ಮೂರ್ಖರ ದಿನದ ಮಹಾ ಲಾಭಗಳು

1 year ago

ಏಪ್ರಿಲ್ 1: ಮೂರ್ಖರ ದಿನದ ಮಹಾ ಲಾಭಗಳು (ಭಾರತೀಯರಿಗೆ ಮಾತ್ರ)

ಮೋಡಗಳಿಂದ ರೆಡಾರ್‍ಗಳನ್ನು ಯಾಮಾರಿಸಿ ವೈಮಾನಿಕ ದಾಳಿ ಮಾಡಬಹುದು.

ಗಟಾರದಿಂದ ನೇರವಾಗಿ ಗ್ಯಾಸ್ ಕನೆಕ್ಷನ್ ತೆಗೆದುಕೊಂಡು ಸ್ಟೌವ್ ಉರಿಸಬಹುದು.

ಚಿಕ್ಕವಯಸ್ಸಿನ ಹುಡುಗನೊಬ್ಬ ನದಿಯಿಂದ ಮೊಸಳೆ ಹಿಡಿದು ತರಬಹುದು.

ರೈಲುಗಳೇ ಸಂಚರಿಸಿದ ಊರಿನಲ್ಲಿ ರೈಲ್ವೇ ಸ್ಟೇಷನ್ ಇದ್ದಿರಬಹುದು. ಆ ಕಲ್ಪಿತ ಸ್ಟೇಷನ್ನಲ್ಲಿ ನೀವು ಚಹಾ ಕೂಡಾ ಮಾರಬಹುದು.

* ಪ್ರಪಂಚದಲ್ಲಿಯೇ ಅಸ್ತಿತ್ವದಲ್ಲಿಲ್ಲದ ಎಂಟೈರ್ ಪೊಲಿಟಿಕಲ್ ಸೈನ್ಸ್ನಲ್ಲಿ ನೀವು ಮಾಸ್ಟರ್ ಡಿಗ್ರಿ ಮಾಡಬಹುದು. ಹಾಗೆ ಸಂಪಾದಿಸಿದ ಡಿಗ್ರಿ ಸರ್ಟಿಫಿಕೇಟನ್ನು ರಾಷ್ಟ್ರೀಯ ರಹಸ್ಯ ದಾಖಲೆಯೆಂದು ಘೋಷಿಸಿ ಯಾರಿಗೂ ತೋರಿಸದೆ ಮುಚ್ಚಿಟ್ಟುಕೊಳ್ಳಬಹುದು.

* ಹವಾಮಾನ ಏರುಪೇರು ಎಂಬುದೆಲ್ಲ ಬೊಗಳೆ; ನಮಗೆ ವಯಸ್ಸಾಗುತ್ತಿರುವುದರಿಂದ ಸಹನ ಶಕ್ತಿ ಕಡಿಮೆಯಾಗಿರೋದ್ರಿಂದ ಹವಾಮಾನ ಏರುಪೇರಾದಂತೆ ಭಾಸವಾಗುತ್ತಿದೆಯಷ್ಟೆ ಎಂದು ಜನರನ್ನು ನಂಬಿಸಬಹುದು.

* ಬಡವರ ಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಳ್ಳುವುದೇ ದುಸ್ಥರವಾಗಿದ್ದ ಕಾಲದಲ್ಲೂ, ನೀವು ಕಡುಬಡವರಾಗಿ ಶಾಲೆಗೆ ಯೂನಿಫಾರ್ಮ್ ಮತ್ತು ಬಿಳಿ ಶೂ ಹಾಕಿಕೊಂಡು ಹೋಗಬಹುದು. ಕೊಳೆಯಾಗುವ ಆ ಶೂಗಳನ್ನು ಸೀಮೆಸುಣ್ಣದಿಂದ ತೀಡಿಕೊಂಡು ಬೆಳ್ಳಗೆ ಮಾಡಿಕೊಳ್ಳಬಹುದು.

* ಡಿಜಿಟಲ್ ಕ್ಯಾಮೆರಾಗಳು ಶೋಧನೆಯಾಗುವುದಕ್ಕೆ ಮೊದಲೇ ನೀವು ಡಿಜಿಟಲ್ ಕ್ಯಾಮೆರಾ ಬಳಸಿ ಫೋಟೊ ತೆಗೆಯಬಹುದು. ಇಮೇಲ್ ಭಾರತಕ್ಕೆ ಕಾಲಿಡುವುದಕ್ಕು ಮೊದಲೇ ಆ ಫೋಟೊಗಳನ್ನು ಇಮೇಲ್ ಮೂಲಕ ರವಾನಿಸಬಹುದು.

* ಏರ್‍ಕಂಡೀಷನ್ಡ್ ಗುಹೆಯಲ್ಲಿ ಕೂತೋ, ಆಕ್ಸಿಜನ್ ಮುಖವಾಡ ಸಮೇತ ನೀರಿನಲ್ಲಿ ಮುಳುಗಿಯೋ ಸುತ್ತಲೂ ಕ್ಯಾಮೆರಾಮನ್ಗಳ ಕಾಟವಿಟ್ಟುಕೊಂಡು ನೀವು ಧ್ಯಾನ ಮಾಡಬಹುದು.

