ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ

2 years ago

ಜಾಗತಿಕ ಪ್ರಪಂಚಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕು: ಡಾ.ಎಂ.ಸಿ.ಸುಧಾಕರ್

ಬಳ್ಳಾರಿ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಂಡು, ಹೆಚ್ಚು ಹೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ಜಾಗತಿಕ ಪ್ರಪಂಚಕ್ಕೆ ಅಭಿವೃದ್ಧಿಯ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರಲ್ಲಿ ಏರ್ಪಡಿಸಿದ್ದ 12 ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2010ರಲ್ಲಿ ಸ್ಥಾಪನೆಗೊಂಡ ವಿಜಯನಗರ ಶ್ರೀಕೃಷ್ಣದೇವರಾಯ ವಿದ್ಯಾಲಯವು, ತನ್ನ ವ್ಯಾಪ್ತಿಯಲ್ಲಿ ಸುಮಾರು 76 ಸ್ನಾತಕ, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಸಂಯೋಜಿತಗೊಳಿಸಿಕೊಂಡಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಪೂರ್ವ ಇತಿಹಾಸವುಳ್ಳ ವಿಶ್ವವಿದ್ಯಾಲಯಗಳಿವೆ. ಅದರಲ್ಲಿ ಮೈಸೂರು, ಧಾರವಾಡ, ಗುಲ್ಬರ್ಗಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳು ಹೆಸರು ಗಳಿಸಿದಂತವುಗಳಾಗಿವೆ. ಇತ್ತೀಚೆಗೆ ಚಾಮರಾಜನಗರ, ಕೊಡಗು ಮತ್ತು ಮಂಡ್ಯ ವಿಶ್ವವಿದ್ಯಾಲಯಗಳೂ ಸ್ಥಾಪನೆಗೊಂಡಿವೆ ಎಂದರು.

ಬಳ್ಳಾರಿ ಭಾಗವು ಸ್ವತಂತ್ರ ಪೂರ್ವದಲ್ಲಿಯೇ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯಲ್ಲಿ ಹಂಪಿಯು ವಿಶ್ವದಲ್ಲಿಯೇ ತನ್ನ ಗರಿಮೆಯನ್ನು ಬಿಂಬಿಸಿಕೊಂಡಿತ್ತು. ಇವೆಲ್ಲವುಗಳನ್ನು ಚರಿತ್ರೆಯ ಪುಟಗಳಲ್ಲಿ ಕಾಣಬಹುದಾಗಿದೆ. ಮುಂದಿನ ಭವ್ಯ-ಭಾರತದ ನಿರ್ಮಾಣಕ್ಕೆ ಇಲ್ಲಿನ ಸಮೃದ್ಧ ಖನಿಜಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಆಲೋಚಿಸಬೇಕಿದೆ ಎಂದರು.

ಜಾಗತಿಕ ವಿದ್ಯಮಾನದಲ್ಲಿ ಪದವಿ ಪಡೆದು ಹೊರಬರುವ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಠಿಸಲು ಶೈಕ್ಷಣಿಕ ಪಟ್ಟಿಗಳಲ್ಲಿ ಬದಲಾವಣೆಯ ಪೂರಕ ವಿಷಯಗಳನ್ನು ಅಳವಡಿಸುವ ಅಗತ್ಯ ಕಾರ್ಯವಾಗಬೇಕಿದೆ ಎಂದರು.

ವಿಶೇಷವಾಗಿ ಬಳ್ಳಾರಿ ಭಾಗದಲ್ಲಿ ಮೈನಿಂಗ್ ಮತ್ತು ಸ್ಟೀಲ್ ಕಾರ್ಖಾನೆಗಳಿದ್ದು, ಪರಿಣಿತರಿಂದ ಸಲಹೆ ಪಡೆದು, ಈ ವಿಶ್ವವಿದ್ಯಾಲಯದಲ್ಲಿ ಪೂರಕವಾದ ‘ಸಂಶೋಧನಾ ಕೇಂದ್ರ’ ಆರಂಭಿಸಲು ಕುಲಪತಿ ಕ್ರಮವಹಿಸಬೇಕು. ಕೌಶಲ್ಯ ತರಬೇತಿಗೆ ಹೆಚ್ಚು ನೀಡಬೇಕಿದೆ. ಇದರಿಂದ ಹೆಚ್ಚೆಚ್ಚು ಉದ್ಯೋಗಾವಕಾಶಗಳು ಸೃಷ್ಠಿಯಾಗಲಿವೆ. ಹಾಗಾಗಿ ನಮ್ಮ ಸರ್ಕಾರವು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಈ ಭಾಗದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅಸ್ತು ನೀಡಲಾಗಿದೆ ಎಂದರು.

ಈ ಭಾಗದಲ್ಲಿ ದೊರಕುವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕಿದೆ. ವಿದ್ಯಾರ್ಥಿಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಧೃತಿಗೆಡದೇ ಆತ್ಮಸ್ಥೈರ್ಯದಿಂದ ಮುನ್ನಡೆದು, ಸಾಧನೆಯ ಕೈಗನ್ನಡಿಯಾಗಬೇಕು. ಹಲವಾರು ಸಾಧಕರು ಸೋಲು-ಗೆಲುವುಗಳನ್ನು ಮೆಟ್ಟಿನಿಂತು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಅರಿಯಬೇಕು. ಧೈರ್ಯವಾಗಿ ಮುನ್ನಡೆಯಬೇಕು ಎಂದರು.

