ಬೆಂಗಳೂರು: ಅರಣ್ಯ, ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆಯಂತೆ ಪರಿಸರಕ್ಕೆ ಮಾರಕವಾದ ನೀರಿನ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯ ನಿರ್ವಹಣೆ ನಿಯಮಗಳ ಜಾರಿ ಮತ್ತು ಮೇಲ್ವಿಚಾರಣೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಈ ಸಂಬಂಧ ಸರ್ಕಾರಿ ಆದೇಶವನ್ನು ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಅನಾವರಣ ಮಾಡಿದರು. ಇದರ ಜೊತೆಗೆ ಬೀದಿ ಬದಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ನೆಡುವ ಮರದ ಸುತ್ತ 1 ಮೀಟರ್ ಸುತ್ತಳತೆಯಲ್ಲಿ ಕಾಂಕ್ರೀಟ್ ತೆರವು ಮಾಡುವ ಆದೇಶವನ್ನೂ ಅವರು ಬಿಡುಗಡೆಗೊಳಿಸಿದರು.
ದಿನದಿಂದ ದಿನಕ್ಕೆ ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೊದಲಿಗೆ ನೀರಿನ ಬಾಟಲಿಗಳ ವೈಜ್ಞಾನಿಕ ವಿಲೇವಾರಿಗೆ ವಿಶೇಷ ಗಮನ ನೀಡಿ, ಜಿಲ್ಲೆಯೊಳಗೆ ಉತ್ಪಾದಿಸುವ, ಬಳಸುವ ಮತ್ತು ಮಾರಾಟವಾಗುವ ಪೆಟ್ ಬಾಟಲಿಗಳ ಪ್ರಮಾಣದ ದತ್ತಾಂಶ ಕ್ರೋಡೀಕರಿಸಿ ತ್ಯಾಜ್ಯ ನಿರ್ವಹಣೆ ಮೇಲೆ ನಿಗಾ ಇಡಲು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಸರ್ಕಾರಿ ಆದೇಶಿಸಲಾಗಿದೆ.
ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಿ ಪರಿಶೀಲಿಸಲಿರುವ ಈ ಸಮಿತಿಗಳು, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳ ವೈಜ್ಞಾನಿಕ ವಿಲೇವಾರಿಗೆ ಕ್ರಮ ವಹಿಸಲಿದ್ದು, ಜನರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಿದೆ.
ಮಿನರಲ್ ಯುಕ್ತ ಜಲ ತಯಾರಿಕಾ ಕಂಪನಿಗಳು, ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ ಅಡಿಯಲ್ಲಿ ಈ ಬಾಟಲಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಆದೇಶ ಹೊರಡಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಮಾರ್ಚ್ 21ರಂದು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದರು.
ಈ ಬಾರಿಯ ವಿಶ್ವ ಪರಿಸರ ದಿನದ ಧ್ಯೇಯವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸೋಣ’ ಎಂಬುದಾಗಿದ್ದು, ಇಂದು ಈ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಬಿಡುಗಡೆ ಮಾಡುವುದು ಅರ್ಥಪೂರ್ಣವಾಗಿದೆ.
ರಸ್ತೆ ಬದಿ ವೃಕ್ಷದ ಸುತ್ತಲೂ ಹಾಕುವ ಕಾಂಕ್ರೀಟ್ ನಿಂದಾಗಿ ಬೇರು ಆಳಕ್ಕೆ ಇಳಿಯದೆ ಮರಗಳು ಮಳೆಗಾಲದಲ್ಲಿ ಧರಾಶಾಯಿಯಾಗುತ್ತಿದ್ದು, ಅನಾಹುತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮರದ ಸುತ್ತ ಇರುವ ಡಾಂಬರು, ಕಾಂಕ್ರೀಟ್ ಮತ್ತು ಸ್ಲಾಬ್ ಗಳನ್ನು ತೆರವು ಮಾಡುವ ಕುರಿತ ಸರ್ಕಾರಿ ಆದೇಶವನ್ನೂ ಮುಖ್ಯಮಂತ್ರಿಗಳು ಇಂದು ಬಿಡುಗಡೆ ಮಾಡಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಮೇ 22ರಂದು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿದ ಲಿಖಿತ ಸೂಚನೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ತೀರ್ಪಿನಂತೆ ರಾಜ್ಯದಲ್ಲಿ ರಸ್ತೆ ಬದಿಯಲ್ಲಿ ನೆಡಲಾಗಿರುವ ಎಲ್ಲ ವೃಕ್ಷಗಳ ಸುತ್ತ ಹಾಕಲಾಗಿರುವ ಕಾಂಕ್ರೀಟ್ ತೆರವುಗೊಳಿಸಲು ಸರ್ಕಾರಿ ಆದೇಶ ಹೊರಡಿಸಲು ತಿಳಿಸಿದ್ದರು.
ಇದಕ್ಕೆ ಎಲ್ಲ ವೃಕ್ಷ ಪ್ರೇಮಿಗಳು, ಪರಿಸರವಾದಿಗಳು ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದರು. ಅದರಂತೆ ಇಲಾಖೆ ಅಧಿಕೃತ ಆದೇಶ ಹೊರಬಿದ್ದಿದ್ದು, ಮುಖ್ಯಮಂತ್ರಿಗಳೇ ಈ ಆದೇಶ ಅನಾವರಣ ಮಾಡಿರುವುದು ಸ್ಪಷ್ಟ ಸಂದೇಶ ರವಾನಿಸಿದೆ.


