Bypass ಮಾಡುವ ಖಯಾಲಿ

1 year ago

ಕನ್ನಡ ಕಾವ್ಯ ಅಥವಾ ಕನ್ನಡ ಸಾಂಸ್ಕೃತಿಕ ಲೋಕ ತುಂಬಾ ಶ್ರೀಮಂತಿಕೆಯದು, ಮಾನವೀಯತೆಯದು ಮತ್ತು ಹೃದ್ಯವಾದದ್ದು. ಅದನ್ನು ಹಾಗೆ ಮಾಡಿದ ಅನೇಕರು ಮುನ್ನೆಲೆಗೆ ಬರುವುದಿಲ್ಲ.

ಮುನ್ನೆಲೆಯಲ್ಲಿರುವ ಬಹತೇಕರು ಭಾಷಣ ಚತುರರು, ಯುನಿವರ್ಸಿಟಿ ಮಂದಿ ಅಥವಾ ಈ ಡಿಗ್ರಿ ಪಿಗ್ರಿ ಮತ್ತೊಂದು ಮಾಡಿದವರು….

ಇವರಿಗೂ ಅಂಥದೊಂದು ಶಕ್ತಿ ಇರುತ್ತದದಾದರೂ ನಿಜಶಕ್ತಿಯುಳ್ಳವರನ್ನ ಹಿಂದಕ್ಕೆ ಸರಿಸಿದರೆ bypass ಮಾಡಿದರೆ ಮಾತ್ರ ತಾವು ಮುನ್ನಲೆಯಲ್ಲಿರಬಹುದು ಎಂದು ಇಂಥವರು ಬಲವಾಗಿ ನಂಬಿರುತ್ತಾರೆ.

ಆನೆಗೆ ಚಿಕ್ಕ ಕಣ್ಣು ದೊಡ್ಡ ದೇಹ, ಹದ್ದಿಗೆ ಪುಟ್ಟ ದೇಹ ಅದಕ್ಕಿಂತ ಪುಟ್ಟ ಕಣ್ಣು ಆದರೆ ಅವು ಜಗತ್ತನ್ನ ತುಂಬಾ ಗಹನವಾಗಿಯೇ ಅರಿತಿರುತ್ತವೆ. ಹಾಗೆಯೇ ನಮ್ಮಲ್ಲಿ ಅನೇಕರು ಆನೆಯಂತೆ ಹದ್ದಿನಂತೆ ಆಮೆಯಂತೆ ಬಸವನಹುಳುವಿನಂತೆ ಈ ಜೀವಸಂಕುಲವನ್ನ ಸಮೃದ್ಧಗೊಳಿಸಿರುತ್ತಾರೆ. ಆದರೆ ಅವರ್ಯಾರೂ ಗಮನಕ್ಕೆ ಬರದೆ ಅಬ್ಬರಿಸುವ ಬೊಬ್ಬಿರಿಯುವ ಬುಸುಗುಡುವ ಮತ್ತು ಹಾರಾಡುವ ಮಂದಿ ಮಾತ್ರ ಸದಾ ಮುನ್ನಲೆಯಲ್ಲಿರುತ್ತಾರೆ.

ಒಂದು ಸಾರಿ ನೀವು ಓದಿದ ಎಲ್ಲ ಬರಹಗಾರರನ್ನ ನೆನಪಿಗೆ ತಂದುಕೊಳ್ಳಿ ಮತ್ತು ಈಗ ಮುನ್ನೆಲೆಯಲ್ಲಿರುವವರನ್ನ ಗಮನಿಸಿ. ನಿಮಗೆ ನನ್ನ ಮಾತುಗಳು ಬಹುತೇಕ ಸತ್ಯ ಎನ್ನಿಸದಿದ್ದರೆ ಹೇಳಿ.

ಕನ್ನಡಕ್ಕೆ ಅದ್ಭುತ ಎನ್ನುವಂಥ ಕಥೆಗಳನ್ನ ಕೊಟ್ಟು ಬೆರಗು ಮೂಡಿಸಿದ ನಾಗಮಂಗಲ ಕೃಷ್ಣಮೂರ್ತಿಯವರ ಕಥೆಗಳ ಬಗ್ಗೆ ಬಹುತೇಕರು ಮಾತೇ ಆಡುವುದಿಲ್ಲ, ಕನ್ನಡ ಕಾವ್ಯಕ್ಕೊಂದು ತಣ್ಣನೆಯ ಪಂಜಿನ ಬೆಳಕು ನೀಡಿದ ಎನ್.ರಾಜೇಶ್ವರಿಯವರ ಕವಿತೆಗಳ ಬಗ್ಗೆ ಬರಹ ಅಥವಾ ಮಾತು ನಾನು ಕೇಳಿಯೇ ಇಲ್ಲ…

ನಿಮಗೆ ‘ಕಿಚ್ಚಿಲ್ಲದೆ ಬೇಗೆ’ ಎಂಬ ಕನ್ನಡ ಸಂವೇದನೆಗೆ ಹೊಸ ಹೊಳಹು ಕೊಡಬಲ್ಲ ಅನುಭವ ಕಥನ ಗೊತ್ತಾ?

ಪೂರ್ಣಪ್ರಜ್ಞನ ಪುಟ್ಟ ಪುಟ್ಟ ಕವಿತೆಗಳ ಓದಿನ ರುಚಿ ನಿಮಗೆ ತಿಳಿದಿದೆಯಾ?

‘ಬೆಚ್ಚಿ ಬೀಳಿಸಿದ ಬೆಂಗಳೂರಿ’ನ ಪ್ರಬಂಧಗಳನ್ನ ನೀವು ಬಲ್ಲಿರಾ?

ಕಾಲಾಂತರದಲ್ಲಿ ಉಳಿದವುಗಳೇ ಸದಾ ಉಳಿಯುತ್ತವೆ. ಹೊರಗಡೆ ಅಬ್ಬರಿಸುವ ಕಡಲು ಎಲ್ಲರಿಗೂ ಕಾಣಿಸುತ್ತದೆ, ಕೇಳಿಸುತ್ತದೆ, ರುಚಿಸುತ್ತದೆ.

ಆದರೆ ಅದು ನಿಜವಲ್ಲ. ಆಳದ ಕಡಲಿನಲ್ಲಿ ಹಲವಾರು ಜೀವಂತ ನದಿಗಳಿವೆ. ಆ ನದಿಗಳಿಂದಲೇ ಕಡಲಿಗೆ ಅಸ್ತಿತ್ವ ಮತ್ತು ದನಿ.

ಕನ್ನಡದ ಸತ್ವಶೀಲ ಓದುಗ ವಲಯ ತುಂಬಾ ಮಾನವೀಯವಾದುದು. ಅದು ನಿಜವನ್ನ ಯಾವತ್ತಿಗೂ ಬದಿಗೆ ಸರಿಸುವುದಿಲ್ಲ.

ಬದಿಗೆ ಸರಿಸುವವರಿಗೆ ಈಗ ಮಾತ್ರ ಸೃಷ್ಟಿತ ಜೀವಂತಿಕೆ… ಕಾಲಾಂತರದಲ್ಲಿ …. ನಾನು ಹೇಳುವುದಿಲ್ಲ….

– ವೀರಣ್ಣ ಮಡಿವಾಳರ, ಕವಿಗಳು

Leave a Reply