ಹಿರಿಯ ವಿಜ್ಞಾನಿ ಮತ್ತು ಧಾರವಾಡ ಐಐಟಿಯ ಡೀನ್ ಹಾಗೂ ಗೌರವ ಪ್ರಾಧ್ಯಾಪಕ ಪ್ರೊ.ಎಸ್.ಎಂ.ಶಿವಪ್ರಸಾದ್ ಅವರು ಘಟಿಕೋತ್ಸವದ ಭಾಷಣದಲ್ಲಿ ಮಾತನಾಡಿ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಜ್ಞಾನದ ಜ್ಯೋತಿಯಾಗಿ ಬೆಳಗುತ್ತಿದ್ದು, ಯುವಜನರನ್ನು ಸಬಲೀಕರಣಗೊಳಿಸುವ ದೃಷ್ಟಿಯೊಂದಿಗೆ ಸ್ಥಾಪಿತವಾಗಿ, ಹೊಸತನ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ಶೈಕ್ಷಣಿಕ ಉತ್ಕೃಷ್ಟತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದರು.

ಬಳ್ಳಾರಿ ಜಿಲ್ಲೆಯು ಶ್ರೀಮಂತ ಪರಂಪರೆ ಹೊಂದಿದ್ದು, ಶಿಕ್ಷಣ ಮತ್ತು ಉದ್ಯಮದ ನಡುವಿನ ಸಹಜೀವನದ ಸಂಬಂಧವನ್ನು ಗುರುತಿಸಿ, ಪ್ರತಿಭೆಯನ್ನು ಪೋಷಿಸುವಲ್ಲಿ ವಿಶ್ವವಿದ್ಯಾಲಯ ತನ್ನದೇ ಆದ ಪಾತ್ರವನ್ನು ಹೊಂದಿದೆ ಎಂದರು. ದು

ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವ ಅನುಭವದ ಕಲಿಕೆ, ಸ್ವಂತ ಅನುಭವ ಹಾಗೂ ಪ್ರಯೋಗಗಳು ತಂತ್ರಜ್ಞಾನದ ಅನುಗುಣವಾಗಿ ಪಠ್ಯಕ್ರಮವನ್ನು ವಿನ್ಯಾಸ ಮಾಡಬೇಕಿದೆ. ಇದರ ಜೊತೆಗೆ ಮಾನವ ಮತ್ತು ಸಾಮಾಜಿಕ ಮೌಲ್ಯಗಳೊಂದಿಗೆ ಸಂವಹನ, ಸಹಯೋಗ  ಹಾಗೂ ಹೊಂದಾಣಿಕೆಯಂತಹ ಮೃದು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಸಮಾನ ಆದ್ಯತೆ ನೀಡಬೇಕಾಗಿದೆ ಎಂದರು.

ಈ ಭಾಗದಲ್ಲಿ ಉಕ್ಕಿನ ಗಣಿಗಾರಿಕೆ ಮತ್ತು ಉದ್ಯಮ ಉದಯೋನ್ಮುಖ ತಂತ್ರಜ್ಞಾನಗಳಿಂದಾಗಿ ಅಗಾಧವಾದ ರೂಪಾಂತರಗಳಿಗೆ ಒಳಗಾಗುತ್ತಿದ್ದು, ವಿಶ್ವವಿದ್ಯಾಲಯವು ಈ ಅವಕಾಶವನ್ನು ಬಳಸಿಕೊಂಡು ನಿರ್ದಿಷ್ಟವಾಗಿ ಪ್ರದೇಶದ ಬೆಳವಣಿಗೆಗಾಗಿ ಮತ್ತು ಸಾಮಾನ್ಯವಾಗಿ ನವ ಭಾರತದ ಬೆಳವಣಿಗೆಗೆ ಕೊಡುಗೆಯನ್ನು ನೀಡಲು ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್.ಎಸ್.ಎನ್., ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓ ಓಲೇಕಾರ, ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಎಲ್ಲ ನಿಕಾಯದ ಡೀನರು, ಮುಖ್ಯಸ್ಥರು, ಸಂಯೋಜಕರು, ವಿವಿಧ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಗಣ್ಯರು ಹಾಜರಿದ್ದರು.

3 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ: ರಂಗಭೂಮಿ, ಕಲೆ ಮತ್ತು ಸಮಾಜ ಸೇವೆಯಲ್ಲಿ ಸಾಧನೆಗೈದ ಉಮಾಶ್ರೀ, ಕೈಗಾರಿಕೆ ಮತ್ತು ಸಮಾಜ ಸೇವೆ ಗುರುತಿಸಿ ಎಸ್.ಕೆ.ಮೋದಿ ಮತ್ತು ಶಿಕ್ಷಣ ಸೇವೆ ಗುರುತಿಸಿ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕ, ವಿವಿಧ ವಿಭಾಗಗಳ ಒಟ್ಟು 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ವಿತರಿಸಲಾಯಿತು.

ಎಲ್ಲ ವಿಭಾಗಗಳ ಸ್ನಾತಕ ಪದವಿಯ 56 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 69 ಒಟ್ಟು 125 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

03 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಉಮಾ.ಪಿ., ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ನಾಗರಾಜ.ಕೆ.ಬಿ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ದೌಲತ್ ಬಾನು ಪಡೆದುಕೊಂಡರು.

02 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಪಟ್ಟಿ: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದ ಎ.ಕೆ.ಹುಲಿಗೆಮ್ಮ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಿಯಾಂಕ.ಎ., ಭೌತಶಾಸ್ತ್ರ ವಿಭಾಗದ ಪೂಜಾ ಹಿರೇಹಾಳ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರ ವಿಭಾಗದ ಸಾಲುಂಕೆ ಮಿತ್ರಾ ಹಾಗೂ ವೀರಶೈವ ಮಹಾವಿದ್ಯಾಲಯದ ಬಿಎಸ್‌ಸಿ ವಿಭಾಗದ ಶ್ರೇಯಾ.ಬಿ.ಪಿ  ಪಡೆದುಕೊಂಡರು.

Leave a Reply