ಶಾಲಾ ಆವರಣದಲ್ಲಿ ತಂಬಾಕು ನಿಷೇಧ ಫಲಕ ಅವಳವಡಿಸಲು ಸೂಚನೆ

2 years ago

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ದಾವಣಗೆರೆ: ಶಾಲಾ, ಕಾಲೇಜಿನ ಸಮೀಪ ಕಾಯ್ದೆಯಡಿ ತಂಬಾಕು ನಿಷೇದ ಕುರಿತು ಫಲಕಗಳನ್ನು ಜುಲೈ ಅಂತ್ಯದೊಳಗಾಗಿ ಅಳವಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ.ಕರೆಣ್ಣವರ್ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ದಾವಣಗೆರೆ ಉತ್ತರ, ದಕ್ಷಿಣ ಹಾಗೂ ಚನ್ನಗಿರಿ ವ್ಯಾಪ್ತಿಯಲ್ಲಿ ಶೇಕಡಾ.50 ರಷ್ಟು ಶಾಲೆಯ ಆವರಣದಲ್ಲಿ ಕೋಟ್ಪಾ-2003 ರ ಕಾಯ್ದೆಯ ಸೆಕ್ಷನ್-6ಬಿ ನಾಮಫಲಕವನ್ನು ಅಳವಡಿಸಿರುವುದಿಲ್ಲ. ಫಲಕ ಅಳವಡಿಸದೇ ಇರುವ ಎಲ್ಲಾ ಶಾಲಾ-ಕಾಲೇಜು, ಪದವಿ ಕಾಲೇಜು ವಸತಿ ಹಾಗೂ ವಸತಿ ರಹಿತ ಸಂಸ್ಥೆಗಳಲ್ಲಿ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಮಾರ್ಗಸೂಚಿ ಅನ್ವಯ ಜುಲೈ ಅಂತ್ಯದೊಳಗೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ನಾಮಫಲಕ ವನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು.

ಮಾರ್ಗಸೂಚಿ ಅನ್ವಯ ತಹಶೀಲ್ದಾರರ ನೇತೃತ್ವದಲ್ಲಿ ವಾರಕ್ಕೆ ಒಂದರಂತೆ ತಂಬಾಕು ದಾಳಿ ಕೈಗೊಳ್ಳಬೇಕು ಹಾಗೂ 3 ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆಯನ್ನು ನಡೆಸಿ ಸಭಾ ನಡಾವಳಿಯನ್ನು ಸಲ್ಲಿಸಬೇಕು. ಎಲ್ಲಾ ಶೈಕ್ಷಣಿಕ ಸಂಸ್ಥೆಯ ಸುತ್ತ-ಮುತ್ತ 100 ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಲ್ಲಿ ಪೋಲೀಸ್ ಇಲಾಖೆ ಹಾಗೂ ಸ್ಥಳೀಯ ಸರ್ಕಾರಕ್ಕೆ ತಿಳಿಸಿ, ತಂಬಾಕು ಮಾರಾಟ ಆಗದಂತೆ ಕಠಿಣ ಕ್ರಮ ವಹಿಸುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ ಎಂದರು. 

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಪ್ರತ್ಯೇಕ ಪರವಾನಗಿ ಅನುಷ್ಠಾನಗೊಳ್ಳುತ್ತಿದ್ದು ಈ ವರೆಗೂ ಕೆವಲ 72 ಪರವಾನಗಿಯನ್ನು ನೀಡಿದೆ. ವ್ಯಾಪಾರಸ್ಥರು ಪರವಾನಗಿ ಪಡೆಯದೆ ಇದ್ದರೆ ಪರವಾನಗಿ ಶುಲ್ಕದ ದುಪ್ಪಟ್ಟು ದಂಡ ವಿಧಿಸಿ ಪರವಾನಗಿ ಪಡೆಯುವಂತೆ ಕ್ರಮವಹಿಸಲು ತಿಳಿಸಿದರು.

ನಗರಾಭಿವೃದ್ದಿ ಕೋಶದಿಂದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಂಬಾಕು ವ್ಯಾಪಾರದ ಪ್ರತ್ಯೇಕ ಪರವಾನಗಿ ನೀಡುವಂತೆ ಕ್ರಮ ವಹಿಸಲು ಸೂಚಿಸಿದರು.

ಪೋಲೀಸ್ ಇಲಾಖೆ ವತಿಯಿಂದ 1471 ಪ್ರಕರಣ ದಾಖಲಿಸಿ 1,47,250 ರೂ, ಮಹಾನಗರ ಪಾಲಿಕೆ ವತಿಯಿಂದ 75 ಪ್ರಕರಣ ರೂ.15,000 ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ 195 ಪ್ರಕರಣ ದಾಖಲಿಸಿ 25,000 ದಂಡ ವಿಧಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಪಿ.ಎನ್ ಲೋಕೇಶ, ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ವಿಜಯ ಕುಮಾರ್ ಎಂ. ಸಂತೋಷ್, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ.ಷಣ್ಮುಖಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿಯಾದ ಡಾ.ರಾಘವನ್ ಜಿ.ಡಿ, ಅಬಕಾರಿ ಉಪ ಅಧೀಕ್ಷಕರಾದ ಮುರುಗೇಶ್, ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್, ವಿಭಾಗೀಯ ಸಂಯೋಜಕರಾದ ಮಹಾಂತೇಶ್ ಬಿ ಉಳ್ಳಾಗಡ್ಡಿ, ಸಾರಿಗೆ ಇಲಾಖೆ ಅಧಿಕಾರಿ ಹೆಚ್.ಸಿ ರವಿ, ಡಾ.ತಿಪ್ಪೇಸ್ವಾಮಿ, ಡಾ.ಅಬ್ದುಲ್ ಖಾದರ್,   ಡಾ.ಸುರೇಶ್ ಬಾರ್ಕಿ, ಸತೀಶ್ ಕಲಹಾಳ್ ಮತ್ತು ಇತರರು ಹಾಜರಿದ್ದರು.

Leave a Reply