ಮೌನ ಸಾಧಕ ಡಾ. ಮನಮೋಹನ್ ಸಿಂಗ್

1 year ago

ಬೀದಿ ದೀಪದ ಕೆಳಗೆ ಕುಳಿತು, ಬಡತನದಲ್ಲಿ ಓದಿ ದೊಡ್ಡವನಾದವನೆಂದು ಎಲ್ಲಿಯೂ ಹೇಳಿ ಅನುಕಂಪ ಪಡೆದುಕೊಳ್ಳಲಿಲ್ಲ.

ಹತ್ತು ಹಲವಾರು ಪದವಿಗಳನ್ನ, ವಿಶ್ವವಿದ್ಯಾನಿಲಯಗಳ ಪುರಸ್ಕಾರಗಳನ್ನ, ಪಡೆದ ಜ್ಞಾನವಂತನೆಂದು, ಮೇಧಾವಿ ತಾವೆಂದು ಎಂದು ಎದೆ ಉಬ್ಬಿಸಿ ನಡೆಯಲಿಲ್ಲ.

ದೇಶ ಆರ್ಥಿಕ ಸಂಕಷ್ಟದಲ್ಲಿದ್ದ ಸಮಯದಲ್ಲಿ ತಾವು ರೂಪಿಸಿದ ಆರ್ಥಿಕ ಕಾರ್ಯಕ್ರಮಗಳು ದೇಶದ ಸುಭದ್ರ ಆರ್ಥಿಕ ಸ್ಥಿತಿಗೆ ಕಾರಣವಾಯಿತು ಎಂದು ಎಂದೂ ತಮ್ಮನ್ನು ಬಿಂಬಿಸಿಕೊಳ್ಳಲಿಲ್ಲ.

ದೇಶದ ಆರ್ಥಿಕ ಪ್ರಗತಿಗೆ ತಾವು ಮಂಡಿಸಿದ ಮುಂಗಡಪತ್ರ ಕಾರಣವೆಂದು ಯಾವ ವೇದಿಕೆಯಲ್ಲೂ ಬಿಂಬಿಸಿಕೊಳ್ಳಲಿಲ್ಲ. ಬಾಡಿಗೆ ಜನರನ್ನು ಸೇರಿಸಿ ಸಮಾರಂಭಗಳನ್ನ ಏರ್ಪಡಿಸಿ ವೇದಿಕೆಗಳ ಮೇಲೆ ಚಪ್ಪಾಳೆಗಳ ನಿರೀಕ್ಷಿಸಲಿಲ್ಲ.

ದೇಶದ ಹಲವಾರು ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದ ಹಿಂದೆ ತಮ್ಮ ಆಲೋಚನೆಗಳಿವೆ ಎಂದು ಎಲ್ಲಿಯೂ ತಮ್ಮನ್ನು ತಾವು ಹೊಗಳಿಕೊಳ್ಳಲಿಲ್ಲ.

ಹತ್ತು ಹಲವಾರು ಹುದ್ದೆಗಳನ್ನ ಅಲಂಕರಿಸಿದರು ಅಹಂಕಾರದಿಂದ ಎಂದೂ ನಡೆದುಕೊಳ್ಳಲಿಲ್ಲ.

ಟೀಕಿಸಿದವರ ಟೀಕೆಗಳಿಗೆ ಕುಗ್ಗಲಿಲ್ಲ, ಕೋಪಿಸಿಕೊಳ್ಳಲು ಇಲ್ಲ, ಹಂಗಿಸಿದ, ಅಪಹಾಸ್ಯ ಮಾಡಿದ ನಾಯಕರಗಳ ಬಗ್ಗೆ ಹಗೆತನ ಬೆಳೆಸಿಕೊಳ್ಳಲಿಲ್ಲ.

ರೈತರ 72,000 ಕೋಟಿ ಸಾಲ ಮನ್ನಾ ಮಾಡಿದೆ ಎಂದು ರೈತರ ಜೊತೆಯಲ್ಲಿ ನಿಂತು ಫೋಟೋ ಪೋಸುಗಳ ಕೊಡಲಿಲ್ಲ.

ಉಚಿತ ಶಿಕ್ಷಣ ಕಾಯ್ದೆಯನ್ನ ಜಾರಿಗೊಳಿಸಿದನೆಂದು ಬಹಳ ಮಕ್ಕಳ ನಡುವೆ ನಿಂತು ಸಾಧಕನಂತೆ ಅಬ್ಬರಿಸಲಿಲ್ಲ.