* `ನನಗೆ ಕೇವಲ 50 ದಿನ ಅವಕಾಶ ಕೊಡಿ. ಆನಂತರವೂ ಸಮಸ್ಯೆ ಮುಂದುವರೆದರೆ, ನೀವು ಹೇಳಿದ ಚೌಕದಲ್ಲಿ ನಿಲ್ಲುತ್ತೇನೆ, ಬೆಂಕಿ ಹಚ್ಚಿ ಸುಟ್ಟುಬಿಡಿ’ ಎಂದು ಹೇಳಿ, ಗ್ಯ್ರಾಂಡ್ ಫೇಲ್ಯೂರ್‍ ನಂತರವೂ ನೀವು ಆರಾಮಾಗಿ ಅಧಿಕಾರ ನಡೆಸಬಹುದು.

* ‘ನಾ ಖಾವೂಂಗಾ, ನಾ ಖಾನೇ ದೂಂಗಾ,’ `ಮೇ ಚೌಕಿದಾರ್‍ ಹೂ’ ಅಂತ ಹೇಳಿಯೂ ರಫೇಲ್ ಹಗರಣ, ಎಲೆಕ್ಟ್ರೋಲ್ ಬಾಂಡ್, ಪಿಎಂ ಕೇರ್‍ಸ್ ಹಗರಣಗಳನ್ನು ಬಿಂದಾಸ್ ಆಗಿ ನಡೆಸಬಹುದು.

* ನಾನು ಸೀದಾಸಾದಾ ಪಕೀರ, ನಿಮ್ಮ ಪ್ರಧಾನ ಸೇವಕ ಅಂತ ಹೇಳಿ ಜನರನ್ನು ಯಾಮಾರಿಸುತ್ತಲೇ ಹತ್ತು ಲಕ್ಷದ ಚಿನ್ನದ ಸೂಟು ತೊಡಬಹುದು; ಎಂಟೂವರೆ ಸಾವಿರ ಕೋಟಿ ರೂಪಾಯಿಯ ಐಷಾರಾಮಿ ವಿಮಾನದಲ್ಲಿ ಓಡಾಡಬಹುದು.

* ಚೀನಾದವರ ಅತಿಕ್ರಮಣ, ಅಮೆರಿಕಾದವರ ತೆರಿಗೆ ಭಯೋತ್ಪಾದನೆಗೆ ಹೆದರಿ ಬಾಲ ಮುದುರಿ ಕೂತರೂ ವಿಶ್ವಗುರು ಎಂದು ಪರಾಕು ಹಾಕಿಸಿಕೊಳ್ಳಬಹುದು.

* ನಮ್ಮದೇ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅತ್ತ ಮುಖ ಹಾಕದೆ, ಒಂದೇಒಂದು ಫೋನ್ ಕಾಲ್ನಲ್ಲಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದ ಕ್ರೆಡಿಟ್ಟು ದೇಬಿಕೊಳ್ಳಬಹುದು.

* ತಟ್ಟೆ-ಪಾತ್ರೆ ಬಡಿದು ಮತ್ತು ಹಣತೆಯನ್ನು ಹಚ್ಚಿಟ್ಟು ಕೊರೊನಾ ವೈರಸ್ಸನ್ನು ಡಿಸೈನ್ಡಿಸೈನ್ ಆಗಿ ಕೊಂದುಹಾಕಬಹುದು.

* ನಿಮ್ಮ ವೈಫಲ್ಯವನ್ನೆಲ್ಲ ಸತ್ತು ಸ್ವರ್ಗಸ್ಥರಾದ ನೆಹರೂ ಕುತ್ತಿಗೆಗೆ ನೇತುಹಾಕಿ ನೀವು ನಿರುಮ್ಮಳವಾಗಿ ರಾಜ್ಯಭಾರ ಮಾಡಬಹುದು.

ಕೊನೆಯದಾಗಿ….

* ಎಲ್ಲರ ಮೂಗಿಗೆ ಹದಿನೈದು ಲಕ್ಷದ ತುಪ್ಪ ಸವರಿ, ನೀವು ಮಾತ್ರ ಅದಾನಿ-ಅಂಬಾನಿಗಳ ಪಾದಸೇವೆ ಮಾಡಿಕೊಂಡು ನೆಮ್ಮದಿಯಾಗಿ ಅಧಿಕಾರ ಹಿಡಿಯಬಹುದು!!!

ಬೈದಬೈ…. ಎರಡು ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಮಡುಗಿದ ಮೇಧಾವಿ ಟೀವಿ ಆಂಕರಪ್ಪನ ಉಪಟಳವ ಸಹಿಸಿಕೊಂಡು ‘ಆಲ್ರೈಟ್ ಮುಂದಕ್ಕೋಗೋಣ’ ಎಂದು ಮೈಮರೆತವರಿಗೆಲ್ಲ ಮೂರ್ಖರ ದಿನದ ಶುಭಾಶಯಗಳು

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply