ಹುಮನಾಬಾದ್ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ತೀವ್ರ ಚಿಂತೆಗೆ ಕಾರಣ

1 year ago

ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಜಿಲ್ಲಾ ಸಮಿತಿಯಿಂದ ಆಗ್ರಹ

ಬೀದರ್: ಎಸ್‌ಡಿಪಿಐ ಬೀದರ್ ಜಿಲ್ಲಾ ಸಮಿತಿಯ ಸಭೆ ಹುಮನಾಬಾದ್ ನಗರದಲ್ಲಿ ಜಿಲ್ಲಾ ಅಧ್ಯಕ್ಷ ಶೇಕ್ ಮಕ್ಸೂದ್ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಅವರ ಉಪಸ್ಥಿತಿಯಲ್ಲಿ ಜರುಗಿತು.

ಸಭೆಯಲ್ಲಿ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆದಿದ್ದು, ಮುಖ್ಯವಾಗಿ ಹುಮನಾಬಾದ್ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಸದಸ್ಯರು ತೀವ್ರ ಚಿಂತೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಲ್ಲೇಖವಾದ ಪ್ರಮುಖ ವಿಷಯಗಳು ಹೀಗಿವೆ:
ವೈದ್ಯರ ತೀವ್ರ ಕೊರತೆ, ಪ್ರಾಥಮಿಕ ಚಿಕಿತ್ಸೆಯಲ್ಲಿನ ವಿಳಂಬ, ತುರ್ತು ಸೇವೆಗಳ ದೌರ್ಬಲ್ಯ.
ಆಸ್ಪತ್ರೆಯಲ್ಲಿನ ಸ್ವಚ್ಛತೆ ಹಾಗೂ ಶೌಚಾಲಯಗಳ ನಿರ್ವಹಣೆಯಲ್ಲಿ ಬೃಹತ್ ದೋಷ.
ತಾಂತ್ರಿಕ ಸಿಬ್ಬಂದಿ ಕೊರತೆಯಿಂದಾಗಿ ಲ್ಯಾಬ್, ಎಕ್ಸ್‌ರೇ, ಆಪರೇಷನ್ ಥಿಯೇಟರ್ ಸೇವೆ ಸ್ಥಗಿತಗೊಂಡಿರುವ ಸ್ಥಿತಿ.

ರೋಗಿಗಳಿಂದ ವರದಿಯಾದ ಉಪೇಕ್ಷಿತ ವರ್ತನೆ, ಸಮಯಕ್ಕೆ ಸಿಗದ ಔಷಧ ಮತ್ತು ಚಿಕಿತ್ಸೆ.

ಆಂಬ್ಯುಲೆನ್ಸ್ ಸೇವೆಗಳ ವಿಳಂಬ ಮತ್ತು ಸಮರ್ಪಕ ನಿರ್ವಹಣೆಯ ಕೊರತೆ.

ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, ಇದು ಜನಸಾಮಾನ್ಯರ ಆರೋಗ್ಯದ ಹಕ್ಕಿಗೆ ಕುತ್ತು ತಂದ ಸ್ಥಿತಿ. ಸಾರ್ವಜನಿಕ ಆಸ್ಪತ್ರೆಯ ಸೇವೆಗಳು ಸ್ಥಬ್ಧವಾಗುತ್ತಿರುವುದು ಮನುಷ್ಯತ್ವವನ್ನೇ ಅಪಮಾನ ಮಾಡುವಂತಾಗಿದೆ. ತಕ್ಷಣ ವೈದ್ಯರ ನೇಮಕಾತಿ, ಸೌಲಭ್ಯಗಳ ನವೀಕರಣ ಮತ್ತು ಜನಪರ ಆಡಳಿತದ ಅನುಷ್ಠಾನ ನಡೆಯಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಸಮಿತಿ ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಈ ಕೆಳಗಿನ ಬೇಡಿಕೆಗಳನ್ನು ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು:

1. ತಕ್ಷಣ ವೈದ್ಯ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿ.

2. ತುರ್ತು ಘಟಕದಲ್ಲಿ 24×7 ಸೇವೆ ಪುನಸ್ಥಾಪನೆ.

3. ಆಸ್ಪತ್ರೆಯ ಶೌಚಾಲಯ, ಶುದ್ಧ ಜಲವಿತರಣಾ ವ್ಯವಸ್ಥೆ ಸುಧಾರಣೆ.

ಇರ್ಫಾನ್ಉಲ್ಲಾ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಅಯೂಬ್ (ಜಿಲ್ಲಾ ಖಜಾಂಚಿ), ಶೇಕ್ ಇರ್ಫಾನ್ ಹಾಗೂ ಸೈಯದ್ ಅಕ್ಬರ್ (ಜಿಲ್ಲಾ ಕಾರ್ಯದರ್ಶಿಗಳು) ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Leave a Reply