ಪ್ರತಿಯೊಬ್ಬ ನಾಗರೀಕರಿಗೆ ಗುರುತಿನ ಚೀಟಿ ಆಧಾರ್ ಕಾರ್ಡ್ ರೂವಾರಿ ನಾವೆಂದು ಎಲ್ಲಿಯೂ ವೇದಿಕೆಗಳ ಮೇಲೆ ನಿಂತು ಕೈಬೀಸುತ್ತ ಮಾಧ್ಯಮದವರ ಕ್ಯಾಮರಾ ಗಳಿಗಾಗಿ ಕಾಯಲಿಲ್ಲ.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ಗ್ರಾಮೀಣ ಜನರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿ ಕೊಟ್ಟರು ಸಹ ಇದಕ್ಕಾಗಿ ಪ್ರಶಂಸೆಗಳನ್ನು  ನಿರೀಕ್ಷಿಸಲಿಲ್ಲ.

ದೇಶದ ಇಂಧನ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬೆಳವಣಿಗೆಗೆ ಅಣು ಒಪ್ಪಂದಕ್ಕಾಗಿ ಪಟ್ಟು ಹಿಡಿದು ಸಹಿ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ಅಧಿಕಾರವನ್ನು ತ್ಯಜಿಸಲು ಸಿದ್ಧರಿದ್ದ ಇವರ ಗಟ್ಟಿತನದ ಬಗ್ಗೆ ಯಾರೂ ಮಾತನಾಡಲಿಲ್ಲ.

ಆರೋಗ್ಯ, ಆಹಾರ ಭದ್ರತೆ, ಮಾಹಿತಿ ಹಕ್ಕು ಕಾಯ್ದೆ, ಇವುಗಳನ್ನು ತಂದವರು ನಾನೆಂದು ಎಲ್ಲಿಯೂ ಆರ್ಭಟಿಸಲಿಲ್ಲ.

ಅಮೇರಿಕಾದಂತಹ ದೊಡ್ಡ ದೇಶಗಳು ಆರ್ಥಿಕ ಸಂಕಷ್ಟದ ಸಮಯದಲ್ಲಿ ತಮ್ಮ ಸಲಹೆಯನ್ನ ಕೇಳುತ್ತಾರೆ, ನಾನೊಬ್ಬ ಆರ್ಥಿಕ ತಜ್ಞ, ಮೇಧಾವಿ ಎನ್ನುತ್ತಾ ಎಂದು ಸಹ ಮೆರೆಯಲಿಲ್ಲ. ಎಲ್ಲ ಕಾರ್ಯಕ್ರಮದಲ್ಲೂ ಎಲ್ಲ ಯೋಜನೆಯಲ್ಲಿ ತಮ್ಮ ಭಾವಚಿತ್ರವಿರಬೇಕೆಂದು ಹಂಬಲಿಸಲೇ ಇಲ್ಲ.

ದೇಶದಲ್ಲಿ ಹಲವಾರು ರೀತಿಯಲ್ಲಿ ಕೋಟಿ ಕೋಟಿ ಭಾರತೀಯರಿಗೆ ಉದ್ಯೋಗಗಳು ದೊರೆಯಲು, ಹಣದ ಹರಿವು ಹೆಚ್ಚಾಗಲು, ಬಡತನ ನಿವಾರಣೆಯಾಗಲು, ಸದೃಢವಾದ ಆರ್ಥಿಕತೆ ನಿರ್ಮಾಣವಾಗಲೂ ತನ್ನ ಜ್ಞಾನ, ಪಾಂಡಿತ್ಯ, ಕಠಿಣ ಕ್ರಮಗಳು ಕಾರಣವಾಗಿದೆ ಎಂದು ಯಾವ ಘಳಿಗೆಯಲ್ಲೂ ಸ್ವಯಂ ಪ್ರಶಂಸೆ ಮಾಡಿಕೊಳ್ಳಲಿಲ್ಲ, ಫಲಾನುಭವಿಗಳು ಇವರ ಬಗ್ಗೆ ಲಘುವಾಗಿ ಮಾತನಾಡಿದರು ಬೇಸರಪಟ್ಟುಕೊಳ್ಳಲಿಲ್ಲ.

ಬದುಕಿದ್ದಾಗ ಇವರ ಸಾಧನೆಯನ್ನ, ಇವರ ಶ್ರೇಷ್ಠತೆಯನ್ನ, ದೇಶಕ್ಕೆ ಸಲ್ಲಿಸಿದ ಸೇವೆಯನ್ನ, ಸರಳತೆಯನ್ನ, ನೆನಪಿಸಿಕೊಳ್ಳಲೇ ಇಲ್ಲ, ಸಾಧಕರು, ಪ್ರಚಾರಪ್ರಿಯರು ಅಲ್ಲದವರು, ಸತ್ತಾಗ ಮಾತ್ರ ಸುದ್ದಿ ಆಗುತ್ತಾರೆ ಎನ್ನುವುದಕ್ಕೆ ಡಾ. ಮನಮೋಹನ್ ಸಿಂಗ್ ರವರ ಬಗ್ಗೆ ಈಗ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳೇ ಸಾಕ್ಷಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply