ಕುತೂಹಲಕ್ಕೆ ಕಾರಣವಾದ ಎಚ್ ಸಿ ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಬ್ರೇಕ್ಫಾಸ್ಟ್ ಮೀಟ್

1 year ago

ಬೆಂಗಳೂರು: ದೆಹಲಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಕೂಡ ಉಪಹಾರಕೂಟ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರ ನಿವಾಸಕ್ಕೆ ತೆರಳಿ ಸುಧೀರ್ಘ ಸಮಯದವರೆಗೆ ಮಾತುಕತೆ ನಡೆಸಿದರು. ದೆಹಲಿಯಲ್ಲಿ ತಾವು ವರಿಷ್ಠರ ಜೊತೆ ನಡೆಸಿದ ಚರ್ಚೆಯ ವಿಷಯ ಮತ್ತು ಕೇಂದ್ರ ಸಚಿವರ ಜೊತೆ ನಡೆಸಿರುವ ಮಾತುಕತೆ ವಿವರಗಳನ್ನು ಅವರ ಜೊತೆ ಹಂಚಿಕೊಂಡರು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ದೂರು ನೀಡಿದ್ದಾರೆ. ಅದರ ತನಿಖೆಯಾಗುತ್ತಿದೆ. ಈ ಹಂತದಲ್ಲಿ ಯಾವುದೇ ವಿಚಾರ ಚರ್ಚಿಸುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರು ಬೇಕು ಎಂಬ ವಾದ ಮಂಡಿಸಿದ್ದ ಅವರು ಇದೀಗ ಅಧ್ಯಕ್ಷರಿದ್ದಾರೆ ಅವರು ಪಕ್ಷದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಎಚ್ ಸಿ ಮಹದೇವಪ್ಪ ಮಾತನಾಡಿ, ವಿಪಕ್ಷಗಳ ಆರೋಪ ಸಿಎಂ ಆಪ್ತರಿಗೆ ರಕ್ಷಣೆ ಇಲ್ಲ, ಸಚಿವರ ಪುತ್ರನಿಗೆ ಪ್ರಾಣ ಬೆದರಿಕೆ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಪ್ರಕರಣಕ್ಕೂ ಕಾನೂನು ಸುವ್ಯವಸ್ಥೆಗೂ ಸಂಬಂಧವಿಲ್ಲ ಎಂದರು.

ಸಚಿವ ಸಂಪುಟ ಪುನರ್ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಯಾವುದೇ ವಿಚಾರಗಳಾಗಿದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ನಾವು ಚರ್ಚೆ ಮಾಡುವುದು ಸೂಕ್ತ ಅಲ್ಲ ಎಂದರು.

ಸತೀಶ್ ಜಾರಕಿಹೊಳಿ ಮತ್ತು ತಾವು 30 ವರ್ಷದ ಸ್ನೇಹಿತರಾಗಿದ್ದು, ಪದೇಪದೇ ಭೇಟಿ ಮಾಡುತ್ತಿರುತ್ತೇವೆ. ಇಂದು ಬೆಳಿಗ್ಗೆ ಸಹಜವಾಗಿಯೇ ಉಪಹಾರಕ್ಕೆ ಆಹ್ವಾನಿಸಿದ್ದೆ ಎಂದರು.

Leave a Reply