ಜನ ರಾಜಕಾರಣ ಮಾಡಲು ತಡಬಡಾಯಿಸುವ ನಮಗೆ ಒಂದು ಪಾಠ

2 years ago

ಮಾಜಿ ಲೇಬರ್ ಪಕ್ಷದ ಮುಖಂಡ, ಸಮಾಜವಾದಿ, ರಾಜಕೀಯವಾಗಿ ಎಡಪಂಥೀಯ, ಪ್ಯಾಲೆಸ್ತೀನ್ ಬೆಂಬಲಿಗ ಜೆರ್ಮಿ ಕಾರ್ಬಿನ್ ಈ ಬಾರಿ ಭಾರತೀಯ ಮೂಲದ, ಲೇಬರ್ ಪಕ್ಷದ ಬಲಪಂಥೀಯ ಬೆಂಬಲಿಗ ಪ್ರಫುಲ್ ನರಗುಂದ ಅವರನ್ನು ಸೋಲಿಸಿದ್ದಾರೆ.

1960ರ ದಶಕದಲ್ಲಿ ದ. ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಹೋರಾಟದಿಂದ ಶುರುವಾಗಿ ಇತ್ತೀಚಿನ ಇಸ್ರೇಲ್ ನ ನರಮೇಧದ ವಿರುದ್ಧ ಹೋರಾಡುತ್ತಿರವ ಕಾರ್ಬಿನ್ ಪ್ರಸ್ತುತ ಸಂದರ್ಭದಲ್ಲಿ ತನ್ನ ಸಮಾಜವಾದಿ ನಿಲುವಿಗಾಗಿ ಕಟುವಾಗಿ ಟೀಕೆಗೆ ಒಳಗಾದ ರಾಜಕಾರಣಿ. ಆದರೆ ‘ಗಾಜಾ ಪ್ರದೇಶದಲ್ಲಿನ ಹೆಣಗಳನ್ನು ಕಂಡು ಹೇಗೆ ನಿದ್ರಿಸಬಲ್ಲೆ’ ಎಂದು ವಿಷಾದ ವ್ಯಕ್ತಪಡಿಸಿದ ಕಾರ್ಬಿನ್ ಪರ ಬ್ರಿಟನ್ ನ ಸಾವಿರಾರು ಪ್ಯಾಲೆಸ್ತೀನ್ ಬೆಂಬಲಿಗರು ನಿಂತರು.

ಇದು ವೈರುಧ್ಯಗಳ ಜಗತ್ತಲ್ಲವೇ?

ಫ್ರೆಂಚ್ ಲೇಖಕ André Gideನ ‘ಹೇಳಬೇಕಾಗಿರುವುದನ್ನು ಎಲ್ಲಾ ಹೇಳಿಯಾಗಿದೆ, ಆದರೆ ಯಾರೂ ಅಲಿಸುತ್ತಿಲ್ಲವಾದ್ದರಿಂದ ಮತ್ತೊಮ್ಮೆ ಹೇಳಲೇಬೇಕಾಗಿದೆ’ ಎಂಬ ಮಾತುಗಳು ತನ್ನ ಸಿದ್ಧಾಂತದ ಪರ ಅಂಟಿಕೊಂಡಿರುವ, ಛಲ ಬಿಡದ ಕಾರ್ಬಿನ್ ರಾಜಕೀಯಕ್ಕೆ ಅನ್ವಯಿಸುತ್ತದೆ. ಕಳೆದ ಐವತ್ತು ವರ್ಷಗಳಿಂದ ತನ್ನ ದುಡಿಯುವ ವರ್ಗದ ಪರ ಚಿಂತನೆಗಳನ್ನು ಹೇಳುತ್ತಲೇ ಬಂದಿರುವ ಕಾರ್ಬಿನ್ ಎಪ್ಪತ್ತರ ವಯಸ್ಸಿನಲ್ಲಿಯೂ ಆಶಾವಾದ ಕಳೆದುಕೊಂಡಿಲ್ಲ.

ನವ ಉದಾರೀಕರಣದ ವಿರುದ್ಧದ ‘ಕಾರ್ಬಿನಿಸಂ’ ನೀತಿಗಳನ್ನು ಲೇಬರ್ ಪಕ್ಷದ ಪ್ರಣಾಳಿಕೆಯಾಗಿ ಪರಿವರ್ತನೆಯಾಗಲಿಲ್ಲ. ಈ ಕಾರಣದಿಂದ ಕಾರ್ಬಿನ್ ನಾಲ್ಕು ದಶಕಗಳಿಂದ ಗೆಲುವು ಸಾಧಿಸಿದರೂ ಸಹ ಆತನ ನೇತೃತ್ವದಲ್ಲಿ 2019ರ ಚುನಾವಣೆಯಲ್ಲಿ ದಯನೀಯವಾಗಿ ಸೋತರು.

ಸಮಾನತೆ, ಪ್ರಜಾಪ್ರಭುತ್ವ, ಶಾಂತಿ ಕುರಿತು ಮಾತನಾಡುವ ಕಾರ್ಬಿನ್ ಅವರ ಸಮತಾವಾದವನ್ನು ತೀವ್ರ ಎಡಪಂಥೀಯ ಎಂದು ಟೀಕಿಸಿದ ಲೇಬರ್ ಪಕ್ಷದ ಸ್ಟಾರ್ಮರ್ 2020ರಲ್ಲಿ ಕಾರ್ಬಿನ್ ರನ್ನು ಪಕ್ಷದಿಂದ ಅಮಾನತು ಮಾಡಿದರು. 2024ರ ಚುನಾವಣೆಯಲ್ಲಿ ಕಾರ್ಬಿನ್ ಮತ್ತು ಪ್ಯಾಲೆಸ್ತೀನ್ ಪರ ಇತರ ನಾಲ್ವರು ಸ್ವತಂತ್ರವಾಗಿ ಸ್ಪರ್ಧಿಸಿದಾಗ ಈ ಐವರನ್ನು ಪಕ್ಷದಿಂದ ಹೊರ ಹಾಕಲಾಯಿತು.

ಆದರೆ ಈ ಬಾರಿ ಬ್ರಿಟನ್ನರ ಕನ್ಸರ್ವೇಟಿವ್ ವಿರೋಧಿ ನಿಲುವು ಎಲ್ಲವನ್ನೂ ಬದಲಾಯಿಸಿದೆ

ಕಾರ್ಬಿನ್ ಜೊತೆಗೆ ಶೋಕತ್ ಅಡಮ್, ಅಯೂಬ್ ಖಾನ್, ಅದ್ನಾನ್ ಹುಸೇನ್, ಇಕ್ಬಾಲ್ ಮಹಮ್ಮದ್ ಸಹ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇವರ ಜೊತೆ ಗ್ರೀನ್ ಪಕ್ಷದ ನಾಲ್ವರು ಗೆದ್ದಿದ್ದಾರೆ. ಇವರೆಲ್ಲರೂ ಮರಳಿ ಪ್ರಗತಿಪರ, ಬಲಪಂಥೀಯ, ನವ ಉದಾರೀಕರಣ ವಿರೋಧಿ ರಾಜಕಾರಣವನ್ನು ಮರಳಿ ಕಟ್ಟಲು ಈ ಗೆಲುವಿನಲ್ಲಿ ಸೂಕ್ತ ಅವಕಾಶ ದೊರಕಿದೆ.

ಮತ್ತು ಜನ ರಾಜಕಾರಣ ಮಾಡಲು ತಡಬಡಾಯಿಸುವ ನಮಗೆ ಒಂದು ಪಾಠವೂ ಸಹ.

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಗಾರರು

Leave a Reply