ಪರಿಸರ ನಾಶವಾದರೆ ಎಲ್ಲ ರೀತಿಯ ಜೀವಿಗಳಿಗೂ ಬದುಕು ಕಷ್ಟ: ಕೆ.ಜಿ ಶಾಂತಿ

2 years ago

ಧಾರವಾಡ: ಪ್ರಮುಖ ದಿನಗಳಲ್ಲಿ ಸಸಿ ನೇಡುವುದು ಒಂದು ಸಂಪ್ರದಾಯವಾಗಿದೆ. ನಮ್ಮ ಪೂರ್ವಜರು ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಗಿಡ – ಮರಗಳಿಗೆ ಪೂಜೆಯನ್ನು ಮಾಡುತ್ತಿದ್ದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ ಶಾಂತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ-ಫೋಕಸ್, ಅರಣ್ಯ ಇಲಾಖೆ, ಧಾರವಾಡ ವಕೀಲರ ಸಂಘ, ವಾಲ್ಮಿ, ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ, ಕೆಲಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಿಗ್ಗೆ ಕೆಲಗೇರಿ ಕೆರೆಯ ಆವರಣದಲ್ಲಿ ಸಸಿ ನೇಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕೇವಲ ಪ್ರತಿ ವರ್ಷ ಜೂನ್ 5 ರಂದು ಮಾತ್ರ ಸಸಿ ನೆಡುವ ಕಾರ್ಯವಾಗಬಾರದು. ಪ್ರತಿ ದಿನ 1-2 ಸಸಿಗಳನ್ನು ನೇಡಬೇಕು. ಇಂತಹ ಒಂದು ಮಹತ್ವದ ಕಾರ್ಯಗಳಲ್ಲಿ ಸಮಾಜದ ಜನರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯು ಪ್ರಮುಖವಾಗಿದೆ. ದೇಶದಲ್ಲಿ ಶೇ. 33 ರಷ್ಟು ಇದ್ದಂತಹ ಅರಣ್ಯ ಪ್ರದೇಶ ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆಯಾಗುತ್ತಿದೆ. ಕಾರಣ ರಸ್ತೆ ಅಗಲೀಕರಣ, ದೊಡ್ಡ ಬಿಲ್ಡಿಂಗ್ಗಳು, ಬ್ರಿಜ್ಗಳ ನಿರ್ಮಾಣಕ್ಕಾಗಿ ಗಿಡ ಮರಗಳನ್ನು ಕಡಿಯುವದರಿಂದ ಪ್ರಕೃತಿ ತಾಯಿಯ ಮಡಿಲಲ್ಲಿ ಉಷ್ಣಾಂಶವು ಶೇ.43 ಸೆಲ್ ಸಿಯಸ್ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರು ಸಸಿ ನೇಡುವಂತಹ ಕಾರ್ಯವನ್ನು ಕೈಗೊಳ್ಳಬೇಕು. ಸಸಿ ನೆಟ್ಟರೆ ಸಾಲದು ಅದಕ್ಕೆ ಸರಿಯಾಗಿ ಗೊಬ್ಬರ, ನೀರು ಹಾಕಬೇಕು ಎಂದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗಿಡ ಮರಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಬೇಕು. ಪೋಷಕರು ಮಕ್ಕಳನ್ನು ಸಮಾಜಮುಖಿಯಾಗಿಸುವುದರ ಜೊತೆಗೆ ಪರಿಸರ ಪ್ರೇಮಿಯಾಗಿ ಬೆಳಸಬೇಕು. ಪರಿಸರ ನಾಶವಾದರೆ ಮನುಕುಲದ ನಾಶವಾಗುತ್ತದೆ. ಪ್ರಾಣಿ, ಪಕ್ಷಿಗಳು ಯಾವುದೇ ರೀತಿಯಲ್ಲಿ ಪರಿಸರವನ್ನು ನಾಶ ಮಾಡುವುದಿಲ್ಲ. ಅದರ ಬದಲಾಗಿ ಗಿಡ ಮರಗಳನ್ನು ಬೆಳೆಸುತ್ತವೆ ಎಂದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಲ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿ.ಕಾ.ಸೇ.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ. ಹೆಚ್, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್. ಎಚ್.ಮಿಟ್ಟಲಕೋಡ, ವಾಲ್ಮಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಪೋದ್ದಾರ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಆನಂದ ಕಾಂಬಳೆ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ವ್ಹಿ. ಏಣಗಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಗದೀಶ ಐ. ಎಚ್, ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ರುದ್ರಗೌಡ ವ್ಹಿ. ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply