ಭದ್ರಾ ಜಲಾಶಯ ಅಚ್ಚುಕಟ್ಟು ಕೊನೆ ಭಾಗಕ್ಕೂ ನೀರು ಪೂರೈಸಲು ಕ್ರಮ: ಗಂಗಾಧರ ಸ್ವಾಮಿ ಜಿ.ಎಂ

1 year ago

ದಾವಣಗೆರೆ: ಭದ್ರಾ ಜಲಾಶಯದ ಕಾಲುವೆ ಮೂಲಕ ಬಿಡುವ ನೀರು ಕೊನೆ ಭಾಗದ ಅಚ್ಚುಕಟ್ಟು ದಾರರಿಗೂ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ತಿಳಿಸಿದರು.



ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಭದ್ರಾಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಭದ್ರಾ ಜಲಾಶಯದಿಂದ ಅಚ್ಚುಕಟ್ಟುದಾರರಿಗೆ ನೀರು ಹರಿಸಿ ಒಂದೆರಡು ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಅಳವಡಿಸಿ ನೀರೆತ್ತಲಾಗುತ್ತಿದೆ. ಇದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಅನಧಿಕೃತ ಪಂಪ್ ಗಳನ್ನು  ತೆರವು ಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ ಎಂದರು.

ಬೇಸಿಗೆಯಾಗಿರುವುದರಿಂದ ಗೇಟ್ ಗಳಲ್ಲಿ ನೀರಿನ ಸೋರಿಕೆ ಮತ್ತು ಕಾಲುವೆ ದುರಸ್ಥಿಗೆ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ರೈತರಿಗೆ ತಿಳಿಸಿದರು.

ಕಾಲುವೆಗಳ ನೀರು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದ್ದು ಈ ಸಮಸ್ಯೆಯನ್ನು  ಬಗೆಹರಿಸಲು ಅಧೀಕ್ಷಕ ಇಂಜಿನಿಯರ್ ಗೆ ಸೂಚಿಸಿದರು

ಶಾಸಕ ಬಿ.ಪಿ ಹರೀಶ್ ಮಾತನಾಡಿ, ಜಲಾಶಯದ ದುರಸ್ಥಿ ಮಾಡಿಸಿ, ಭದ್ರಾ ಇಂಜಿನಿಯರ್ ‍ಗಳು ವೈಜ್ಞಾನಿಕ ತಂತ್ರಜ್ಞಾನ ಬಳಸಿ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದರು.

ಭದ್ರಾ ನಾಲೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಭಾಗದಲ್ಲಿ ನೀರಾವರಿ ಕಟ್ಟಡ ಹಾಗೂ ನಾಲೆಯ ಗೇಟ್‍ಗಳು ಹಾಳಾಗಿವೆ. ಆದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ ಎಂದರು.

ಸಿಬ್ಬಂದಿ ಕೊರತೆಯಿಂದ ಬಸವಾಪಟ್ಟಣ ಕೊನೆ ಭಾಗಕ್ಕೆ ನೀರು ತಲುಪಿಲ್ಲ ಎಂದು ಎಇಇ ಧನಂಜಯ ಸ್ಪಷ್ಟನೆ ನೀಡಿದರು.

ಭದ್ರಾ ಜಲಾಶಯದಿಂದ ನೀರು ಹರಿಸಿ 50 ದಿನ ಕಳೆದಿದೆ, ಇನ್ನೂ 70 ದಿನ ಮಾತ್ರ ಬಾಕಿ ಉಳಿದಿದೆ.  ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಗಳಾದ ಮಲೇಬೆನ್ನೂರು, ಬಸವಾಪಟ್ಟಣದ ರೈತರ ಜಮೀನುಗಳಿಗೆ ನೀರು ಇನ್ನೂ ತಲುಪಿಲ್ಲ. ಭದ್ರಾ ಜಲಾಶಯದ ನೀರು ಜಿಲ್ಲೆಯ ಜೀವನಾಡಿಯಾಗಿದ್ದು, ಈ ನೀರು ನಂಬಿ ಲಕ್ಷಾಂತರ ಎಕರೆ ಭೂಮಿಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ತಿಂಗಳು ಸಮೀಪವಾದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬರುತ್ತಿಲ್ಲ. ಭದ್ರಾ ಜಲಾಶಯದ ನೀರನ್ನು ನಂಬಿ ಭತ್ತ ನಾಟಿ ಮಾಡಿರುವ ಲಕ್ಷಾಂತರ ರೈತರು ನೀರಿಗಾಗಿ ಕಾದು ಕುಳಿತಿದ್ದಾರೆ. ಮಲೇಬೆನ್ನೂರಿನ ಕೊನೆ ಭಾಗದ ರೈತರು ಸೇರಿದಂತೆ ಹತ್ತಾರು ಹಳ್ಳಿಗಳು ನೀರಿನ ದಾರಿ ಕಾಯುತ್ತಿವೆ. ತಿಂಗಳು ಸಮೀಪವಾದರೂ ಈ ಪ್ರದೇಶಕ್ಕೆ ನೀರು ಬರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಜಿಲ್ಲಾ ಯೋಜನಾ ನಿರ್ದೇಶಕ ಮಹಾಂತೇಶ್ ಹಾಜರಿದ್ದರು.

Leave a Reply