ಎಸಿ ಹೆಲ್ಮೆಟ್‌ಗಳನ್ನು ವಿತರಿಸಿರುವುದು ಶ್ಲಾಘನೀಯ ಮತ್ತು ಮಾನವೀಯ ನಡೆ: ಅಪ್ಸರ್ ಕೊಡ್ಲಿಪೇಟೆ

11 months ago

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಚಾರ ಪೊಲೀಸ್ ಸಿಬ್ಬಂದಿಗೆ ವಿತರಣೆ

ಕಲಬುರಗಿ: ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಲಬುರಗಿ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಮೊಹಮ್ಮದ್ ಮೋಹಿಸಿನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ರವರ ಸಮ್ಮುಖದಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರುಗಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾಧ್ಯಮಗಳಲ್ಲಿ ಪ್ರಕಟವಾದಂತೆ, ಕಲಬುರಗಿಯಲ್ಲಿ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಚಾರ ಪೊಲೀಸ್ ಸಿಬ್ಬಂದಿಗೆ ಎಸಿ ಹೆಲ್ಮೆಟ್‌ಗಳನ್ನು ವಿತರಿಸಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಮಾನವೀಯತೆಯ ನಡೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ 42 ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ತಲುಪುವ ಈ ಭಾಗದಲ್ಲಿ, ಸಂಚಾರ ನಿಯಂತ್ರಣ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಸ್ವಾಗತಾರ್ಹ ಎಂದರು.

ಪ್ರಾಯೋಗಿಕ ಹಂತವಾಗಿ 10 ಎಸಿ ಹೆಲ್ಮೆಟ್‌ಗಳು ವಿತರಿಸಲ್ಪಟ್ಟಿದ್ದು, ಮುಂದೆ ಸಿಬ್ಬಂದಿಯ ಪ್ರತಿಕ್ರಿಯೆ ಆಧರಿಸಿ ಇನ್ನಷ್ಟು ಉಪಕರಣಗಳ ಖರೀದಿ ಬಗ್ಗೆ ಚಿಂತನೆ ಮಾಡಲಾಗಿದೆ. ಜೊತೆಗೆ, ಲೈಟ್ ಬ್ಯಾಟನ್‌ಗಳು, ಪಲ್ಯೂಷನ್‌ ಮಾಸ್ಕ್‌ಗಳು, ಹೊಳೆಯುವ ಜಾಕೆಟ್‌ಗಳು ವಿತರಿಸಲಾಗಿದ್ದು, ಇದು ಸಿಬ್ಬಂದಿಗೆ ಕೇವಲ ಆರಾಮವಷ್ಟೇ ಅಲ್ಲ, ಸುರಕ್ಷೆಯನ್ನೂ ಒದಗಿಸುತ್ತದೆ ಈ ಪ್ರಾಯೋಗಿಕ ಕ್ರಮ ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕೆಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮುಂಬರಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜೇವರ್ಗಿ, ಚಿತ್ತಾಪುರ, ಕಲಗಿ ಮತ್ತು ಯಡ್ರಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ ಕೆಲವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಲು ರಾಜ್ಯ ಸಮಿತಿಗೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಕ್ಬೂಲ್ ಪಾಷ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ರಿಜ್ವಾನ್, ಇಬ್ರಾಹಿಂ ಪಟೇಲ್, ಕಾರ್ಯದರ್ಶಿ ಶಕೀಲ್ ಪಟೇಲ್ ಮತ್ತು ಎಲ್ಲಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

Leave a Reply