ಬೆಂಗಳೂರು: ಅಧಿಕಾರ ಸುಮ್ಮನೆ ಸಿಗುವುದಿಲ್ಲ ಅದನ್ನು ದಕ್ಕಿಸಿಕೊಳ್ಳಬೇಕು. ಇಲ್ಲವಾದರೆ ಒದ್ದು ಕಿತ್ತುಕೊಳ್ಳಬೇಕು ಎಂದು ಹೇಳಿದ ಡಿಸಿಎಂ ಡಿ ಕೆ ಶಿವಕುಮಾರ್ ತಮಗೆ ತಕ್ಷಣವೇ ಎದುರಾದ ಸವಾಲಿನಿಂದ ತಬ್ಬಿಬ್ಬಾದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಯೋ ಸಹಜ ಕಾರಣಗಳಿಂದ ನಿಧನರಾದ ಮಾಜಿ ಸಿಎಂ ಎಸ್ ಎಮ್ ಕೃಷ್ಣ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆ ಸಂತಾಪ ಸೂಚನೆ ಮೇಲೆ ಮಾತನಾಡಿದ ಶಿವಕುಮಾರ್, ಈ ಹಿಂದೆ ಎಸ್ ಎಂ ಕೃಷ್ಣ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯಿತು. ಈ ವೇಳೆ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರೊಂದಿಗೆ ಸಂಪುಟ ಸೇರ್ಪಡೆಯಾಗಲಿರುವ ಮಂತ್ರಿಗಳ ಹೆಸರು ಇತ್ತು. ಅದರಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗಿದ್ದು ಈ ಬಗ್ಗೆ ತಮ್ಮ ಆಪ್ತರಲ್ಲಿ ಮಾತನಾಡಿದಾಗ ಅವರು ಹೇಳಿದ್ದು, ಅಧಿಕಾರವನ್ನು ದಕ್ಕಿಸಿಕೊಳ್ಳಬೇಕು. ಇಲ್ಲವಾದರೆ ಒದ್ದು ಕಿತ್ತುಕೊಳ್ಳಬೇಕು ಎಂಬ ಸಲಹೆ ನೀಡಿದರು ಅದರಂತೆ. ತಾವು ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರೊಂದಿಗೆ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಮಂತ್ರಿ ಮಂಡಲ ಸೇರ್ಪಡೆಯಾದ ಘಟನೆಯನ್ನು ಸದನಕ್ಕೆ ವಿವರಿಸಿದರು.
ಈ ವೇಳೆ ಎದ್ದು ನಿಂತ ವಿಪಕ್ಷ ನಾಯಕ ಆರ್ ಅಶೋಕ್, ಅಂದು ತಾವು ಸಂಪುಟ ಸೇರಲು ಮಾಡಿದ ಧೈರ್ಯ ಈಗ ಮುಖ್ಯಮಂತ್ರಿ ಆಗಲು ಯಾಕೆ ಮಾಡುತ್ತಿಲ್ಲ? ನಿಮ್ಮ ನಡುವೆ ಯಾವುದೋ ಒಪ್ಪಂದವಾಗಿದೆಯಂತೆ. ಆ ಒಪ್ಪಂದ ಯಾವಾಗ ಜಾರಿಗೆ ಬರಲಿದೆ? ನೀವು ಒದ್ದು ಮುಖ್ಯಮಂತ್ರಿ ಸ್ಥಾನವನ್ನು ಹೇಗೆ ಪಡೆದುಕೊಳ್ಳುತ್ತೀರಿ? ಈ ಸದನಕ್ಕೆ ಮಾಹಿತಿ ನೀಡಿ ಎಂದು ಸವಾಲೆಸೆದರು.
ದಿಡೀರನೆ ಬಂದ ಈ ಸವಾಲಿನಿಂದ ಡಿ ಕೆ ಶಿವಕುಮಾರ್ ಕ್ಷಣಕಾಲ ತಬ್ಬಿಬ್ಬಾದರು. ವಿಪಕ್ಷ ನಾಯಕರ ಪ್ರಸ್ತಾಪಕ್ಕೆ ಉತ್ತರ ಹೇಳಲು ಕೊಂಚ ತಡವರಿಸಿದಾಗ ನೆರವಿಗೆ ಬಂದ ಸಭಾಧ್ಯಕ್ಷರು, ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೇಳಿರುವ ಪ್ರಶ್ನೆಗೆ ಇಲ್ಲಿ ಉತ್ತರ ನೀಡುವುದು ಬೇಡ. ಅದನ್ನು ನಿಮ್ಮ ಕಚೇರಿಯಲ್ಲಿ ಅವರಿಗೆ ತಿಳಿಸಿ. ಈ ಬಗ್ಗೆ ಅವರಲ್ಲಿ ಯಾವುದಾದರೂ ಗೊಂದಲ ಅಥವಾ ಸ್ಪಷ್ಟನೆ ಇದ್ದರೆ ಅದನ್ನು ಅಲ್ಲಿ ಬಗೆಹರಿಸಿ. ಇಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದು ಸಲಹೆ ನೀಡಿದರು. ಇದರಿಂದ ಬಿಕ್ಕಟ್ಟಿನಿಂದ ಪಾರಾದವರಂತೆ ಕಂಡುಬಂದ ಶಿವಕುಮಾರ್ ನಿಮ್ಮ ಸಲಹೆಯಂತೆ ಪ್ರತಿಪಕ್ಷ ನಾಯಕರಿಗೆ ನನ್ನ ಕೊಠಡಿಯಲ್ಲಿ ಉತ್ತರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಈ ಕುರಿತ ಚರ್ಚೆಗೆ ತೆರೆ ಎಳೆದರು.




