ಮಾಧ್ಯಮದ ಪ್ರಮುಖರು ಪ್ರತಿ ವರ್ಷ ಆಸ್ತಿ, ಆದಾಯ ಘೋಷಿಸಿಕೊಳ್ಳಲಿ

9 hours ago

ಚುನಾಯಿತ ಪ್ರತಿನಿಧಿಗಳು ಪ್ರತಿ ವರ್ಷ ಲೋಕಾಯುಕ್ತಕ್ಕೆ ತಮ್ಮ ಆದಾಯದ ಪ್ರಮಾಣ ಪತ್ರವನ್ನು ನೀಡಬೇಕು. ಅದೇ ರೀತಿಯಲ್ಲಿ ಸರ್ಕಾರಿ ನೌಕರರು ಒಂದು ಹಂತದಲ್ಲಿ ತಮ್ಮ ಆಸ್ತಿಗಳನ್ನ ಪ್ರತಿವರ್ಷ ಘೋಷಿಸಿಕೊಳ್ಳಬೇಕು. ಮುಂದುವರೆದಂತೆ ನ್ಯಾಯಾಧೀಶರು ಸಹ ತಮ್ಮ ಆದಾಯವನ್ನು ಘೋಷಿಸಿಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಲ್ಲಿ ಬರುತ್ತಿದೆ.

ಎಲ್ಲರ ಭ್ರಷ್ಟಾಚಾರ ಮತ್ತು ಅನ್ಯಾಯಗಳ ಬಗ್ಗೆ ಮಾತನಾಡುವ ಮತ್ತು ಅವುಗಳನ್ನು ಕೆದಕಿ ಜನರ ಗಮನಕ್ಕೆ ತರುವ ಮಾಧ್ಯಮದವರ ಪಾತ್ರವೂ ಸಹ ಬಹಳ ಪ್ರಮುಖವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಮಾಧ್ಯಮಗಳ ಪ್ರಮುಖರ ವಿಚಾರದಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸವಿಲ್ಲ. ಅವರು ಪಕ್ಷದ ವಕ್ತಾರರು ಎಂಬ ಭಾವನೆ ಇದೆ. ಜೊತೆಗೆ ಅವರು ಸಹ ಅಪಾರ ಪ್ರಮಾಣದಲ್ಲಿ ಆಸ್ತಿ ಗಳಿಸುತ್ತಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲರಂತೆ ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದ ಪ್ರಮುಖರು ಪ್ರತಿ ವರ್ಷ ಆದಾಯ ಮತ್ತು ಆಸ್ತಿಯನ್ನು ಘೋಷಿಸಿಕೊಳ್ಳಬೇಕು. ಆಗ ಇವರ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ.

ಕೆಲವು ಮಾಧ್ಯಮದ ವ್ಯಕ್ತಿಗಳು ನಡೆಸುತ್ತಿರುವ ಐಷಾರಾಮಿ ಬದುಕು ಮತ್ತು ಅವರ ಕುಟುಂಬಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಅವರು ಮಾಡುವ ಖರ್ಚಿನ ಪ್ರಮಾಣವನ್ನು ಗಮನಿಸಿದಾಗ ಮಾಧ್ಯಮದ ಕ್ಷೇತ್ರದಲ್ಲಿ ದುಡಿದವರು ಇಷ್ಟೊಂದು ಪ್ರಮಾಣದಲ್ಲಿ ಸಂಪಾದನೆಯನ್ನು ಮಾಡಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಅವರು ಸಹ ಪ್ರತಿ ವರ್ಷ ತಮ್ಮ ಆದಾಯ ಮತ್ತು ಆಸ್ತಿಯನ್ನು ರಾಜ್ಯಪಾಲರಿಗೆ ಪ್ರಮಾಣ ಪತ್ರ ನೀಡುವ ಮೂಲಕ ತಮ್ಮ ಬದ್ಧತೆಯನ್ನು ಮೆರೆಯಲಿ.

ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಹಾಗೂ ಬದ್ಧತೆಯಿಂದ ಪತ್ರಿಕಾ ರಂಗದಲ್ಲಿ ದುಡಿದಂತಹ ಅನೇಕ ಮಹನೀಯರು ಅವರ ಬದುಕಿನ ಅಂತ್ಯದ ಕಾಲದಲ್ಲಿಯೂ ಸಹ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳಲ್ಲಿದ್ದರೂ ಮತ್ತು ಸರಳವಾದ ಬದುಕನ್ನು ನಡೆಸಿದ್ದರು. ಯಾವುದೇ ರಾಜಕಾರಣಿಯ ಹಂಗಿನಲ್ಲಿ ಬದುಕುತ್ತಿರಲಿಲ್ಲ ಮತ್ತು ಪಕ್ಷಪಾತಿಗಳಾಗಿರಲಿಲ್ಲ. ನಿಷ್ಟೂರವಾದ ಮತ್ತು ನೇರವಾದ ನಡವಳಿಕೆ ಮತ್ತು ಬರವಣಿಗೆಯ ಮೂಲಕ ಇಂದಿಗೂ ಕೆಲವರ ಹೆಸರು ಜನರ ಮನಸ್ಸಿನಲ್ಲಿ ಉಳಿದುಕೊಂಡಿವೆ.

ಪ್ರತಿ ವರ್ಷ ವಿವಿಧ ಸಂಸ್ಥೆಗಳಿಗೆ ತಮ್ಮ ಆದಾಯದ ಲೆಕ್ಕ ಕೊಡುವವರು ಸತ್ಯವಾದ ಲೆಕ್ಕವನ್ನೇ ಕೊಡುತ್ತಾರೆ ಎಂದು ನಂಬಿಕೊಳ್ಳುವುದು ಮೂರ್ಖತನವಾಗುತ್ತದೆ. ಇದರಲ್ಲಿ ಸತ್ಯದ ಮತ್ತು ಸುಳ್ಳಿನ ಲೆಕ್ಕಗಳು ಇದ್ದೇ ಇರುತ್ತವೆ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply