ಕಾಂಗ್ರೆಸ್ ನಾಯಕರಿಗೆ ಅಭಿನಂದನೆಗಳು: ಎಂ ಪಿ ರೇಣುಕಾಚಾರ್ಯ

10 months ago

ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡಿ, ಕೆಲವು ಜಾತಿಗಳನ್ನು ನಿರ್ಲಕ್ಷ್ಯಸಿ ತಮ್ಮ ಸ್ವಾರ್ಥ ಸಾಧನೆಗಾಗಿ ಸಿ ಎಂ ಸಿದ್ದರಾಮಯ್ಯ ಅವರು ತಮ್ಮ ಮನೆಯಲ್ಲೇ ಬರೆಸಿಕೊಂಡಿದ್ದ ಜಾತಿ ಜನಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆಯುವಂತೆ ಹೇಳಿರುವ ಕಾಂಗ್ರೆಸ್ ನಾಯಕರಿಗೆ ಅಭಿನಂದನೆಗಳು.

ಜಾತಿಜನಗಣತಿ ವರದಿಯಿಂದ ಸಮುದಾಯಗಳ ನಡುವೆ ಬೆಂಕಿ ಹಚ್ಚಿ ತಮ್ಮ ಕುರ್ಚಿಯನ್ನು ಹೇಗಾದರೂ ಮಾಡಿ ಗಟ್ಟಿ ಮಾಡಿಕೊಳ್ಳಬೇಕು ಎಂಬ ದೂರಾಲೋಚನೆಯಲ್ಲಿ ಇದ್ದ ಸ್ವಯಂ ಘೋಷಿತ ಮಹಾನ್ ಜಾತ್ಯತೀತ ನಾಯಕರಿಗೆ ಕಾಂಗ್ರೆಸ್ ಹೈ ಕಮಾಂಡ್ ಮುಖಕ್ಕೆ ಮಾಡಿರುವ ಮಂಗಳಾರತಿ ಹೊರೆತು ಬೇರೆ ಇನ್ನೇನು ಇಲ್ಲ!

ಅಸಲಿಗೆ ಈ ವರದಿ ತಯಾರಾಗಿದ್ದೇ ಸಿ.ಎಂ ನಿವಾಸದಲ್ಲಿ. ತಮಗೆ ತೋಚಿದ ಹಾಗೆ ಬರೆಸಿಕೊಂಡರೇ ಹೊರತು, ಆಯೋಗಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶವನ್ನೇ ಕೊಟ್ಟಿರಲಿಲ್ಲ. ಸಿ.ಎಂ ಸಿಬ್ಬಂದಿ ಹಾಗೂ ಹಿಂಬಾಲಕರು  ಕೊಟ್ಟಿದ್ದನ್ನೇ ಆಯೋಗ ಸಿದ್ಧಪಡಿಸಿತ್ತು.

ವರದಿ ಬಿಡುಗಡೆಗೆ ನಾಡಿನ ಮಠಾಧೀಶರು, ವಿರೋಧ ಪಕ್ಷದವರು, ಸ್ವತಃ ನಿಮ್ಮ ಸಂಪುಟದ ಸಹೋದ್ಯೋಗಿಗಳು ವಿರೋಧ ವ್ಯಕ್ತಪಡಿಸಿದರೂ ಜಪ್ಪಯ್ಯ ಎನ್ನದ 24 ಕ್ಯಾರೆಟ್ ಸಿದ್ದರಾಮಯ್ಯ ಅವರು ಹೈ ಕಮಾಂಡ್ ನ ಒಂದು ಗುಟುರಿಗೆ ಕೋಲೆಬಸವನಂತೆ ತಲೆ ಅಲ್ಲಾಡಿಸಿರುವುದು ಕುರ್ಚಿ ಉಳಿಸಿಕೊಳ್ಳುವ ಭೀತಿ ಇರಬಹುದು.

ಬೇರೆಯವರ ಧಮ್ಮು, ತಾಕತ್ತು, ಪ್ತಶ್ನೆ ಮಾಡುವ ಮುಖ್ಯಮಂತ್ರಿಗೆ ನೋಡಿ ಬಿಡುತ್ತೇನೆ. ಆದಾದ್ದು ಆಗಲಿ, ವರದಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳುವಷ್ಟು ಧೈರ್ಯ ಇರಲಿಲ್ಲವೇ? ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಾಗಿದೆ ನಿಮ್ಮ ಪರಿಸ್ಥಿತಿ.

ರಾಜ್ಯ ಸರ್ಕಾರ ತಯಾರಿಸಿದ ಜಾತಿ ಗಣತಿ ವರದಿಯನ್ನು ಖುದ್ದು ಕಾಂಗ್ರೆಸ್ ಹೈಕಮಾಂಡ್ ಕಿತ್ತು ಬಿಸಾಕಿದೆ. 150 ಕೋಟಿ ರೂ.ವೆಚ್ಚ ಮಾಡಿ ತಯಾರಿಸಿದ ಈ ವರದಿ ರಾಜ್ಯದ ತೆರಿಗೆದಾರರಿಗೆ ಮಾಡಿದ ಮಹಾಮೋಸದ ಜತೆಗೆ ಹಿಂದುಳಿದ ಹಾಗೂ ಶೋಷಿತ ಸಮುದಾಯಕ್ಕೆ ಮಾಡಿದ ಮಹಾಮೋಸವಾಗಿತ್ತು.

ಕಳೆದ ಹತ್ತು ವರ್ಷಗಳಿಂದ ಸಿದ್ದರಾಮಯ್ಯನವರು ಇದೇ ವಿಚಾರವನ್ನು ಇಟ್ಟುಕೊಂಡು ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಜತೆಗೆ ಸಮುದಾಯಗಳ ಮಧ್ಯೆ ಅಸಮಾಧಾನ, ಬೇಸರವನ್ನು ಸೃಷ್ಟಿಸಿದ್ದರು. ಈ ಎಲ್ಲ ಅವಾಂತರಗಳ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು.

– ಎಂ ಪಿ ರೇಣುಕಾಚಾರ್ಯ, ಮಾಜಿ ಸಚಿವ

Leave a Reply