ ಬಗ್ಗೆ ಸಮಾಧಾನವು ಆಯಿತು.
– ಕೆ ಎಸ್ ನಾಗರಾಜ್, ಬೆಂಗಳೂರು




