ಬೆಂಗಳೂರು: ರಾಜ್ಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಹನಿಟ್ರ್ಯಾಪ್ ಯತ್ನ ಆರೋಪ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭವಾಗಿದೆ. ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿರುವ ಅಧಿಕೃತ ನಿರ್ಧಾರ ಇನ್ನು ಹೊರಬಂದಿಲ್ಲ. ಆದರೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳು ಈ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ಸಿಐಡಿ ಅಧಿಕಾರಿಗಳ ತಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ನೀಡಲಾಗಿರುವ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸರ್ಕಾರಿ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಯ ವಿವರ ಸಂಗ್ರಹಿಸಿರುವ ಅಧಿಕಾರಿಗಳ ತಂಡ ಕಳೆದ ನಾಲ್ಕು ತಿಂಗಳಿನಿಂದ ಈ ಮನೆಗೆ ಯಾರು ಯಾರು ಬಂದಿದ್ದರು ಎಂಬ ವಿವರ ಸಂಗ್ರಹಿಸಿದೆ.
ಸರ್ಕಾರಿ ನಿವಾಸದ ಭದ್ರತಾ ಅಧಿಕಾರಿ ಬಳಿ ಇರುವ ಡೈರಿಯನ್ನು ಪಡೆದುಕೊಂಡಿರುವ ತಂಡ ಅದರಲ್ಲಿ ನಮೂದಾಗಿರುವ ಹೆಸರುಗಳು ಮತ್ತು ಅವರ ದೂರವಾಣಿ ಸಂಖ್ಯೆಗಳನ್ನು ಕೂಡ ಪಡೆದಿದೆ. ಈ ಪ್ರಾಥಮಿಕ ವರದಿಯನ್ನು ಅಧಿಕಾರಿಗಳ ತಂಡ ಪೊಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಲಿದ್ದು, ಅದಾದ ಬಳಿಕ ಪ್ರಕರಣದ ಬಗ್ಗೆ ಯಾವ ತನಿಖೆ ನಡೆಸಬೇಕು ಎಂಬ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ಆ ತಂಡಕ್ಕೆ ಸಿಐಡಿ ಅಧಿಕಾರಿಗಳು ತಾವು ಸಂಗ್ರಹಿಸಿರುವ ಎಲ್ಲ ವಿವರಗಳನ್ನು ನೀಡಲಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಕೆ ಎನ್ ರಾಜಣ್ಣ, ರಾಜ್ಯದಲ್ಲಿ ತಾವು ಸೇರಿದಂತೆ ಕೆಲವು ಮಂತ್ರಿಗಳು ಶಾಸಕರು ಮತ್ತು ಪ್ರತಿಪಕ್ಷಗಳ ಮುಖಂಡರು ಸೇರಿದಂತೆ 48 ಜನ ಪ್ರಮುಖ ನಾಯಕರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ವ್ಯವಸ್ಥಿತವಾಗಿ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದರು.
ನಂತರ ಸಿಎಂ ಸಿದ್ದರಾಮಯ್ಯ ಅವರ ಸಲಹೆಯಂತೆ ತಮ್ಮನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ನಡೆಸಿದ ಪ್ರಯತ್ನದ ಕುರಿತ ಲಿಖಿತ ದೂರನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ನೀಡಿದ್ದರು. ಪರಮೇಶ್ವರ್ ಅವರು ಈ ದೂರನ್ನು ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಿದ್ದು ಇದರ ಕುರಿತು ಯಾವ ಬಗೆಯ ತನಿಖೆ ಸೂಕ್ತ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.



