ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ವಿದ್ಯಾಧರ ಶಿರಹಟ್ಟಿ ಸಲಹೆ
ಬಳ್ಳಾರಿ: ಹಣ ನೀಡಿ ಸೇವೆ ಸ್ವೀಕರಿಸುವ ಪ್ರತಿಯೊಬ್ಬರೂ ಗ್ರಾಹಕರಾಗಿದ್ದು, ಸೇವೆಯಲ್ಲಿ ಲೋಪವಾದಾಗ ಗ್ರಾಹಕರ ರಕ್ಷಣೆ ಕಾಯ್ದೆ-1986ರ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಒಂದನೇ ಹೆಚ್ಚುವರಿ ನ್ಯಾಯಧೀಶ ವಿದ್ಯಾಧರ ಶಿರಹಟ್ಟಿ ಹೇಳಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಲ್ಲಿಪುರ ರಸ್ತೆಯ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ವ್ಯಾಪಾರ ವಹಿವಾಟಿನಲ್ಲಿ ಭಾಗಿದಾರರಾಗುತ್ತಾರೆ. ವಸ್ತು-ಆಹಾರ ವಿಷಯ ಸೇರಿದಂತೆ ಗ್ರಾಹಕರು ಖರೀದಿಸುವ ಇನ್ನಿತರೆ ಸಾಮಾಗ್ರಿಗಳಲ್ಲಿ ರಾಜಿ ಸಲ್ಲ. ಗಾಳಿ, ಬೆಳಕು, ನೀರು ಶುದ್ಧವಾಗಿರುವಂತೆ ಹೇಗೆ ಬಯಸುತ್ತೇವೋ ಅದೇ ರೀತಿ ಗ್ರಾಹಕರು ಖರೀದಿಸುವ ಪ್ರತಿಯೊಂದು ವಸ್ತುವಿನಲ್ಲಿ ಶುಭ್ರತೆ, ಗುಣಮಟ್ಟ ಅಪೇಕ್ಷೆ ಪಡುವುದು ಗ್ರಾಹಕರ ಕರ್ತವ್ಯವಾಗಿದೆ ಎಂದರು.
ಗ್ರಾಹಕರು ವಸ್ತು-ಸಾಮಾಗ್ರಿ ಖರೀದಿಸುವ ಸಂಧರ್ಭದಲ್ಲಿ ಉತ್ಕೃಷ್ಠ ಹಾಗೂ ಉತ್ತಮ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೇವಾ ವಲಯ ಮತ್ತು ವಾಣಿಜ್ಯ ವಲಯ ಸೇರಿದಂತೆ ಇತರೆ ವಲಯಗಳಲ್ಲಿ ಗ್ರಾಹಕರು ನ್ಯೂನ್ಯತೆ ಎದುರಿಸಿದಲ್ಲಿ ಕಾನೂನಾತ್ಮಕ ರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಸ್ತುತ ಡಿಜಿಟಲ್ ಮಾಧ್ಯಮದ ಯುಗವಾಗಿದೆ. ಗ್ರಾಹಕರು ತಮ್ಮ ಅಂಗೈಯಲ್ಲಿನ ಮೊಬೈಲ್ ಬಳಕೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ಆನ್ಲೈನ್ ವಹಿವಾಟಿನಲ್ಲಿ ಮೋಸ ಹೋಗುವ ಸಂಭವವಿದ್ದು, ಕಾನೂನು ತಿಳುವಳಿಕೆ ಇರಬೇಕು ಎಂದು ವಿದ್ಯಾರ್ಥಿ-ಗ್ರಾಹಕರಿಗೆ ಸಲಹೆ ನೀಡಿದರು.
ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಗ್ರಾಹಕರೇ ಹೆಚ್ಚು ವಂಚಿತರಾಗುತ್ತಿದ್ದು, ಅವರು ಎಚ್ಚೆತ್ತುಕೊಳ್ಳಬೇಕಿದೆ. ಅವಿದ್ಯಾವಂತರಿಗೆ ಮತ್ತು ತಮ್ಮ ನೆರೆ-ಹೊರೆಯರಿಗೆ ಗ್ರಾಹಕರ ರಕ್ಷಣೆಯ ಕಾನೂನು-ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ.ಎನ್ ಮಾತನಾಡಿ, ಹಣ ನೀಡಿ ಸೇವೆ ಪಡೆಯುವ ಎಲ್ಲರೂ ಗ್ರಾಹಕರೆ. ಗ್ರಾಹಕರು ಖರೀದಿಸುವ ವಸ್ತು ಅಥವಾ ಸಾಮಾಗ್ರಿಗಳಲ್ಲಿ ಲೋಪವಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೇ, ಗ್ರಾಹಕರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಒದಗಿಸಿ ಕೊಡಲಾಗುತ್ತದೆ ಎಂದರು.
ಗ್ರಾಹಕರು ಕಾನೂನಾತ್ಮಕ ಹಕ್ಕುಗಳಾದ ಗ್ರಾಹಕರ ರಕ್ಷಣಾ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಅದಾಲತ್ ಹಕ್ಕು, ಪರಿಹಾರ ಪಡೆಯುವ ಹಕ್ಕು, ಆರೋಗ್ಯ ಪೂರ್ಣ ಪರಿಸರ ಹಕ್ಕುಗಳ ಕುರಿತು ಜ್ಞಾನ ಹೊಂದಬೇಕು. ಯಾವುದೇ ವಸ್ತು-ಸಾಮಾಗ್ರಿ ಖರೀದಿಸಿದಾಗ ರಸೀದಿ ಪಡೆಯಬೇಕು ಎಂದರು.
ಹಿರಿಯ ವಕೀಲರಾದ ಎನ್.ಪ್ರಕಾಶ್ ಅವರು ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂಧರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಮುಜಾವರ್, ಕಾನೂನು ಮಾಪನ ಶಾಸ್ತ್ರದ ಸಹಾಯಕ ನಿಯಂತ್ರಕರಾದ ಅಮೃತಾ ಪಿ.ಚವ್ಹಾಣ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.



