ದಲಿತರಿಗೆ ಅರಮನೆ ಪ್ರವೇಶ ಕಲ್ಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್: ಹನಸೋಗೆ ಸೋಮಶೇಖರ್ 

10 months ago

ಚಾಮರಾಜನಗರ: ಪ್ರಜಾಪ್ರತಿನಿಧಿ ಸಭೆಯಲ್ಲಿ ಎಲ್ಲಾ ಜಾತಿ ವರ್ಗಗಳಿಗೆ ಪ್ರಾತಿನಿಧ್ಯ ನೀಡಿ, ದಲಿತರಿಗೆ ಅರಮನೆ ಪ್ರವೇಶ ಕಲ್ಪಿಸಿದ ಸಾಮಾಜಿಕ ಕಾನೂನುಗಳ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಕವಿ ಹನಸೋಗೆ ಸೋಮಶೇಖರ್ ಬಣ್ಣಿಸಿದರು.

ಪರಿವರ್ತನ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 141ನೆಯ ಜಯಂತಿ  ಸಮಾರಂಭವನ್ನು ಮರೆಯೋದುಂಟೆ ಮೈಸೂರು ದೊರೆಯ….ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ…. ಎಂಬ ತಾವೇ ಬರೆದಿರುವ ಹಾಡನ್ನು ಹಾಡುವುದರ ಮೂಲಕ ಮೊಂಬತ್ತಿ ಬೆಳಗಿ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಮಹಾ ಸಂಸ್ಥಾನದಲ್ಲಿ ಸುದೀರ್ಘ 38 ವರ್ಷಗಳ ಕಾಲ ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟಿದ್ದ ದಕ್ಷ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಾಧಕರ ಸಾಧನೆಯನ್ನು ಮೊಬೈಲನ್ನು ನೋಡುವುದನ್ನು ಬಿಟ್ಟು ಪುಸ್ತಕ ಓದಿ ತಿಳಿದುಕೊಳ್ಳಬೇಕು ಎಂದರು.

ನಾಲ್ಕು ದಶಕಗಳ ನಾಲ್ವಡಿ ಕೃಷ್ಣರಾಜ ಒಡೆಯರ ಸುವರ್ಣ ಯುಗದ ಚಿತ್ರಣವನ್ನು ಕಟ್ಟಿಕೊಡುವ ಹೆಚ್ಚು ಪುಸ್ತಕಗಳು ಲಭ್ಯವಿಲ್ಲ. ಇತಿಹಾಸದ ಪುಟಗಳಲ್ಲಿ ನಾಲ್ವಡಿ ಅವರ ಸಾಧನೆಗಳನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆದಿರುವುದು ಬೇಸರದ ಸಂಗತಿ ಎಂದರು.

ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ. ದೇವರಾಜ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಕೀರ್ತಿ ಹಿರಿಮೆಯನ್ನು ದೇಶದ ಉದ್ದಗಲಕ್ಕೂ ಹಬ್ಬಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಶ್ವ ಜ್ಞಾನಿಯಾಗಿದ್ದರು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿಯ ಹರಿಕಾರರಾಗಿ, ಮೈಸೂರು ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ, ಕೆಆರ್ ಮಾರ್ಕೆಟ್, ನಿಮ್ಹಾನ್ಸ್ ಆಸ್ಪತ್ರೆ, ಕೆ ಆರ್ ಎಸ್ ಅಣೆಕಟ್ಟು ನಿರ್ಮಾಣ, ಬೆಂಗಳೂರು ಟೌನ್ ಹಾಲ್, ಮಂಡ್ಯ ಸಕ್ಕರೆ ಕಾರ್ಖಾನೆ, ಭದ್ರಾವತಿ ಕಬ್ಬಿಣ ಕಾರ್ಖಾನೆ, ಮೈಸೂರು ಮೆಡಿಕಲ್ ಕಾಲೇಜು, ಮೈಸೂರು ಲ್ಯಾಂಪ್ಸ್, ಪೇಪರ್ ಮಿಲ್, ವಾಣಿವಿಲಾಸ ಮಕ್ಕಳ ಆಸ್ಪತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ರೈಲು ನಿಲ್ದಾಣಗಳ ನಿರ್ಮಾಣ, ಕಾವೇರಿ ನದಿಗೆ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಕಾರ್ಯಾಗಾರ ಸ್ಥಾಪನೆ ಸಹಿತ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಲೆಕ್ಕಾಧಿಕಾರಿ ಎನ್ ಮಹೇಶ್ ಮಾತನಾಡಿ, ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಜನಾನುರಾಗಿ ಮಹಾರಾಜರಾಗಿದ್ದರು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಮಾತನಾಡಿ, ನೂರು ವರ್ಷಗಳ ಇತಿಹಾಸ ಇರುವ ಚಾಮರಾಜನಗರದ ರೈಲು ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು. ನಾಲ್ವಡಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಎಂ. ಕೃಷ್ಣಮೂರ್ತಿ, ಕಿರಿಯ ಇಂಜಿನಿಯರ್ ಎಸ್ ಸಿದ್ದರಾಜಪ್ಪ, ಚಾಮರಾಜನಗರ ದಸಾಪ ಅಧ್ಯಕ್ಷ ಶಿವಕುಮಾರ್ ಸರಗೂರು, ಗುಂಡ್ಲುಪೇಟೆ ಅಧ್ಯಕ್ಷ ಕೆ. ಯೋಗೇಶ್, ಯಳಂದೂರು ಅಧ್ಯಕ್ಷ ಬಳೆಪೇಟೆ ಪ್ರಕಾಶ್ ಹಾಜರಿದ್ದರು.

Leave a Reply