ಸಂತ್ರಸ್ತರಿಂದ ಕುಪ್ಪೆಪದವು ಪಂಚಾಯತ್ ಮುಂಭಾಗ ಧರಣಿ

1 year ago

ಹಕ್ಕು ಪತ್ರ ಪಡೆದವರಿಗೆ ನಿವೇಶನ ಸ್ವಾಧೀನ ನೀಡದೆ ಅನ್ಯಾಯ

ಮಂಗಳೂರು: ಕುಪ್ಪೆ ಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರು, ಮನೆ, ನಿವೇಶನಕ್ಕಾಗಿ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿ ದಶಕದಿಂದ ಕಾಯುತ್ತಿದ್ದಾರೆ. ಇದರಲ್ಲಿ 98 ಕುಟುಂಬಗಳಿಗೆ 2018ರಲ್ಲಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ವಿತರಿಸಲಾಗಿತ್ತು.

ಆದರೆ, ನಿವೇಶನವನ್ನು ಫಲಾನುಭವಿಗಳಿಗೆ ಸ್ವಾಧೀನ ನೀಡದೆ “ಇಂದು, ನಾಳೆ” ಎಂದು ಸತಾಯಿಸುತ್ತಾ ಬರಲಾಗಿದೆ. ಇದರಿಂದ ಬೇಸತ್ತ ಸಂತ್ರಸ್ತರು “ಮನೆ, ನಿವೇಶನ ಹೋರಾಟ ಸಮಿತಿ, ಕುಪ್ಪೆಪದವು” ಇದರ ನೇತೃತ್ವದಲ್ಲಿ ಇಂದು ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಧರಣಿ ನಡೆಸಿದರು.

ಧರಣಿಯ ವಿಷಯ ಅರಿತ ಮಂಗಳೂರು ಸಹಾಯಕ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಮನವಿ ಸ್ವೀಕರಿಸಿದರು. ಸಂತ್ರಸ್ತ ಫಲಾನುಭವಿಗಳು ಹಾಗೂ ಪಂಚಾಯತ್ ಅಧಿಕಾರಿಗಳಿಂದ ದಾಖಲೆಗಳನ್ನು ತರಿಸಿ ಪರಿಶೀಲಿಸಿದರು.

ಮಾತುಕತೆಯ ಕೊನೆಯಲ್ಲಿ, 17 ಕುಟುಂಬಗಳಿಗೆ ಇನ್ನು 15 ದಿನಗಳಲ್ಲಿ ಮಂಜೂರಾಗಿರುವ ನಿವೇಶನ ಹಸ್ತಾಂತರಿಸುವುದಾಗಿ ಸ್ಪಷ್ಟ ಭರವಸೆ ನೀಡಿದರು.

ಇನ್ನುಳಿದ 81 ಕುಟುಂಬಗಳಿಗೆ ಮಂಜೂರಾಗಿರುವ ನಿವೇಶನದ ಜಮೀನು ಸಮತಟ್ಟು, ಮರಮಟ್ಟು ತೆರವಿಗೆ ಅಂದಾಜು 15 ಲಕ್ಷ ರೂಪಾಯಿ ಅನುದಾನ ಅಗತ್ಯ ಇದ್ದು, ಈ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಮಾಡುವುದು, ಅದಾಗದಿದ್ದಲ್ಲಿ ಗ್ರಾಮದಲ್ಲಿ ಲಭ್ಯ ಇರುವ ಸರಕಾರಿ ಜಮೀನಿನಲ್ಲಿ ಪರ್ಯಾಯ ನಿವೇಶನ ನೀಡಲು ಕ್ರಮ ಕೈಗೊಳ್ಳುವುದು, ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಹದಿನೈದು ದಿನಗಳ ಕಾಲಾವಧಿ ನೀಡುವಂತೆ ವಿನಂತಿಸಿದರು.

ನೀಡಿದ ಭರವಸೆ ಒಂದು ತಿಂಗಳ ಒಳಗಡೆ  ಈಡೇರದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರದೊಂದಿಗೆ ಧರಣಿ ಮುಕ್ತಾಯಗೊಳಿಸಲಾಯಿತು.

ಧರಣಿಯಲ್ಲಿ ಸಿಪಿಐಎಂ ದ‌.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾರ್ಮಿಕ ನಾಯಕ ಸದಾಶಿವ ದಾಸ್, ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮುಹಮ್ಮದ್ ಶೆರೀಫ್ ಕಜೆ, ಸಿಪಿಐಎಂ ಸ್ಥಳೀಯ ಮುಖಂಡರಾದ ವಾರಿಜ ಕುಪ್ಫೆಪದವು, ಬೇಬಿ ನಾಯ್ಕ್, ಸುಂದರ ನಾಯ್ಕ್, ಕುಸುಮ ಕುಪ್ಪೆಪದವು, ಭವಾನಿ ಕುಪ್ಪೆಪದವು ಮತ್ತಿತರರು ಉಪಸ್ಥಿತರಿದ್ದರು.

Leave a Reply