ನಾಯಕರು ತಮಗೆ ಅಂಟಿರುವ ಕಳಂಕವನ್ನು ಮೊದಲು ತೊಳೆದುಕೊಳ್ಳಲಿ: ಪರಮೇಶ್ವರ್

7 months ago

ಬೆಂಗಳೂರು: ಅಸಹಜ ಸಾವುಗಳ ಆರೋಪ‌ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳಕ್ಕೆ ರಾಜಕೀಯ ನಾಯಕರ ದಂಡು ಭೇಟಿ ನೀಡುತ್ತಿದೆ. ರಾಜ್ಯದ ಮೂರೂ ಪಕ್ಷಗಳ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ನಡುವೆ ಇದರ ವಿರುದ್ಧ ವ್ಯಾಪಕ ಟಿಕೆ ಕೂಡ ಕೇಳಿಬರುತ್ತಿದೆ.

ಮತ್ತೊಂದೆಡೆ ಪಂಚಮಸಾಲಿ ಮಠಾಧೀಶ ವಚನಾನಂದ ಸ್ವಾಮಿ ನೇತೃತ್ವದಲ್ಲಿ ಮಠಾಧೀಶರ ನಿಯೋಗವೊಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಎನ್ ಐಎ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದೆ.

ಪ್ರಕರಣದ ಆರೋಪದಿಂದ ಧರ್ಮಸ್ಥಳಕ್ಕೆ ಉಂಟಾಗಿರುವ ಅಪಖ್ಯಾತಿಯನ್ನು ದೂರ ಮಾಡಲು ಹೋಗುತ್ತಿರುವ ನಾಯಕರು ತಮಗೆ ಅಂಟಿರುವ ಕಳಂಕವನ್ನು ಮೊದಲು ತೊಳೆದುಕೊಳ್ಳಲಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರೆ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಇನ್ನು ಮುಂದೆ ನಾವು ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಬೇಡಿಕೊಳ್ಳಲಿ ಎಂದು ಬಿಜೆಪಿಯ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಅಸಹಜ ಸಾವುಗಳ ಆರೋಪ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಎಸ್ ಐ ಟಿ ತನಿಖೆಗೆ ಆದೇಶಿಸಿದ ನಂತರ ರಾಜಕೀಯ ನಾಯಕರು ಧರ್ಮಸ್ಥಳ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳ ಎಲ್ಲರಿಗೂ ಸೇರಿದ ಆಸ್ತಿ. ಧರ್ಮಸ್ಥಳದ ಮಂಜುನಾಥನಿಗೆ ನಾವೆಲ್ಲರೂ ಭಕ್ತರು. ಯಾವಾಗ ಯಾರನ್ನು ತಮ್ಮ ಬಳಿ ಬರಬೇಕೆಂದು ಬಯಸುತ್ತಾನೋ ಆಗ ಎಲ್ಲರೂ ಹೋಗಿ ಆತನ ದರ್ಶನ ಮಾಡಿ ಪೂಜೆ ಮಾಡಿ ಬರುತ್ತೇವೆ. ಆದರೆ ಈ ಪ್ರಕರಣದ ನಂತರ ರಾಜಕೀಯ ನಾಯಕರು ಸಾಲು ಸಾಲಾಗಿ ಧರ್ಮಸ್ಥಳಕ್ಕೆ ಹೋಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ತಮ್ಮ ಪಕ್ಷದ ಶಾಸಕರು ಸೇರಿದಂತೆ ಹಲವರು ಕಾರು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇಂತಹ ನಾಯಕರು ಧರ್ಮಸ್ಥಳಕ್ಕೆ ಅಂಟಿರುವ ಕಳಂಕ ದೂರಾಗಲಿ ಎಂದು ಹೇಳುವುದು ಬೇಡ. ತಮಗೆ ಅಂಟಿರುವ ಕಳಂಕದಿಂದ ನಮ್ಮನ್ನು ಪಾರು ಮಾಡು ಎಂದು ಮಂಜುನಾಥನಲ್ಲಿ ಪ್ರಾರ್ಥಿಸಲಿ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸೋದರ ಸಂಬಂಧಿ ಹಾಗೂ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ನೇತೃತ್ವದಲ್ಲಿ ಹೊರಟ ಕಾರು ರ್ಯಾಲಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇವರೆಲ್ಲ ಏನೇನು ಮಾಡಿದ್ದಾರೆ ಎಂಬುದು ಗೊತ್ತು. ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಯಾತ್ರೆ ನಡೆಸುತ್ತಿದ್ದಾರೆ ಎಂದರು. 

ತಾವು ಕೂಡ ಮಂಜುನಾಥನ ಭಕ್ತ. ನಾನೊಬ್ಬನೇ ಅಲ್ಲ, ರಾಜ್ಯದ ಎಲ್ಲ ಜನರು ಕೂಡ ಮಂಜುನಾಥನನ್ನು ಪೂಜಿಸುತ್ತಾರೆ. ತಮಗೆ ಬೇಕೆಂದಾಗ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಇವರೆಲ್ಲ ಈಗ ಯಾಕೆ ಹೋಗುತ್ತಿದ್ದಾರೆ? ಅವರು ಅಲ್ಲಿಗೆ ಹೋಗಿ ಮಾಡುವುದಾದರೂ ಏನು ಎಂದು ಪ್ರಶ್ನಿಸಿದರು. 

Leave a Reply