ನಿಮಗೆ ಹುಟ್ಟುಸಾವುಗಳಿಲ್ಲದ ಮೋಕ್ಷ ಸಿಕ್ಕಿದೆ ಎಂದು ಭಾವಿಸುತ್ತೇನೆ

1 year ago

ದುರ್ವಿಧಿ, ದುರ್ಘಟನೆ, ದುರಂತ.

ನಮ್ಮಿಬ್ಬರದೂ ಸಮವಯಸ್ಕರ ಸ್ನೇಹವೋ, ಅಣ್ಣತಮ್ಮರ ಅನುಬಂಧವೋ, ಸಹೋದ್ಯೋಗಿಗಳ ಆತ್ಮೀಯತೆಯೋ, ಸಮಾನಮನಸ್ಕ-ಸಮಾನಸ್ಕಂಧರ ಸಂಬಂಧವೋ,,… ಕೊನೆಗೂ ಗೊತ್ತಾಗಲಿಲ್ಲ. ಇವೆಲ್ಲವೂ ಹೌದಾಗಿತ್ತು, ಇದಕ್ಕಿಂತ ಹೆಚ್ಚಿನದೂ ಆಗಿತ್ತು. ಆತ್ಮಬಂಧು.

ಒಂಬತ್ತು ವರ್ಷಗಳ ಪರಿಚಯ, ಒಡನಾಟ, ಜೊತೆಗೂಡಿ ಕೆಲಸ. ಕಳೆದ 7 ವರ್ಷಗಳಲ್ಲಿ ಇಬ್ಬರೂ ಕೇವಲ ರಾಜ್ಯವಲ್ಲ, ದೇಶವನ್ನೇ ಸುತ್ತಿದ್ದೆವು; ಅದೂ ಇಪ್ಪತ್ತು-ಮುವ್ವತ್ತು ಸಾವಿರಕ್ಕಿಂತ ಹೆಚ್ಚು ಕಿಲೋಮೀಟರುಗಳ ಪ್ರವಾಸ, ಪ್ರಯಾಸ.

ಕಳೆದ ಆರೇಳು ವರ್ಷಗಳಿಂದ ಸಾರ್ಥಕ, ಸಂತೋಷ, ಸ್ವಾಭಿಮಾನ, ಸಂಭ್ರಮದ ಬದುಕು ಬದುಕುತ್ತಿದ್ದ ಲಿಂಗೇಗೌಡರು, ಮಾಡುವುದು ಬಹಳಷ್ಟಿತ್ತು. ನಾಡಿಗೆ ಅವರ ಕೊಡುಗೆಯ ಆರಂಭದ ದಿನಗಳಾಗಿದ್ದವು ಈ ದಿನಗಳು; ಭವಿಷ್ಯ ದೊಡ್ಡದಿತ್ತು. ನೆನ್ನೆ ಅದು ಹಠಾತ್ತಾಗಿ ಅಂತ್ಯವಾಯಿತು. ಮಹಾತ್ಮ ಗಾಂಧೀಜಿಯ ನಾಡಿನಲ್ಲಿ ನೆನ್ನೆ ಆದ ಅಪಘಾತವನ್ನು ಗಮನಿಸಿದರೆ, ಅವರಿಗೆ ಏನೊಂದೂ ಗೊತ್ತಾಗದೆ ಕ್ಷಣಮಾತ್ರದಲ್ಲಿ ಅವರ ಪ್ರಜ್ಞೆ ಮತ್ತು ಪ್ರಾಣ ಹೋಗಿಬಿಟ್ಟಿದೆ. ಯಾರ ಲೀಲೆಗೊ ಯಾರೋ ಏನೊ ಗುರಿಯಿರದೆ ಬಿಟ್ಟ ಬಾಣ!

ನಿಮಗೆ ಹುಟ್ಟುಸಾವುಗಳಿಲ್ಲದ ಮೋಕ್ಷ ಸಿಕ್ಕಿದೆ ಎಂದು ಭಾವಿಸುತ್ತೇನೆ, ಗೌಡ್ರೆ. ಶುಭವಿದಾಯ.

ಓಂ ಶಾಂತಿಃ.

– ರವಿಕೃಷ್ಣಾ ರೆಡ್ಡಿ, ಕೆ ಆರ್ ಎಸ್ ಅಧ್ಯಕ್ಷ

Leave a Reply