ಯತೀಂದ್ರ ಸಿದ್ದರಾಮಯ್ಯಗೆ ರೈತರ ಪ್ರತಿಭಟನೆಯ ಬಿಸಿ

2 years ago

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ರೈತರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ ರೈತರು ಮತದಾನ ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.

ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಅವರ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲವೆಡೆ ಬಿರುಸಿನ ಪ್ರಚಾರಕ್ಕೆ ಕೈಗೊಂಡರು.

ಚುನಾವಣಾ ಪ್ರಚಾರಕ್ಕಾಗಿ ಮಲ್ಲುಪುರಕ್ಕೆ ಭೇಟಿ ನೀಡಿದ ಯತೀಂದ್ರ ಅಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವಿಷಯವನ್ನು ತಿಳಿದು ಅಲ್ಲಿಗೆ ಆಗಮಿಸಿ ಅವರ ಅಹವಾಲು ಆಲಿಸಿದರು. ಈ ವೇಳೆ, ಬೇಡಿಕೆಗಳನ್ನು ಈಡೇರಿಸುವಂತೆ ಯತೀಂದ್ರರನ್ನು ರೈತರು ಒತ್ತಾಯಿಸಿದರು.

ಎಲ್ಲವನ್ನು ಆಲಿಸಿದ ಯತೀಂದ್ರ, ಇದನ್ನು ನಮ್ಮ ತಂದೆಯವರ ಗಮನಕ್ಕೆ ತರುತ್ತೇನೆ ಎಂದರು. ಇದನ್ನು ಕೇಳುತ್ತಿದ್ದಂತೆಯೇ ಕುಪಿತಗೊಂಡ ಪ್ರತಿಭಟನಾಕಾರರು, ಇನ್ನೂ ಈ ವಿಚಾರವನ್ನು ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವೇ ಎಂದು ಕೆರಳಿದರು.

ನಮ್ಮ ಬೇಡಿಕೆಯನ್ನು ಈಗಲೇ ಈಡೇರಿಸಿ. ಇಲ್ಲದಿದ್ದರೆ, ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು. ಪ್ರತಿಭಟನಕಾರರಿಗೆ ಉತ್ತರಿಸಲಾಗದೆ ಯತೀಂದ್ರ ಅಲ್ಲಿಂದ ವಾಪಸಾದರು.

Leave a Reply