ಅಂಬೇಡ್ಕರ್ ಚಿಂತನೆಗಳು ದಲಿತರು ಮತ್ತು ಶೋಷಿತರನ್ನು ಬಂಧಮುಕ್ತಗೊಳಿಸುತ್ತವೆ

1 year ago

ಅಸ್ಪೃಶ್ಯತೆ ಮತ್ತು ಅಸಮಾನತೆ ಜೀವಂತವಾಗಿರಿಸಿರುವುದೇ ಆರ್ ಎಸ್ ಎಸ್ ಸಾಧನೆ: ಯೋಗೇಶ್ ಜಪ್ಪಿನಮೊಗರು

ಮಂಗಳೂರು: ಇಡೀ ದೇಶದಲ್ಲಿ ದಲಿತ ಸಮುದಾಯದ ವಿರುದ್ಧ ಸವರ್ಣೀಯರನ್ನು ಎತ್ತಿ ಕಟ್ಟಿರುವುದು ಸಂಘ ಪರಿವಾರದ ಹಿಡನ್ ಅಜೆಂಡಾದ ಭಾಗವಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕ ಯೋಗೀಶ್ ಜಪ್ಪಿನಮೊಗರು ಹೇಳಿದರು.

ತಣ್ಣೀರುಬಾವಿಯಲ್ಲಿ ನಡೆದ ದಲಿತ ಚೈತನ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಮುಗಿಸುವ ಎಲ್ಲಾ ಪ್ರಯತ್ನಗಳನ್ನು ಆರ್ ಎಸ್ ಎಸ್ ಸ್ವಾತಂತ್ರ್ಯ ಪೂರ್ವದಿಂದಲೇ ಮಾಡಿಕೊಂಡು ಬಂದಿರುತ್ತದೆ ಎಂದರು.

ಡಾ.ಬಿಆರ್ ಅಂಬೇಡ್ಕರ್ ಅವರನ್ನು ಹಾಗೂ ಸಂವಿಧಾನದ ದ್ವೇಷಿಯಾಗಿರುವ ಸಂಘಪರಿವಾರ ಇದ್ದಕ್ಕಿದ್ದಂತೆ ಸಂವಿಧಾನವನ್ನು ಅಪ್ಪಿಕೊಳ್ಳುವ ಸಂವಿಧಾನ್ ಸನ್ಮಾನ್ ಕಾರ್ಯಕ್ರಮದ ಮೂಲಕ ನಾಟಕವಾಡುತ್ತಿದ್ದಾರೆ. ಪ್ರಸ್ತುತ ದಲಿತ ಸಮುದಾಯವು ಸುಶಿಕ್ಷಿತರಾಗಿ ಜಾಗೃತಿಗೊಳ್ಳುತ್ತಿದ್ದು ಸಂಘ ಪರಿವಾರದ ದುರುದ್ದೇಶಗಳು ಹಾಗೂ ಮುಖವಾಡಗಳು ಕಳಚಿ ಬೀಳುತ್ತಿವೆ ಎಂದರು.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ 400 ಸೀಟುಗಳನ್ನು ಗೆಲ್ಲುವುದಾಗಿಯೂ ಸಂವಿಧಾನವನ್ನು ಬದಲಿಸುವುದಾಗಿಯೂ ಹೇಳಿರುವ ಬಿಜೆಪಿ ಈಗ ಸಂವಿಧಾನ ಸನ್ಮಾನ್ ಕಾರ್ಯಕ್ರಮವನ್ನು ನವೆಂಬರ್ 26ರಿಂದ ಜನವರಿ 26ರವರೆಗೆ ರೂಪಿಸಿರುವುದು ಸಂಘ ಪರಿವಾರದ ದುಷ್ಟ ಆಲೋಚನೆಯ ಭಾಗವಾಗಿದೆ. ದಲಿತ ವರ್ಗವನ್ನು ಮನುಷ್ಯರನ್ನಾಗಿ ಕಾಣದ ಸಂಘ ಪರಿವಾರ ಸಂವಿಧಾನದೊಳಗೆ ಮನುಸ್ಮೃತಿಯನ್ನು ತುರುಕಿಸುವ ಕೆಲಸವನ್ನು ಮಾಡುವುದಕ್ಕಾಗಿಯೇ ಸಂವಿಧಾನ ಸನ್ಮಾನ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿ ಎಚ್ ಎಸ್ ನ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಅಂಬೇಡ್ಕರ್ ಅವರ ಚಿಂತನೆಗಳು ಮಾತ್ರವೇ ದಲಿತರನ್ನು ಮತ್ತು ಶೋಷಿತ ವಿಭಾಗವನ್ನು ಬಂಧಮುಕ್ತಗೊಳಿಸಲಿದೆ. ಆದ್ದರಿಂದ ಎಲ್ಲರೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಡಿ ಎಚ್ ಎಸ್ ನ ಜಿಲ್ಲಾ ಮುಖಂಡರಾದ ರಾಧಾಕೃಷ್ಣ ಬೊಂಡಂತಿಲ, ಚಂದ್ರಶೇಖರ್ ಕಿನ್ಯಾ, ಮನೋಜ್, ಸುಧಾಕರ್ ಉಪಸ್ಥಿತರಿದ್ದರು.

ಬೇಬಿ ತಣ್ಣೀರುಬಾವಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಸುನೀತಾ ಕೃಷ್ಣ ಕಾರ್ಯದರ್ಶಿಯಾಗಿ, ಸುನಿಲ್ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. 9 ಪದಾಧಿಕಾರಿಗಳು ಸೇರಿದಂತೆ ಒಟ್ಟು 17 ಜನರ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.

Leave a Reply