15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಸಭೆ
ಕಂದಾಯ ಗ್ರಾಮ ಶೀಘ್ರ ಘೋಷಣೆಗೆ ಸೂಚನೆ
ಕಂದಾಯ ಗ್ರಾಮ ಘೋಷಣೆಗೆ ಡ್ರೋನ್ ಬಳಕೆ
ಶಾಸಕರಿಂದ ಬಿಟ್ಟು ಹೋಗಿರುವ ಗ್ರಾಮಗಳ ಪಟ್ಟಿಗೆ ಮನವಿ.
ಬೆಳಗಾವಿ: ತಾಂಡ, ಹಟ್ಟಿ, ಒಡ್ರಟ್ಟಿ, ಗೊಲ್ರಟ್ಟಿ ಸೇರಿದಂತೆ ಎಲ್ಲಾ ಜನವಸತಿ ಪ್ರದೇಶಗಳನ್ನೂ ಜನವರಿ ಅಂತ್ಯದೊಳಗೆ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬುಧವಾರ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಒಟ್ಟಾರೆ 3,290 ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಘೋಷಣೆಯಾಗಬೇಕಿತ್ತು. ಆದರೆ, ಕಳೆದ ನಾಲ್ಕು ವರ್ಷದಲ್ಲಿ ತಾಂಡಾ, ಗೊಲ್ಲರಹಟ್ಟಿ ಸೇರಿದಂತೆ ಕೇವಲ 1,400 ಜನವಸತಿ ಪ್ರದೇಶಗಳನ್ನು ಮಾತ್ರ ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ನಮಗೆ ಸೂಚನೆ ಬಂದಿದ್ದು, ಜನವರಿ ಅಂತ್ಯದೊಳಗೆ ಎಲ್ಲಾ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗುವುದು ಎಂದರು.
ಪ್ರತೀ 15 ದಿನಗಳಿಗೊಮ್ಮೆ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಶೀಘ್ರವಾಗಿ ಕಂದಾಯ ಗ್ರಾಮಗಳನ್ನು ಘೋಷಿಸುವಂತೆ ತಾಕೀತು ಮಾಡಲಾಗುತ್ತಿದೆ. ಅಲ್ಲದೆ, ಪಟ್ಟಿಯಿಂದ ಬಿಟ್ಟುಹೋಗಿರುವ ತಾಂಡಾ, ಹಟ್ಟಿ, ಒಡ್ರಟ್ಟಿಗಳನ್ನು ಹೊಸದಾಗಿ ಸೇರಿಸುವಂತೆಯೂ ಸೂಚಿಸಲಾಗಿದೆ. ಇದೀಗ ಡ್ರೋನ್ ಮೂಲಕ ಸರ್ವೇ ಕೆಲಸ ಆರಂಭಸಿದ್ದು, ಡ್ರೋನ್ ಮೂಲಕವೂ ಕಂದಾಯ ಗ್ರಾಮಗಳ ಹುಟುಕಾಟ ನಡೆದಿದೆ ಎಂದರು.
ಬಿಟ್ಟುಹೋಗಿರುವ ಗ್ರಾಮಗಳ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲಾ ಶಾಸಕರಲ್ಲೂ ಮನವಿ ಮಾಡಲಾಗಿದೆ. ಶಾಸಕರು, ಸಂಘಸಂಸ್ಥೆಗಳು ದಯವಿಟ್ಟು ಬಿಟ್ಟುಹೋಗಿರುವ ಗ್ರಾಮಗಳ ಸೇರ್ಪಡೆಗೆ ಸಹಕರಿಸಬೇಕು. ಬಡವರಿಗೆ ಸಹಾಯವಾಗುವಂತಿದ್ದರೆ, ಯಾರೇ ಪಟ್ಟಿಕೊಟ್ಟರೂ ಪರಿಗಣಿಸಲಾಗುವುದು. ನಮ್ಮ ಸರ್ಕಾರ ಬಡಜನರ ಪರವಾಗಿಯೇ ಇದೆ ಎಂದು ಹೇಳಿದರು.




