ಸಂಕಷ್ಟಕ್ಕೆ ಸಿಲುಕಿದ ಬಿಬಿಎಂಪಿ ಅಧಿಕಾರಿಗಳು

1 year ago

ಬೆಂಗಳೂರು: ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ಸಾಂಕ್ರಾಮಿಕ ಕೋವಿಡ್ ನಿಯಂತ್ರಣ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂದಿನ ಅಧಿಕಾರಸ್ಥರ ಮಾತು ಕೇಳಿ ನಿಯಮಬಾಹಿರವಾಗಿರುವ ತೀರ್ಮಾನಗಳನ್ನು ತೆಗೆದುಕೊಂಡ ಅಧಿಕಾರಿಗಳು ಇದೀಗ ಕಾನೂನು ಕ್ರಮ ಎದುರಿಸುವಂತೆ ಆಗಿದೆ. ಈ ಕುರಿತು ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.

ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿತ್ತು. ಸದರಿ ನೋಟಿಸ್ ಗೆ ಉತ್ತರ ನೀಡದ 29 ಅಧಿಕಾರಿಗಳ ಪೈಕಿ 17 ಅಧಿಕಾರಿಗಳ ಇಲಾಖಾ ವಿಚಾರಣೆ ನಡೆಸಲು ಮುಖ್ಯ ಆಯುಕ್ತರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಲಾಖೆ ವಿಚಾರಣೆ ಬಳಿಕ ನೋಟಿಸ್‍ಗೆ ಉತ್ತರಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಲಿದೆ.

ಬಿಜೆಪಿ ಕಾಲದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ 200ಕ್ಕೂ ಹೆಚ್ಚು ಅಧಿಕಾರಿಗಳಿಗೆ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ನೀಡಲಾಗಿತ್ತು. ನೋಟಿಸ್‍ಗೆ ಬಹುತೇಕ ಆರೋಗ್ಯಾಧಿಕಾರಿಗಳು ಉತ್ತರ ನೀಡಿದ್ದಾರೆ. ಆದರೆ 29 ಅಧಿಕಾರಿಗಳು ನೋಟಿಸ್‍ಗೆ ಉತ್ತರವನ್ನೇ ನೀಡಿಲ್ಲ. ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಇಲಾಖೆ ಹಂತದಲ್ಲಿ ವಿಚಾರಣೆ ಮಾಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿಶೇಷ ಆಯುಕ್ತ ವಿಕಾಸ್ ಸುರಳ್ಕರ್ ಅವರಿಗೆ ಸೂಚನೆ ನೀಡಿದ್ದಾರೆ.

ಇಂದಿನಿಂದ ಇಲಾಖಾ ಹಂತದ ವಿಚಾರಣೆ ನಡೆಯಲಿದೆ. ನೋಟಿಸ್‍ಗೆ ಯಾಕೆ ಉತ್ತರ ನೀಡಿಲ್ಲ. ಏನು ಕಾರಣ? ನಿಮ್ಮ ಅವಧಿಯಲ್ಲಿ ಎಷ್ಟು ಖರ್ಚು ಆಗಿತ್ತು ಎಂದು ಪ್ರಶ್ನಿಸಲಿದ್ದಾರೆ. ಸರಿಯಾದ ಉತ್ತರ ಬರದೇ ಇದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಅಥವಾ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಿದ್ದಾರೆ.

ದಾಸರಹಳ್ಳಿಯ 16 ಅಧಿಕಾರಿಗಳು, ಪೂರ್ವವಲಯ, ಆರ್ ಆರ್ ನಗರ ಮತ್ತು ಕೇಂದ್ರ ಕಛೇರಿಯ ತಲಾ ಇಬ್ಬರು ಅಧಿಕಾರಿಗಳು ವಿಚಾರಣೆ ಎದುರಿಸಬೇಕಿದೆ.

Leave a Reply