ಸೌಹಾರ್ದಯುತವಾಗಿ ಬಕ್ರೀದ್ ಆಚರಿಸಿ

2 years ago

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ

ಶಿವಮೊಗ್ಗ: ಜೂನ್ 17ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸೌಹಾರ್ದಯುತವಾಗಿ ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿ-ಸೌಹಾರ್ದಯುತವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ. ಅಂತೆಯೇ ಎಲ್ಲ ಧರ್ಮದ ಮುಖಂಡರ ಸಹಕಾರವಿರಲಿ ಎಂದರು.

ಜಿಲ್ಲೆಯಲ್ಲಿ ಅಹಿತಕರ ಘಟನೆಗಳಿಗೆ ಯಾವುದೇ ಅವಕಾಶವಿಲ್ಲದಂತೆ ಸಮಾಧಾನವಾಗಿ ಹಬ್ಬ ಆಚರಿಸಿ. ಈ ಸಂಭ್ರಮಾಚರಣೆ ಪೂರ್ವದಲ್ಲಿ ಮೊಹಲ್ಲಾಗಳಲ್ಲಿನ ಮುಖಂಡರು ಅಲ್ಲಿನ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಒಂದುವೇಳೆ ಅಹಿತಕರ ಘಟನೆಗಳು ನಡೆಯುತ್ತಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಕಾಲದಲ್ಲಿ ಮಾಹಿತಿ ನೀಡಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಮಾತನಾಡಿ, ಹಬ್ಬದ ಸಂಭ್ರಮಾಚರಣೆಯಲ್ಲಿರುವವರಿಗೆ ಹಬ್ಬದಿಂದ ಹೊರಗುಳಿದಿರುವ ಅನ್ಯ ಕೋಮಿನವರು ಅಗತ್ಯ ಸಹಕಾರ ನೀಡಬೇಕು. ಸಮುದಾಯದ ಮುಖಂಡರು ತಮ್ಮ ಸಮುದಾಯದ ಯುವಕರಿಗೆ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಕ್ತ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.

ಹಬ್ಬದ ದಿನದಂದು ಜಿಲ್ಲಾಡಳಿತ ಶಾಂತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ದೃಷ್ಟಿಯಿಂದ ಅಗತ್ಯವಿರುವ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು. ಕಳೆದ ವರ್ಷಗಳಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾದವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಕೆಲವರನ್ನು ಗಡಿಪಾರು ಮಾಡಲಾಗಿದೆ ಎಂದರು.

ಪ್ರಸ್ತುತ ಜಿಲ್ಲೆಯ 213ಸ್ಥಳಗಳಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಅಗತ್ಯ ಭದ್ರತೆ ಒದಗಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಮಹಾನಗರಪಾಲಿಕೆಯ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಹಬ್ಬ ನಡೆಯುವ ಮೂರು ದಿನಗಳ ಕಾಲ ನಗರದ ಸ್ವಚ್ಚತೆಗೆ ವಿಶೇಷ ಗಮನಹರಿಸಲಾಗಿದೆ. ಅಲ್ಲದೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಲಮಂಡಳಿ ವತಿಯಿಂದ ದೈನಂದಿನ ನೀರು ಪೂರೈಕೆ ಮಾಡುವುದರ ಜೊತೆಗೆ ಸುಮಾರು 25 ಟ್ಯಾಂಕರ್ಗಳ ಮೂಲಕ ನೀರನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.

ಪ್ರಾರ್ಥನಾ ಸ್ಥಳಗಳು, ಸಮೀಪದಲ್ಲಿನ ಚರಂಡಿ ಹಾಗೂ ರಾಜಾ ಕಾಲುವೆಗಳ ಸ್ವಚ್ಛತೆಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಹಬ್ಬದ ದಿನಗಳಂದು ಪೌರಕಾರ್ಮಿಕರಿಗೆ ನೀಡಬೇಕಾಗಿದ್ದ ರಜೆಗೆ ಪರ್ಯಾಯ ದಿನವನ್ನು ನಿಗದಿಪಡಿಸಲು ಸೂಚಿಸಿದ್ದು, ಹಬ್ಬದ ದಿನದಂದು ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ಗಮನಹರಿಸಲಾಗಿದೆ. ಅಲ್ಲದೇ ಸಾಕಷ್ಟು ಕಸಸಂಗ್ರಹಿಸುವ ವಾಹನಗಳನ್ನು ನಿಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರ ಅನಿಲ್ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಎಲಿ, ತಹಶೀಲ್ದಾರ್ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

ಮುಸ್ಲಿಂ ಬಾಂಧವರು ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ. ಸರ್ವರ ಸಂತೋಷ ಇಮ್ಮಡಿಗೊಳ್ಳುವಂತಾಗಲಿ.

  • ರಾಮಚಂದ್ರಪ್ಪ

ಹಬ್ಬದ ಸಂಭ್ರಮದಲ್ಲಿ ಜಿಲ್ಲಾಡಳಿತದ ಸಹಕಾರ ಎಂದಿನಂತಿರಲಿ. ಅನ್ಯ ಕೋಮಿನವರ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ.

  • ಫರ್ವೇಜ್ ಅಹ್ಮದ್

ಮೊಹಲ್ಲಾಗಳಲ್ಲಿ ಶಾಂತಿಸಮಿತಿ ಸಭೆಗಳನ್ನು ಆಯೋಜಿಸುವುದು ಉತ್ತಮ. ಹಿಂದೆ ನಡೆದ ಅಹಿತಕರ ಘಟನೆಗಳು ಮರುಕಳಿಸದಿರಲು ಇದು ಸಹಕಾರಿಯಾಗಲಿದೆ. ಇತರ ಭಾವನೆಗಳಿಗೆ ಧಕ್ಕೆಯಾಗದಂತೆ ಕಾನೂನಾತ್ಮಕವಾಗಿ, ಮಾನವೀಯ ನೆಲೆಯಲ್ಲಿ ಕುರ್ಬಾನಿ ವಿತರಿಸಿ.

  • ರಮೇಶ್ ಬಾಬು

ಮುಸ್ಲಿಂ ಬಾಂಧವರು ಅನ್ಯ ಕೋಮಿನವರ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ಅವರ ವಾಸ್ತವ ಜೀವನಕ್ಕೆ ಕಿರಿಕಿರಿಯಾಗದಂತೆ ಗಮನಹರಿಸಿ.

  • ಮುಸ್ಲಿಂ ಮುಖಂಡರು, ತೀರ್ಥಹಳ್ಳಿ

Leave a Reply