ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಶಾಸಕರ ಆಗ್ರಹ

2 years ago

ಬೆಂಗಳೂರು: ಕೇಂದ್ರ  ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಪತ್ರ ಬರೆದು ಅದನ್ನು ತಮ್ಮ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಿರುವ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಶಾಸಕರು ಆಗ್ರಹಿಸಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ತಮ್ಮ ಸೇವಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆಪಾದಿಸಿ ದೂರು ಸಲ್ಲಿಸಿದರು.

ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ಎರವಲು ಸೇವೆಯ ಮೇಲೆ ರಾಜ್ಯಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ. ನಿಯಮ ಬಹಿರವಾಗಿ ಅವರು ಇನ್ನೂ ರಾಜ್ಯ ಸರ್ಕಾರದ ಸೇವೆಯಲ್ಲಿ ಮುಂದುವರೆದಿದ್ದಾರೆ. ತಕ್ಷಣವೇ ಅವರನ್ನು ಅವರ ಮಾತೃ ರಾಜ್ಯಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದರು. 

ಚಂದ್ರಶೇಖರ್ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ರೀತಿಯಲ್ಲಿ ಪತ್ರ ಬರೆದು ಅದನ್ನು ತಮ್ಮ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಿದ್ದಲ್ಲದೆ, ವ್ಯವಸ್ಥಿತವಾಗಿ ಅದನ್ನು ಮಾಧ್ಯಮಗಳಲ್ಲಿ ಹರಿಯ ಬಿಡುವ ಮೂಲಕ ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಮತ್ತು ಮಸಿ ಬಳಿಯುವ  ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.

ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಎಡಿಜಿಪಿ ಚಂದ್ರಶೇಖರ್ ಅವರು ತಮ್ಮ ಪತ್ರದಲ್ಲಿ ಬರ್ನಾರ್ಡ್ ಷಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅವರು ಅದನ್ನು ಕುಮಾರಸ್ವಾಮಿಯವರನ್ನು ಉದ್ದೇಶಿಸಿ ಹೇಳಿಲ್ಲ. ನನಗೇ ಹೇಳಿರುವುದು ಎಂದು ಕುಮಾರಸ್ವಾಮಿ ಯಾಕೆ ಭಾವಿಸಬೇಕು? ಎಂದು ಪ್ರಶ್ನಿಸಿದರು.

ಚಂದ್ರಶೇಖರ್ ನೇತೃತ್ವದ ಎಸ್ಐಟಿಯನ್ನು ಕಾನೂನು ಪ್ರಕಾರವೇ ರಚಿಸಲಾಗಿದೆ. ಅವರು ಅವರ ಕೆಲಸ ಮಾಡ್ತಾರೆ. ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

Leave a Reply